ಪುಲ್ವಾಮ ರೀತಿಯ ಮತ್ತೊಂದು ದಾಳಿಯನ್ನು ನಿಗ್ರಹಿಸಿದ ಭಾರತೀಯ ಸೇನೆ!

2019ರ ಫೆಬ್ರವರಿಯಲ್ಲಿ ಪುಲ್ವಾಮ ಘಟನೆ ನಡೆದ ಹೆದ್ದಾರಿಯ ಬಳಿಯಲ್ಲೇ ಗುರುವಾರ 52 ಕೆಜಿ ತೂಕದ ಸ್ಪೋಟಕಗಳು ಪತ್ತೆಯಾಗಿದೆ.

ಹೆದ್ದಾರಿಯ ಬಳಿಯಲ್ಲಿದ್ದ ಹಣ್ಣಿನ ತೋಟದಲ್ಲಿ ಭಾರತೀಯ ಸೇನೆ ಗುರುವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಸಿಂಟೆಕ್‌ ಟ್ಯಾಂಕ್‌ನಲ್ಲಿ  ತಲಾ 125 ಗ್ರಾಂ ಸ್ಪೋಟಕವನ್ನು ಹೊಂದಿರುವ 416 ಪ್ಯಾಕೇಟ್‌ಗಳು ಪತ್ತೆಯಾಗಿದ್ದು, ಸುಮಾರು 52 ಕೆಜಿ ತೂಕದ ಸ್ಪೋಟಕ ದೊರೆದಿದೆ ಎಂದು ಸೇನೆ ಹೇಳಿರುವುದಾಗಿ  ಎನ್‌ಡಿಟಿವಿ ವರದಿ ಮಾಡಿದೆ.

ಸ್ಫೋಟಕಗಳನ್ನು “ಸೂಪರ್ 90” ಎಂದು ಅಧಿಕಾರಿಗಳು ಗುರುತಿಸಿದ್ದು, ಅವು ಪತ್ತೆಯಾದ ಸ್ಥಳವು ಹೆದ್ದಾರಿಗೆ ಬಹಳ ಹತ್ತಿರದಲ್ಲಿದೆ ಮತ್ತು 2019 ರ ಪುಲ್ವಾಮಾ ದಾಳಿ ಸ್ಥಳದಿಂದ 9 ಕಿ.ಮೀ. ದೂರದಲ್ಲಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಫೆಬ್ರವರಿ 14 ರಂದು, ಸ್ಫೋಟಕಗಳನ್ನು ಹೊತ್ತ ಕಾರೊಂದು ಸಿಆರ್‌ಪಿಎಫ್ ಸೈನಿಕರಿದ್ದ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ 40 ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದರು. ಜೆಲಾಟಿನ್ ಸ್ಟಿಕ್‌ಗಳ ಜೊತೆಗೆ ಸುಮಾರು 35 ಕೆಜಿ ಆರ್‌ಡಿಎಕ್ಸ್ ಪ್ಲಾಸ್ಟಿಕ್ ಸ್ಫೋಟಕಗಳನ್ನು ದಾಳಿಯಲ್ಲಿ ಬಳಸಲಾಗಿತ್ತು.

ಪುಲ್ವಾಮಾ ದಾಳಿಯ ಹಿಂದಿನ ಪ್ರಮುಖ ಸಂಚುಕೋರ ಮಸೂದ್ ಅಜರ್. ಈತ ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, ಆತನ ಇಬ್ಬರು ಸಹೋದರರಾದ ರೌಫ್ ಅಜ್ಗರ್ ಮತ್ತು ಮೊಹಮ್ಮದ್ ಅಮ್ಮರ್ ಕೂಡ ಈ ಸಂಚಿನಲ್ಲಿ ಭಾಗವಹಿಸಿದ್ದರು ಎಂದು ಎಎನ್‌ಐ ಇತ್ತೀಚೆಗೆ ಚಾರ್ಜ್‌ಶೀಟ್ ಸಲ್ಲಿಸಿದೆ.

ಇದನ್ನೂ ಓದಿ: ಯುದ್ದೋನ್ಮಾದ ಹರಡುವ, ಯುದ್ದ ಮಾಡುವ ಮಾಧ್ಯಮಗಳು ಕಾಣೆಯಾಗಿವೆ!

ಮೊಹಮ್ಮದ್ ಉಮರ್ ಫಾರೂಕ್ ಈ ಪ್ರಕರಣದ ಪ್ರಮುಖ ಸಂಚುಕೋರ ಎಂದು ಅದು ತಿಳಿಸಿದೆ. ಈತನೆ ಆರ್‌ಡಿಎಕ್ಸ್ ಸ್ಫೋಟಕಗಳನ್ನ ಪಾಕಿಸ್ತಾನದ ಗಡಿಯಿಂದ ಕಾಶ್ಮೀರಕ್ಕೆ ತಂದಿದ್ದು, ದಾಳಿಗೆ ಬೇಕಾಗಿದ್ದ ಐಇಡಿ ಬಾಂಬ್‌ಗಳನ್ನು ಸ್ಥಳೀಯವಾಗಿ ತಯಾರಿಸಲು ಈತನ ಪಾತ್ರ ಇದೆ ಎನ್ನಲಾಗಿದೆ.

13,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಜೈಶ್ ಭಯೋತ್ಪಾದಕರು ಮತ್ತೊಂದು ದಾಳಿ ನಡೆಸಲು ಯೋಜಿಸಿದ್ದಾರೆ ಮತ್ತು ಫಿಡಾಯೀನ್ ಅಥವಾ ಆತ್ಮಾಹುತಿ ಬಾಂಬರ್‌ಗಳನ್ನು ಸಹ ಸಿದ್ಧಪಡಿಸಿದ್ದಾರೆ ಎಂದು ತಿಳಿಸಿತ್ತು. ಆದರೆ ಬಾಲಕೋಟ್‌ನಲ್ಲಿ ಭಾರತದ ವಾಯುದಾಳಿಯಿಂದ ಅದಕ್ಕೆ ತಡೆಯೊಡ್ಡಿದರು.

ಅದಾಗ್ಯೂ, ಫೆ.14ರ ಪುಲ್ವಾಮಾ ದಾಳಿಯ ಕುರಿತು ಪೊಲೀಸರಿಗೆ, ಸೈನ್ಯಕ್ಕೆ ಸಾಕಷ್ಟು ಮುಂಚೆಯೇ ಮಾಹಿತಿ ಇತ್ತು ಎಂಬ ಸುದ್ದಿ ಈ ಮುಂಚೆಯೇ ಹರಿದಾಡಿತ್ತು. ಆದರೆ, ದಿ ಕ್ವಿಂಟ್ ವೆಬ್ ಪೋರ್ಟಲ್ ನಿರ್ದಿಷ್ಟವಾದ ದಾಖಲೆಗಳನ್ನು ಪಡೆದು ಅದು ನಿಜ ಎಂಬ ಆಘಾತಕಾರಿ ಸುದ್ದಿಯನ್ನು ಪ್ರಕಟಿಸಿತ್ತು. ‘ಹೊರಗಿನಿಂದ ಬಂದ ಭಯೋತ್ಪಾದಕರು’ ಪುಲ್ವಾಮಾ ಜಿಲ್ಲೆಯ ಆವಂತಿಪುರ ಪ್ರದೇಶಕ್ಕೆ ಬಂದಿದ್ದಾರೆ ಮತ್ತು ಅವರು ಸದ್ಯದಲ್ಲೇ ಭಾರೀ ದೊಡ್ಡ ಆತ್ಮಾಹುತಿ ದಾಳಿ ನಡೆಸುವ ಸಾಧ್ಯತೆ ಇದೆ ಎಂಬುದು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಜನವರಿ 24ಕ್ಕೇ ಮಾಹಿತಿ ಇತ್ತು ಎಂದು ಕೆಲವು ಆರೋಪಗಳು ಕೇಳಿಬಂದಿದೆ.

ಪುಲ್ವಾಮಾ ದಾಳಿಗೆ ವರ್ಷ ತುಂಬಿದ ಸಂದರ್ಭದಲ್ಲಿ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸರ್ಕಾರಕ್ಕೆ 3 ಪ್ರಶ್ನೆಗಳನ್ನು ಕೇಳಿದ್ದರು.

ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ “ಇಂದು ನಾವು ಪುಲ್ವಾಮಾ ದಾಳಿಯಲ್ಲಿ ನಮ್ಮ 40 ಸಿಆರ್‌ಪಿಎಫ್ ಹುತಾತ್ಮರನ್ನು ನೆನಪಿಸಿಕೊಳ್ಳುತ್ತಾ, ಕೆಲವು ಪ್ರಶ್ನೆಗಳನ್ನು ಕೇಳೋಣ:

1. ದಾಳಿಯಿಂದ ಹೆಚ್ಚು ಲಾಭ ಪಡೆದವರು ಯಾರು?

2. ದಾಳಿಯ ವಿಚಾರಣೆಯ ಫಲಿತಾಂಶ ಏನು?

3. ಭದ್ರತಾ ಲೋಪ ಎಸಗುವ ಮೂಲಕ ದಾಳಿಗೆ ಅವಕಾಶ ನೀಡಿದ್ದಕ್ಕಾಗಿ ಬಿಜೆಪಿ ಸರ್ಕಾರದಲ್ಲಿ ಯಾರು ಹೊಣೆಗಾರರಾಗಿದ್ದಾರೆ?” ಎಂದು ಪ್ರಶ್ನೆ ಮಾಡಿದ್ದರು.

ಅಷ್ಟೇ ಅಲ್ಲದೆ, ಫೆಬ್ರುವರಿ 5ರಂದು ಲೋಕಸಭೆಯಲ್ಲಿ ಮತ್ತು ಫೆಬ್ರುವರಿ 7ರಂದು ರಾಜ್ಯಸಭೆಯಲ್ಲಿ ಗೃಹ ಸಚಿವಾಲ ನೀಡಿದ ಅಂಕಿಅಂಶಗಳ ಪ್ರಕಾರ, 2014-18ರ ಅವಧಿಯಲ್ಲಿ ಸೈನಿಕರ ಹತ್ಯೆ, ನಾಗರಿಕರ ಹತ್ಯೆ ಪ್ರಮಾಣ ಏರಿಕೆಯಾಗಿದೆ. 2014-18ರ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಒಟ್ಟು 1,708 ಭಯೋತ್ಪಾದನಾ ಕೃತ್ಯಗಳು ನಡೆದಿವೆ. ಹಾಗೆಯೇ ಉಗ್ರ ನುಸುಳುವಿಕೆ ಪ್ರಮಾಣವೂ ಹೆಚ್ಚಿದೆ ಎಂಬುದು ಗಮನಹರಿಸಬೇಕಾದ ಅಂಶವಾಗಿದೆ.


ಇದನ್ನೂ ಓದಿ: Fact Check: ಲಂಡನ್‌ ಮ್ಯೂಸಿಯಂನಲ್ಲಿದೆಯಾ ಛತ್ರಪತಿ ಶಿವಾಜಿ ಚಿತ್ರ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights