ಮೋದಿ ಸರ್ಕಾರದ ಕೃಷಿ ನೀತಿ ರೈತ ವಿರೋಧಿಯಾಗಿದೆ ಎಂದು ಸಚಿವ ಸ್ಥಾನಕ್ಕೆ ಕೇಂದ್ರ ಸಚಿವೆ ರಾಜೀನಾಮೆ!
ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಹೊಸ ಕೃಷಿ ನೀತಿಯು ರೈತ ವಿರೋಧಯಾಗಿದೆ ಎಂದು ವಿರೋಧಿಸಿರುವ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವೆ ಹರ್ಸಿಮ್ರತ್ಕೌರ್ ಬಾದಲ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಬಾದಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿರುವ ಭಾರತದ ರಾಷ್ಟ್ರಪತಿ ರಾಮ್ನಾಥ್ ಕೊವಿಂದ್ ಅವರು, ಆ ಸಚಿವಾಲಯದ ಹೆಚ್ಚುವರಿ ಉಸ್ತುವಾರಿಯನ್ನಾಗಿ ನರೇಂದ್ರ ಸಿಂಗ್ ಅವರನ್ನು ನೇಮಿಸಿ ನಿರ್ದೇಶನ ಹೊರಡಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಭಾರತದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಯವರ ಸಲಹೆಯ ಮೇರೆಗೆ ಬಾದಲ್ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ. ಸಂವಿಧಾನದ 75 ನೇ ಪರಿಚ್ಛೇದ (2) ರ ಅಡಿಯಲ್ಲಿ ತಕ್ಷಣದಿಂದ ರಾಜೀನಾಮೆ ಅಂಗೀಕಾರವಾಗಿದೆ” ಎಂದು ಶುಕ್ರವಾರ ಹೊರಡಿಸಿದ ಹೇಳಿಕೆ ತಿಳಿಸಿದೆ.
ಇದಲ್ಲದೆ, ಕ್ಯಾಬಿನೆಟ್ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಹೆಚ್ಚುವರಿ ಉಸ್ತುವಾರಿಯನ್ನು ವಹಿಸಬೇಕೆಂದು ಕೋವಿಂದ್ ನಿರ್ದೇಶಿಸಿದ್ದಾರೆ.
Read Also: ಈರುಳ್ಳಿ ರಫ್ತು ನಿಷೇಧ: ಬಂದರಿನಲ್ಲೇ ಬಂದ್ ಆದ ಈರುಳ್ಳಿ: ರಫ್ತುದಾರರಿಗೆ ಬಿಕ್ಕಟ್ಟು!
ಕೃಷಿ ಮಾರುಕಟ್ಟೆಗಳನ್ನು ಉದಾರೀಕರಣಗೊಳಿಸುವ ಉದ್ದೇಶದಿಂದ ಮಂಡಿಸಲಾಗಿರುವ ಮಸೂದೆಯನ್ನು ವಿರೋಧಿಸಿ ಹರ್ಸಿಮ್ರತ್ ಕೌರ್ ಬಾದಲ್ ಗುರುವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
“ರೈತ ವಿರೋಧಿ ಸುಗ್ರೀವಾಜ್ಞೆ ಮತ್ತು ಮಸೂದೆಯನ್ನು ವಿರೋಧಿಸಿ ನಾನು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ. ರೈತರೊಂದಿಗೆ ಅವರ ಮಗಳು ಮತ್ತು ಸಹೋದರಿಯಂತೆ ನಿಲ್ಲಲು ಹೆಮ್ಮೆಪಡುತ್ತೇನೆ” ಎಂದು ಬಾದಲ್ ಟ್ವೀಟ್ ಮಾಡಿದ್ದಾರೆ.
ಎನ್ ಡಿಎ ಮಿತ್ರಪಕ್ಷವಾಗಿರುವ ಶಿರೋಮಣಿ ಅಕಾಲಿದಳ ಪಕ್ಷದ ಹರ್ಸಿಮ್ರತ್ ಕೌರ್ ಬಾದಲ್ ಅವರು ಆಹಾರ ಸಂಸ್ಕರಣೆ ಸಚಿವರಾಗಿದ್ದರು.ಕೇಂದ್ರ ಸರ್ಕಾರ ಮೊನ್ನೆಯಷ್ಟೇ ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದ್ದ ಹೊಸ ಕೃಷಿ ಮಸೂದೆಗೆ ಪಂಜಾಬ್ ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪರಿಣಾಮ ಕೇಂದ್ರ ಸಚಿವ ಸ್ಥಾನಕ್ಕೆ ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಆರ್ಸಿಬಿ ತಂಡದಲ್ಲಿ ಸ್ತ್ರೀಶಕ್ತಿ: ಐಪಿಎಲ್ ಇತಿಹಾಸದಲ್ಲೇ ಹೆಮ್ಮಯ ಮೊದಲ ಪ್ರಯೋಗ!
ಹೊಸ ಕೃಷಿ ಮಸೂದೆಯು ರೈತ ವಿರೋಧಿಯಾಗಿದ್ದು, ಅದನ್ನು ನಾವು ವಿರೋಧಿಸುತ್ತೇವೆ. ರೈತರ ಆತಂಕಗಳನ್ನು ಪರಿಹರಿಸಲು ನಾವು ಮತ್ತೆ ಮತ್ತೆ ಸರ್ಕಾರವನ್ನು ಕೇಳಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ. ಹಾಗಾಗಿ ಶಿರೋಮಣಿ ಅಕಾಲಿ ದಳ (ಎಸ್ಎಡಿ) ಕೃಷಿ ಕಾನೂನನ್ನು ವಿರೋಧಿಸುತ್ತದೆ. ಆದರೂ ಆಡಳಿತಾರೂಢ ಎನ್ಡಿಎ ಭಾಗವಾಗಿ ಪಕ್ಷವು ಮುಂದುವರೆಯುತ್ತದೆ ಎಂದು ಎಸ್ಎಡಿ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಭೂಭಾಗವನ್ನು ತನ್ನ ನಕ್ಷೆಯಲ್ಲಿ ಸೇರಿಸಿಕೊಂಡಿರುವ ಪಾಕಿಸ್ಥಾನ: SCO ಸಭೆಯಿಂದ ಹೊರನಡೆದ ಭಾರತ!