ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಇನ್ನೂ ಕೂಡಿಬಂದಿಲ್ಲ ಮತ ಮುಹೂರ್ತ….
ಉಪಚುನಾವಣೆಯ ನಿರೀಕ್ಷೆಯಲ್ಲಿದ್ದ ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಇನ್ನೂ ಮತ ಮುಹೂರ್ತ ಕೂಡಿಬಂದಿಲ್ಲ. ಚುನಾವಣಾ ಆಯೋಗ ಶುಕ್ರವಾರ ಬಿಹಾರ ವಿಧಾನಸಭೆಗಷ್ಟೇ ದಿನಾಂಕ ಘೋಷಿಸಿದ್ದು, ಇದರ ಜೊತೆಗೇ ಉಪಚುನಾವಣೆಗಳು ನಡೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಇತ್ತೀಚೆಗೆ ಶಾಸಕ ಸತ್ಯನಾರಾಯಣ ಹಾಗು ನಾರಾಯಣ ರಾವ್ ಅವರ ನಿಧನದಿಂದಾಗಿ ಶಿರಾ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಅನಿವಾರ್ಯವಾಗಿದೆ. ಇದರ ಜೊತೆಗೆ ಮಸ್ಕಿ ಹಾಗೂ ರಾಜರಾಜೇಶ್ವರಿ ಕ್ಷೇತ್ರಗಳಲ್ಲಿ ಸಹ ಮರು ಚುನಾವಣೆ ನಡೆಯಬೇಕಿದೆ. ಶಾಸಕರ ರಾಜೀನಾಮೆ ಕಾರಣ ಈ ಎರಡು ಸ್ಥಾನ ತೆರವಾಗಿದ್ದರೂ ಕಾನೂನು ತೊಡಕಿನಿಂದಾಗಿ ಚುನಾವಣೆ ನಡೆದಿಲ್ಲ.
ಯಡಿಯೂರಪ್ಪನವರ ಸರಕಾರವನ್ನು ಅಸ್ತಿತ್ವಕ್ಕೆ ತರಲು ತಮ್ಮ ಎಂಎಲ್ಎ ಸ್ಥಾನಗಳಿಗೆ ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲರು ರಾಜೀನಾಮೆ ನೀಡಿದ್ದ ಕಾರಣ ಆರ್ಆರ್ ನಗರ ಹಾಗೂ ಮಸ್ಕಿ ಕ್ಷೇತ್ರಗಳು ತೆರವಾಗಿದೆ. ಮಸ್ಕಿ ಹಾಗೂ ರಾಜರಾಜೇಶ್ವರಿ ನಗರದಲ್ಲಿ ತಕರಾರು ಇನ್ನೂ ಊರ್ಜಿತವಿರುವುದರಿಂದ ಮತ ಚಲಾವಣೆಗೆ ಆಯೋಗ ಅನುವು ಮಾಡಿಕೊಟ್ಟಿಲ್ಲ.
ಶಿರಾದಲ್ಲಿ ಚುನಾವಣೆಗೂ ಮುನ್ನವೇ ಕಣ ರಂಗೇರಿದ್ದು, ಮೂರೂ ಪಕ್ಷಗಳಲ್ಲಿ ಪೈಪೋಟಿ ಜೋರಾಗಿದೆ. ಜೆಡಿಎಸ್ನಿಂದ ಸತ್ಯನಾರಾಯಣ ಅವರ ಮಗನಿಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಕಾಂಗ್ರೆಸ್ನಲ್ಲಿ ಜಯಚಂದ್ರ ಅವರನ್ನೇ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆ ಮಾಡಲಾಗಿದ್ದು. ಬಿಜೆಪಿ ಸೂಕ್ತ ಅಭ್ಯರ್ಥಿಯ ತಲಾಶೆಯಲ್ಲಿದೆ.