ಕಂಗನಾ ವಿರುದ್ಧ ದೇಶದ್ರೋಹ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡದ ನ್ಯಾಯಾಲಯ
ಪೊಲೀಸ್ ವಿಚಾರಣೆಗೆ ಹಾಜರಾಗುವಂತೆ ನಟಿ ಕಂಗನಾ ರಣಾವತ್ ಮತ್ತು ಆಕೆಯ ಸಹೋದರಿ ರಂಗೋಲಿ ಚಾಂದೆಲ್ ಅವರಿಗೆ ಮುಂಬೈನ ಬಾಂದ್ರಾ ಮೆಟ್ರೋಪಾಲಿಟನ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ನಟಿ ಕಂಗನಾ ರನೌತ್ ಹಾಗೂ ಆಕೆಯ ಸಹೋದರಿ ರಂಗೋಲಿ ಚಾಂದೆಲ್ ತಮ್ಮ ಟ್ವೀಟ್ಗಳ ಮೂಲಕ ಕೋಮು ದ್ವೇಷವನ್ನು ಹರಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ನಿರ್ದೇಶಕ ಸಾಹಿಲ್ ಆಸ್ರಫ್ಆಲಿ ಸಯ್ಯದ್ ಅವರು ಬಾಂದ್ರಾ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಎಫ್ಐಆರ್ ದಾಖಲಿಸಲಾಗಿದ್ದು, ಕಂಗಾನಾ ಹಾಗೂ ರಂಗೋಲಿ ಚಾದೆಲ್ ಅವರಿಗೆ ದೇಶದ್ರೋಹ ಪ್ರಕರಣದ ಅಡಿ ಈ ಸಮನ್ಸ್ ಜಾರಿ ಮಾಡಲಾಗಿದೆ.
ಅಕ್ಟೋಬರ್ 26 ಮತ್ತು 27ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್ನಲ್ಲಿ ತಿಳಿಸಲಾಗಿದೆ.
ನಟಿ ಕಂಗನಾ ಅವರು ಕೋಮು ದ್ವೇಷವನ್ನು ಹರಡುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಟ್ವೀಟ್ಗಳನ್ನು ಮಾಡಿದ್ದಾರೆ. ಅಲ್ಲದೆ, ಕಲಾವಿದರನ್ನು ಕೋಮುಮಾರ್ಗದಲ್ಲಿ ವಿಭಜಿಸಲು ಯತ್ನಿಸುತ್ತಿದ್ದಾರೆ. ಅವರ ಸಹೋದರಿ ರಂಗೋಲಿ ಚಾದೆಲ್ ಅವರು ಕೋಮುದ್ವೇಷವನ್ನು ಬಿತ್ತುವ ಆಕ್ಷೇಪಾರ್ಹ ಟ್ವೀಟ್ಗಳನ್ನು ಮಾಡಿದ್ದಾರೆ ಎಂದು ಸಯ್ಯದ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದು, ಅಗತ್ಯ ದಾಖಲೆಗಳನ್ನು ಒದಗಿಸಿದ್ದಾರೆ.
ದೂರಿನ ಅನ್ವಯ ಕ್ರಮ ಕೈಗೊಳ್ಳುವಂತೆ ಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದ್ದು, ರಂಗೋಲಿ ಚಾದೆಲ್ ಅವರ ವಿರುದ್ಧ ಐಪಿಸಿ ಸೆಕ್ಷನ್ 153ಎ (ದ್ವೇಷವನ್ನು ಉತ್ತೇಜಿಸುವುದು), 295ಎ (ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ನಡೆಸುವ ದುರುದ್ದೇಶ ಪೂರಿತ ಕೃತ್ಯಗಳು), 124 ಎ (ದೇಶದ್ರೋಹ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ‘ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ’ ನಟಿ ಕಂಗನಾ ಅವರ ಸಹೋದರಿ ವಿರುದ್ಧ ಎಫ್ಐಆರ್