ಜೆಡಿಎಸ್ ಪಕ್ಷವನ್ನು ಮುಗಿಸಲು ಸಿದ್ದರಾಮಯ್ಯ, ಡಿಕೆಶಿ ಪಣತೊಟ್ಟಿದ್ದಾರೆ: ಹೆಚ್ಡಿಕೆ
ಕರ್ನಾಟಕದಲ್ಲಿ ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಆರ್ಆರ್ನಗರ ಮತ್ತು ಶಿರಾದಲ್ಲಿ ನ.3ರಂದು ಉಪಚುನಾವಣೆ ಡನೆಯಲಿದ್ದು, ಇನ್ನು ಮೂರು ವಾರಗಳಷ್ಟೆ ಬಾಕಿ ಇವೆ. ಈ ವೇಳೆ ಮೂರು ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಗೆಲುವು ಸಾಧಿಸಲು ಸೆಣೆಸಾಡುತ್ತಿವೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪಣತೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ಸಮಾಧಿಯಾಗಲಿದೆ ಎಂದು ಕಾಂಗ್ರೆಸ್ ಮುಖಂಡರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಹೆಚ್ಡಿಕೆ, ಸಿದ್ದರಾಮಯ್ಯ ಜೆಡಿಎಸ್ನ 7 ಶಾಸಕರನ್ನು ಕಾಂಗ್ರೆಸ್ಗೆ ಕರೆದೊಯ್ದರು. ಆದರೂ ಜೆಡಿಎಸ್ ಇನ್ನೂ ಸಮರ್ಥವಾಗಿದೆ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಕೂಡಲೇ ಸಮಾಜದ (ಒಕ್ಕಲಿಗ) ಮುಖಂಡರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಅವರಿಗೆ ಹಿಂದೆ ಯಾಕೆ ಸಮಾಜ ನೆನಪಾಗಲಿಲ್ಲ. ಎಂದು ಡಿಕೆಶಿವಕುಮಾರ್ ಅವರನ್ನು ಹೆಸರು ಹೇಳದೇ ಪ್ರಶ್ನಿಸಿರುವ ಹೆಚ್ಡಿಕೆ, ‘ಈ ಹಿಂದೆ ಅವರು ಯಾರಿಗೆ ರಕ್ಷಣೆ ಕೊಟ್ಟಿದ್ದಾರೆ. ಸಮಾಜದವರ ಕಷ್ಟಸುಖದಲ್ಲಿ ಭಾಗಿಯಾಗಿದ್ದರೆ ಎಂಬುದನ್ನು ಹೇಳಲಿ. ಈಗ ಅವರು ಕರೆದ ಕೂಡಲೇ ಕಿಂದರಜೋಗಿಯ ಹಿಂದೆ ಹೋದಂತೆ ಹೋಗಲು ಅವರು ಕೊಟ್ಟ ಕಾಣಿಕೆ ಏನು?’ ಎಂದಿದ್ದಾರೆ.
ನಮ್ಮ ಪಕ್ಷದ ನಾಯಕರ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು, ಜೆಡಿಎಸ್ ಮುಗಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲೂ ಏಳು ಶಾಸಕರನ್ನು ನಮ್ಮ ಪಕ್ಷದಿಂದ ಸೆಳೆದಿದ್ದರು. ಕಾಂಗ್ರೆಸ್ ನಾಯಕರಿಂದ ಹೊಸ ನಾಟಕ ಶುರುವಾಗಿದ್ದು, ಇದರಿಂದ ಕೂಡ ಜನರ ಹೃದಯವನ್ನು ಗೆಲ್ಲಲಾಗದು’ ಎಂದಿದ್ದಾರೆ.
ಇತ್ತೀಚೆಗೆ ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ಶಿರಾ ಮತ್ತು ಆರ್ಆರ್ನಗರದಲ್ಲಿ ಬಿಜೆಪಿ ಜೊತೆ ಜೆಡಿಎಸ್ ನೇರ ಹೋರಾಟವಿಲ್ಲ ಎಂಬುದು ಸ್ಪಷ್ಟ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ದೇವೇಗೌಡರನ್ನು ಮಣಿಸಿದಂತೆಯೇ ಮುನಿರತ್ನರನ್ನು ಸೋಲಿಸಲು ಡಿಕೆಶಿ ತಂತ್ರ: ಏನುದು ಪ್ಲಾನ್?