ಹಣ ಅಕ್ರಮ ಸಾಗಾಟ: ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಕೆಶಿ ಸಂಬಂಧಿಗಳ ವಿಚಾರಣೆಗೆ ಹೈಕೋರ್ಟ್ ಸೂಚನೆ!
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಂಬಂಧಿಕರು ಹಾಗೂ ಪ್ರಕರಣದಲ್ಲಿನ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಕ್ಕೆ ದಿಲ್ಲಿ ಹೈಕೋರ್ಟ್ ಸೂಚಿಸಿದೆ.
ಹಣ ಅಕ್ರಮ ಸಾಗಾಟ ಪ್ರಕರಣಗಳಲ್ಲಿ ಆರೋಪಿಯಾಗಿರುವ ಡಿಕೆ ಶಿವಕುಮಾರ್ ಅವರ ಪ್ರಕರಣದ ಸಾಕ್ಷಿಗಳಿಗೆ ವಿಚಾರಣೆ ಹಾಜರಾಗುವಂತೆ ಇ.ಡಿ ಹೊರಡಿಸಿದ ಸಮನ್ಸ್ ಪ್ರಶ್ನಿಸಿ ಡಿಕೆಶಿ ಸಂಬಂಧಿಕರು ಮತ್ತು ಆರೋಪಿತರು ಏಳು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಯೋಗೇಶ್ ಖನ್ನಾ ಅವರು ಶುಕ್ರವಾರ ಅರ್ಜಿಗಳ ವಿಚಾರಣೆ ನಡೆಸಿದೆ. ಅರ್ಜಿದಾರರು ಕರ್ನಾಟಕ ಮೂಲದವರಾಗಿದ್ದರಿಂದ ತನಿಖಾಧಿಕಾರಿಗಳು ಹಾಗೂ ಅರ್ಜಿದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಬೇಕು. ಇದರಿಂದ ಅಡತಡೆಗಳು ಉಂಟಾಗುವುದಿಲ್ಲ ಎಂದು ನಿರ್ದೇಶಿಸಿದ್ದಾರೆ.
ಸಿಆರ್ಪಿಸಿ ನಿಬಂಧನೆಗಳನ್ನು ಉಲ್ಲಂಸಿ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಅರ್ಜಿದಾರರಾದ ರಾಜೇಶ್, ಗಂಗಾಸರನ್, ಜಯಶೀಲಾ, ಚಂದ್ರ ಜಿ, ಕೆ.ವಿ. ಲಕ್ಷ್ಮಮ್ಮ, ಮೀನಾಕ್ಷಿ ಮತ್ತು ಹನುಮಂತಯ್ಯ ಜಿ. ಪರವಾಗಿ ಹಿರಿಯ ವಕೀಲ ಮೋಹಿತ್ ಮಾಥುರ್ ವಾದಿಸಿದರು. ಅಲ್ಲದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿದಾರರು ವಿಚಾರಣೆಗೆ ಸಹಕರಿಸುತ್ತಾರೆ ಎಂದು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಅಮಿತ್ ಮಹಾಜನ್ ಅವರು “ಅರ್ಜಿದಾರರಿಂದ ದಾಖಲೆಗಳನ್ನು ಪಡೆಯಲು ಸಮನ್ಸ್ ನೀಡಲಾಗಿತ್ತು. ಆದರೆ ಕೆಲವು ದಾಖಲೆಗಳಲ್ಲಿ ಸ್ಪಷ್ಟೀಕರಣದ ಅಗತ್ಯವಿರುವುದರಿಂದ ಈಗ ಅವರ ಉಪಸ್ಥಿತಿ ಅವಶ್ಯಕತೆ ಇದೆ. ಮುಂದಿನ ವಿಚಾರಣೆ ನ. 19 ಕ್ಕೆ ನಿಗದಿಯಾಗಿದೆ. ಅಲ್ಲಿಯವರೆಗೂ ಅರ್ಜಿದಾರರ ಹಾಜರಿಗೆ ಒತ್ತಾಯಿಸುವುದಿಲ್ಲ” ಎಂದು ತಿಳಿಸಿದರು.
ಇದನ್ನೂ ಓದಿ: ಬಿಜೆಪಿ ಸಂಧಾನಕ್ಕೆ ಬಗ್ಗದ ಬಂಡಾಯಗಾರರು: ಚುಣಾವಣೆಯಲ್ಲಿ ಸ್ವತಂತ್ರ್ಯ ಸ್ಪರ್ಧೆ ಖಚಿತ!