ಚಪ್ಪಾಳೆ, ಗಂಟೆ, ಜಾಗಟೆ, ದೀಪದ ದೀಪಾವಳಿಯಿಂದ ರೋಗ ಹೋಗದು; ವಿಜ್ಞಾನವೇ ಮದ್ದು!
ವಿಜ್ಞಾನ, ತಂತ್ರಜ್ಞಾನ, ಆಧುನಿಕತೆ ಬೆಳೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿಯೂ ಭಾರತದಲ್ಲಿ ಮೌಢ್ಯ ಹೆಚ್ಚುತ್ತಲೇ ಇರುವುದು ದುರಾದೃಷ್ಟಕರ. ಇಡೀ ಜಗತ್ತನ್ನೇ ಕೊರೊನಾ ಸೋಂಕು ಆವರಿಸಿಕೊಂಡಿದ್ದು, ಸೋಂಕಿನ ನಿಯಂತ್ರಣಕ್ಕಾಗಿ ಹಲವಾರು ದೇಶಗಳು ತಿಣುಕಾಡುತ್ತಿರುವ ಸಂದರ್ಭದಲ್ಲಿ ಭಾರತೀಯರು ಕೊರೊನಾ ಸೋಂಕಿನ ವಿರುದ್ಧ ಭಾರಿಸಿದ್ದು ಚಪ್ಪಾಳೆ, ಗಂಟೆ, ಜಾಗಟೆ, ಚಪ್ಪಾಳೆಯನ್ನು.
ಲೈಟ್ ಹಾರಿಸಿ ದೀಪ ಹಚ್ಚುವುದರಿಂದ ಯಾವ ರೋಗವೂ ವಾಸಿಯಾಗಲಾರದು, ಎದುರಿ ಓಡಿಯೂ ಹೋಗದು ಎಂದುದನ್ನು ವಿದ್ಯಾವಂತರಿಂದ ಹಿಡಿದು ಅವಿದ್ಯಾವಂತರ ವರೆಗೂ, ಅಧಿಕಾರಗಳಿಂದ ಹಿಡಿದು ಪ್ರಧಾನಿಯ ವರೆಗೂ, ಅಭಿಮಾನಿಗಳಿಂದ ಹಿಡಿದು ಸಿನಿಮಾ ಸ್ಟಾರ್ಗಳ ವರೆಗೂ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದ ಸ್ಥಿತಿ ಸದ್ಯ ನಿರ್ಮಾಣವಾಗಿದೆ. ಆದರೆ,ಎಷ್ಟು ಮಂದಿ ಎಚ್ಚೆತ್ತುಕೊಳ್ಳುತ್ತಾರೆ ಎಂಬುದೇ ಯಕ್ಷ ಪ್ರಶ್ನೆ.
ಸಾಮಾನ್ಯರಿಗೆ ಮಾರ್ಗದರ್ಶನ, ಮಾಹಿತಿ ನೀಡಬೇಕಾದ ಮಾಧ್ಯಮಗಳು, ಅಭಿಮಾನಿಗಳು ಫಾಲೋ ಮಾಡುವ ಸಿನಿಮಾ ಸ್ಟಾರ್ಗಳು, ದೀಪದ ಉರಿಗೆ ಕೊರೊನಾ ಸುಟ್ಟು ಬೂದಿಯಾಗುತ್ತದೆ ಎಂದು ಆಳುವ ವರ್ಗ ಎಲ್ಲರಿಗೂ ಕೊರೊನಾ ಪಾಠ ಕಲಿಸುತ್ತಿದೆ. ಸದ್ಯ ಕೊರೊನಾ ವಿರುದ್ದ ಚಪ್ಪಾಳೆ ತಟ್ಟಿದವರಿಗೂ, ದೀಪ ಹೊತ್ತಿಸಿದವರಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
ಸಮಾಜದಲ್ಲಿ ಮುಂಚೂಣಿಯಲ್ಲಿರುವವರು, ಜನ ಫಾಲೋ ಮಾಡುವ ವಿವಿಧ ಕ್ಷೇತ್ರಗಳ ಮುಂದಾಳುಗಳು ಜನರನ್ನು ಇಂದಿನ ವಿಜ್ಞಾನ ಜಗತ್ತಿಗೆ ಜೋಡಣೆಯಾಗಬೇಕಾದ ದಾರಿಯನ್ನು ಮುನ್ನಡೆಸಬೇಕೆ ವಿನಃ, ಅಜ್ಞಾನ, ಅಂಧಕಾರ, ಮೌಢ್ಯದ ಹಿಂದಿನ ಕಾಲಘಟ್ಟಕ್ಕೆ ಎಳೆದೊಯ್ಯಬಾರದು.
ಯಾವುದೇ ಆಸ್ಪತ್ರೆ ಸೌಲಭ್ಯ , ಪ್ರಾಪಂಚಿಕ ಅರಿವು ಇಲ್ಲದ ಕಾಲಘಟ್ಟದಲ್ಲಿ ಉಲ್ಬಣಿಸುವ ಕಾಯಿಲೆಗಳಿಗೆ ನಮ್ಮ ಹಿರಿಯರು ತಮ್ಮ ಮನದ ಸಮಾಧನಕ್ಕೊಅಥವಾ ಕಾಯಿಲೆ ದೂರವಾಗುತ್ತೊ ಎಂಬ ನಂಬಿಕೆಗೊ ಊರ ದೇವತೆಗಳಿಗೆ ಮೊರೆ ಹೋಗುತ್ತಾ, ಬದುಕು ನೂಕುತ್ತಾ ಬಂದಿದ್ದಾರೆ ಹೊರತು! ಅವರ ಕಾಲದ ನಂಬಿಕೆಗೆ ಈ ಕಾಲವೂ ಎಂದು ತಾಳೆ ಹಾಕಬಾರದು.
ಇನ್ನೊಂದು ಮುಖ್ಯ ಸಂಗತಿ ಅರಿಯುವುದಾದರೆ ಬೆಂಕಿಯಂತಹ ಕೆಂಗಣ್ಣಿನ ದೈವಗಳು, ಪವಾಡ ಮಸೀದಿಗಳು, ಸ್ವಯಂ ಘೋಷಿತ ದೇವಮಾನವ, ಬಾಬಾ, ಪಾದ್ರಿ, ಕ್ಷೇತ್ರಗಳಿಗೂ ಲಾಕ್ ಡೌನ್, ಮಾಸ್ಕ್ ಬಂದಾಗಿದೆ. ನಿತ್ಯ ಸಾನೀಟೈಜರ್ ಸಿಂಪಡಣೆ ಆಗುತ್ತಿದೆ. ಇಂತಹ ಹೊತ್ತಲ್ಲಿ ಮನುಷ್ಯನ ದೈವ ನಂಬಿಕ, ವಿಜ್ಞಾನ ಜಗತ್ತನ್ನು ಆಯ್ಕೆ ಮಾಡಿಕೊಳ್ಳುವ ಸಂಧರ್ಭವೂ ಈ ಕಾಲಘಟ್ಟಕ್ಕೆ ಬಂದಾಗಿದೆ. ಇದನ್ನು ಧಾರ್ಮಿಕರು, ದೈವಸ್ಥರು ಹೇಗೆ ಆರಿಸುತ್ತಾರೊ ತಿಳಿಯದು.
ನೆನಪಿರಲಿ. ಭೀಕರ ಕಾಲರಾ, ರೇಬಿಸ್, ಪೋಲಿಯೊ, ಕ್ಷಯ, ಅನೇಕ ಕಾಯಿಲೆಗಳಿಗೆ ವಿಜ್ಞಾನ ಮತ್ತು ವಿಜ್ಞಾನಲೋಕ ಮದ್ದಾಗಿದೆ ಎಂಬುದನ್ನು ಮಾನವ ಪೀಳಿಗೆ ಮರೆಯಬಾರದು. ತಟ್ಟೆ, ಚಪ್ಪಾಳೆ, ಜಾಗಟೆ, ಗಂಟೆ ಬಾರಿಸುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂಬುದನ್ನು ಅರಿಯಬೇಕು.