ದಲಿತ ಶಾಸಕನ ಅಂತರ್ಜಾತಿ ವಿವಾಹ: ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ತಂದೆ ವಿರುದ್ಧ FIR
ತಮಿಳುನಾಡಿನ ಕಲಕುರಿಚಿ ಕ್ಷೇತ್ರದ ದಲಿತ ಶಾಸಕ ಪ್ರಭು ಎಂಬುವವರು ಸೌಂದರ್ಯ ಎಂಬ 19 ವರ್ಷದ ಯುವತಿಯನ್ನು ವಿವಾಹವಾಗಿದ್ದಾರೆ. ಅವರ ವಿವಾಹವನ್ನು ವಿರೋಧಿಸಿ ಯುವತಿಯ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 309ರ ಅಡಿಯಲ್ಲಿ ಆತ್ಮಹತ್ಯೆ ಯತ್ನ ಪ್ರಕರಣದಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಎಐಎಡಿಎಂಕೆ ಪಕ್ಷದ ಶಾಸಕ ಪ್ರಭು ಮತ್ತು ಸೌಂದರ್ಯ ಅವರದ್ದು ಅಂತರ್ಜಾತಿ ವಿವಾಹವಾಗಿದ್ದು, ಸೌಂದರ್ಯ ಮೇಲ್ಜಾತಿಯ ಕುಟುಂಬದವರಾಗಿದ್ದಾರೆ. ಶಾಸಕ ಪ್ರಭು ದಲಿತ ಕುಟುಂಬದವರಾಗಿದ್ದಾರೆ. ಇವರಿಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸಿದ್ದು, ಆಗಸ್ಟ್ 05ರಂದು ವಿವಾಹವಾಗಿದ್ದಾರೆ.
ಅಕ್ಟೋಬರ್ 5ರ ಸೋಮವಾರ ಬೆಳಗ್ಗೆ ಸೌಂದರ್ಯ ತಂದೆ ಸ್ವಾಮಿನಾಥನ್ ಅವರು ತನ್ನ ಮಗಳನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಮದುವೆ ನಡೆಯುತ್ತಿದ್ದ ಪ್ರಭು ಅವರ ಮನೆಗೆ ಬಂದು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
15 ವರ್ಷಗಳಿಂದ ನಮ್ಮ ಕುಟುಂಬದೊಂದಿಗೆ ಪ್ರಭು ಸ್ನೇಹ ಸಂಬಂಧ ಹೊಂದಿದ್ದು, ಕಳೆದ ನಾಲ್ಕ ವರ್ಷಗಳಿಂದ ನನ್ನ ಮಗಳನ್ನು ಪ್ರೀತಿಸುತ್ತಿದ್ದ. ಆವಾಗ ನನ್ನ ಮಗಳಿನ್ನೂ ಅಪ್ರಾಪ್ತೆಯಾಗಿದ್ದಳು. ನನಗೆ ಜಾತಿಯ ಸಮಸ್ಯೆ ಇಲ್ಲ. ಇಬ್ಬರ ನಡುವಿನ ವಯಸ್ಸಿನ ಅಂತರ ಹೆಚ್ಚಿರುವುದೇ ಸಮಸ್ಯೆ. ಹಾಗಾಗಿ ನಾವು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದೆವು. ಶಾಸಕ ಪ್ರಭು ನಯವಾದ ಮಾತುಗಳಿಂದ ನನ್ನ ಅಕ್ಟೋಬರ್ 1ರ ಸಂಜೆ 4ರ ಸಮಯದಲ್ಲಿ ಮಗಳನ್ನು ಅಪಹರಿಸಿದ್ದಾನೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಖೈರ್ಲಾಂಜಿಯಿಂದ ಹತ್ರಾಸ್ವರೆಗೆ ದಲಿತರ ಮೇಲಿನ ಅತ್ಯಾಚಾರ ಮತ್ತು ದಮನದ ಕಥನ!
ಯುವತಿಯ ತಂದೆಯ ಆರೋಪದ ಬಳಿಕ ಶಾಸಕ ಪ್ರಭು ಮತ್ತು ಸೌಂದರ್ಯ ಅವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ನಾನು ಸೌಂದರ್ಯಳನ್ನು ಅಪಹರಿಸಿ ಮತ್ತು ಬೆದರಿಸಿ, ಬಲವಂತವಾಗಿ ಮದುವೆಯಾಗಿಲ್ಲ. ನಾವು ಪರಸ್ಪರ ಪ್ರೀತಿಸಿ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದೇವೆ. ಮದುವೆ ಮಾಡಿಕೊಳ್ಳಲು ಸೌಂದರ್ಯ ಕುಟುಂಬದವರು ಅನುಮತಿ ನೀಡಲಿಲ್ಲ. ಆದರೆ, ಬಳಿಕ ನಮ್ಮ ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದೇವೆ” ಎಂದು ಪ್ರಭು ಹೇಳಿದ್ದಾರೆ.
ಮದುವೆ ಸಮಾರಂಭ ಸ್ಥಳದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಸೌಂದರ್ಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆಡಿದ್ದಾರೆ. ಅಲ್ಲದೆ, ಭಾರತೀಯ ದಂಡ ಸಂಹಿತೆ ಸೆಕ್ಷನ್ 309ರ ಅಡಿಯಲ್ಲಿ ಆತ್ಮಹತ್ಯೆ ಯತ್ನ ಪ್ರಕರಣದಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ದಲಿತ ಮುಖಂಡ ಶಕ್ತಿ ಮಲಿಕ್ ಹತ್ಯೆ ಪ್ರಕರಣ : ಆರ್ಜೆಡಿ ಮುಖಂಡರಾದ ತೇಜಶ್ವಿ, ತೇಜ್ ಪ್ರತಾಪ್ ವಿರುದ್ಧ ಎಫ್ಐಆರ್!