ಡಿಜೆ ಹಳ್ಳಿ ಗಲಭೆ ಪ್ರಕರಣ : ಸುಳಿವೇ ಸಿಗದ ಮಾಜಿ ಮೇಯರ್ ಸಂಪತ್ ರಾಜ್..!
ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಹಗಲಿರುಳು ಸಂಪತ್ ಪತ್ತೆಗಾಗಿ ಶ್ರಮಿಸುತ್ತಿದ್ದಾರೆ. ಆದರೆ ದಿನಕ್ಕೊಂದು ಸ್ಥಳ ಬದಲಿಸುತ್ತಿರುವ ಸಂಪತ್ ಪತ್ತೆಗೆ ಸುಳಿವೇ ಸಿಗುತ್ತಿಲ್ಲ.
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗುವ ಭೀತಿಯಿಂದ ಮಾಜಿ ಮೇಯರ್ ಸಂಪತ್ ರಾಜ್ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಪರಾರಿಯಾಗಿದ್ದರು. ಅವರಿಗೆ ನೆರವು ನೀಡಿದ ಶಂಕೆಯ ಮೇರೆಗೆ ಸಿಸಿಬಿ ಅಧಿಕಾರಿಗಳು ಆಸ್ಪತ್ರೆ ವೈದ್ಯರು ಮತ್ತು ಇತರೆ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿದ್ದರು. ಆದರೂ ಸಂಪತ್ ಸುಳಿವು ಸಿಕ್ಕಿರಲಿಲ್ಲ.
ಅವರಿಗಾಗಿ ಕರ್ನಾಟಕ, ತಮಿಳುನಾಡು ಭಾಗದಲ್ಲಿ ಸಿಸಿಬಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ನಾಗರಹೊಳೆ ಭಾಗದ ರೆಸಾರ್ಟ್ಗಳಲ್ಲಿ ಸಂಪತ್ ರಾಜ್ ತಂಗಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಸುತ್ತಮುತ್ತಲಿನ ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಸಿಸಿಬಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಸಂಪತ್ ರಾಜ್ ಮತ್ತು ಮಾಜಿ ಕಾರ್ಪೋರೇಟರ್ ಝಾಕೀರ್ಗೂ ಹುಡುಕಾಟ ನಡೆಸಿದ್ದಾರೆ.
ಮಾಜಿ ಮೇಯರ್ ಸಂಪತ್ ರಾಜ್, ಇಪ್ಪತ್ತು ದಿನ ಕಳೆದರೂ ಪೊಲೀಸರಿಗೆ ಸಿಕ್ಕಿಲ್ಲ. ಸಿಸಿಬಿ ವೇಣುಗೋಪಾಲ್ ನೇತೃತ್ವದಲ್ಲಿ ಎರಡು ವಿಶೇಷ ತಂಡ ರಚಿಸಲಾಗಿದ್ದು, ತಂಡ ಹುಡುಕಾಟವನ್ನು ಮಂದುವರಿಸಿದೆ. ಮೈಸೂರಿನ ವಿವಿಧ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದು, ನಾಗರಹೊಳೆ ಭಾಗದ ರೆಸಾರ್ಟ್ ಗಳಲ್ಲೂ ಸರ್ಚ್ ಆಪರೇಷನ್ ನಡೆಸಿದ್ದಾರೆ. ಆದರೆ ಇದುವರೆಗೆ ಸುಳಿವು ಸಿಕ್ಕಿಲ್ಲ.