ಹತ್ರಾಸ್ ಸಾವಿಗೀಡಾದ ಯುವತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಮುಖಂಡ
ಸಾಮೂಹಿಕ ಅತ್ಯಾಚಾರ ಮತ್ತು ಭೀರಕ ಹಲ್ಲೆಯಿಂದ ಸಾವನ್ನಪ್ಪಿದ್ದ ಹತ್ರಾಸ್ನ ಯುವತಿಯ ಪ್ರಕರಣದಲ್ಲಿ ಇಡೀ ದೇಶವೇ ಸರ್ಕಾರದ ವಿರುದ್ಧ ಕಿಡಿಕಾರುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಮಾತನಾಡಿರುವ ಬಿಜೆಪಿ ನಾಯಕನೊಬ್ಬ “ಯುವತಿಯೇ ತನ್ನ ಗೆಳೆಯನನ್ನು ಹೊಲಕ್ಕೆ ಕರೆಸಿಕೊಂಡಿರಬೇಕು, ಈ ಸಮಯದಲ್ಲಿ ಅವರು ಸಿಕ್ಕಿಬಿದ್ದಿರಬಹುದು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನವಾಬ್ಗಂಜ್ ಪುರಸಭೆಯ ಮಾಜಿ ಅಧ್ಯಕ್ಷ ರಂಜೀತ್ ಶ್ರೀವಾಸ್ತವ ಹತ್ರಾಸ್ ಘಟನೆ ಅತ್ಯಾಚಾರ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ. “ಈ ರೀತಿ ಸಾಯುವವರು ಹೊಲಗಳಲ್ಲಿ, ಕಾಲುವೆಗಳಲ್ಲಿ, ಕಾಡಿನಲ್ಲಿ ಯಾಕೆ ಸಿಗುತ್ತಾರೆ. ಈ ಯುವತಿಯೇ ತನ್ನ ಗೆಳೆಯನನ್ನು ಹೊಲಕ್ಕೆ ಕರೆಸಿಕೊಂಡಿರಬೇಕು” ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ರೀವಾಸ್ತವ ಅವರು ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಮಥುರಾದ ಮಾಜಿ ಸಂಸದ ಜಯಂತ್ ಚೌಧರಿ, “ಇಂತಹ ಮೂರ್ಖತನದ, ಜಾತಿವಾದಿ, ಹುಚ್ಚುಚ್ಚಾಗಿ ಮಾತನಾಡುವವರು ಬಿಜೆಪಿಯಲ್ಲಿ ಮಾತ್ರ ಯಾಕೆ ಸಿಗುತ್ತಾರೆ” ಎಂದು ಕಿಡಿಕಾರಿದ್ದಾರೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ: https://twitter.com/jayantrld/status/1313517300486533121?s=20
ಶ್ರೀವಾಸ್ತವ ಮೂವರು ಗಂಡು ಮಕ್ಕಳ ತಂದೆಯಾಗಿದ್ದು, ಅವರಲ್ಲಿ ಒಬ್ಬ ಉತ್ತರ ಪ್ರದೇಶ ಬಿಜೆಪಿಯ ಯುವ ವಿಭಾಗದ ಸದಸ್ಯರಾಗಿದ್ದಾರೆ.
ಮೇವನ್ನು ಸಂಗ್ರಹಿಸಲು ಹೊಲಕ್ಕೆ ಹೋಗಿದ್ದ ದಲಿತ ಯುವತಿಯನ್ನುha ನಾಲ್ವರು ಮೇಲ್ಜಾತಿಯ ಯುವಕರು ಅತ್ಯಾಚಾರ ಮಾಡಿ ಚಿತ್ರಹಿಂಸೆ ನೀಡಿದ್ದರು. ಇದರಿಂದ ಯುವತಿಯ ಬೆನ್ನು ಮೂಳೆ, ಕುತ್ತಿಗೆಯ ಮೂಳೆಗಳು ಮುರಿದು ಆಕೆ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದರು. ದೆಹಲಿ ಆಸ್ಪತ್ರೆಯಲ್ಲೇ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.ಈ ಘಟನೆ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಸುಪ್ರೀಂ ಕೋರ್ಟ್ ಘಟನೆಯನ್ನು “ಭಯಾನಕ” ಎಂದು ಕರೆದಿತ್ತು.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ: ಆರೋಪಿಗಳನ್ನು ಬೆಂಬಲಿಸಲು ಮೇಲ್ಜಾತಿಯವರ ಸಭೆ ಕರೆದ ಬಿಜೆಪಿ ಮಾಜಿ ಶಾಸಕ!