ರಾಮ-ಹಿಂದೂತ್ವದಿಂದ ಏನೂ ನೆಟ್ಟಗಾಗಲ್ಲ; ನಾವು ಅಕ್ಕ-ತಂಗಿಯರನ್ನು ಕಳೆದುಕೊಳ್ಳುತ್ತಿದ್ದೇವೆ: ವೈಎಸ್‌ವಿ ದತ್ತ

ರಾಮ, ಅಯೋಧ್ಯೆ, ಹಿಂದೂತ್ವದಿಂದಾಗಿ ಪ್ರಪಂಚವೇ ನೆಟ್ಟಗಾಗಿ ಬಿಡುತ್ತದೆ ಎಂದು ಯುವಜನರು ಭಾವಿಸಿದ್ದಾರೆ. ಆದರೆ, ಇವುಗಳಿಂದ ಯಾವುದೂ ನೆಟ್ಟಗಾಗುವುದಿಲ್ಲ. ಇದರಿಂದ ನಮ್ಮ ರಾಜಕಾರಣಿಗಳಷ್ಟೇ ನೆಟ್ಟಗಾಗ್ತಾರೆ. ಇಂತಹ ಭಿನ್ನಾಭಿಪ್ರಾಯಗಳಿಂದಾಗಿ ನಾವು ನಮ್ಮ ಅಕ್ಕ-ತಂಗಿಯರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದ್ದಾರೆ.

ಮರ್ಯಾದೆ ಪುರುಷೋತ್ತಮ ರಾಮ, ನಮ್ಮದು ರಾಮರಾಜ್ಯ ಎನ್ನುವ ಉತ್ತರ ಪ್ರದೇಶದಲ್ಲಿ ರಾಮ ಮಂದಿರ ಕಟ್ಟಿ ಸಂಭ್ರಮಿಸುತ್ತಾರೆ. ಆದರೆ, ಅದೇ ರಾಜ್ಯದಲ್ಲಿ ದಲಿತ ಹೆಣ್ಣು ಮಗಳನ್ನು ಅತ್ಯಾಚಾರ ಮಾಡಿ, ಬರ್ಬರವಾಗಿ ಕೊಂದಿದ್ದಾರೆ. ಶಿಕ್ಷೆಯನ್ನು ತಪ್ಪಿಸುವುದಕ್ಕೆ ರಾತ್ರೋರಾತ್ರಿ ಕುಟುಂಬವನ್ನೂ ಕೂಡಿಟ್ಟು ಸುಟ್ಟುಹಾಕುತ್ತಾರೆ. ರಾಮ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಎಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಹೀನಕೃತ್ಯಕ್ಕೆ ಸರ್ಕಾರವೇ ಬೆಂಬಲವಾಗಿ ನಿಲ್ಲುತ್ತದೆ. ಇಂತಹ ಸರ್ಕಾರವನ್ನು ಮನುಷ್ಯ ಸರ್ಕಾರ ಎನ್ನಬೇಕೋ ಅಥವಾ ಮೃಗೀಯ ಸರ್ಕಾರ ಎನ್ನಬೇಕೋ ಗೊತ್ತಾಗುತ್ತಿಲ್ಲ. ಈ ಕೃತ್ಯದಿಂದ ದೇಶವೇ ವಿಚಲಿತಗೊಂಡಿದೆ ಎಂದು ಅವರು ಹೇಳಿದ್ದಾರೆ.

ರಾಮ, ಅಯೋಧ್ಯೆ, ಹಿಂದುತ್ವ ಅಂದರೆ ಪ್ರಪಂಚ ನೆಟ್ಟಗಾಗುತ್ತದೆ ಎಂದು ಭಾವಿಸಿರುವ ಯುವಜನರಿಗೆ ನಾವು ತಿಳುವಳಿಕೆ ನೀಡಬೇಕಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಹತ್ರಾಸ್‌ ಅತ್ಯಾಚಾರ: ಎಸ್‌ಪಿ, ಡಿಎಸ್‌ಪಿ, ಎಸ್‌ಐ ಅಮಾನತಿಗೆ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights