TRP ಹಗರಣ: ರಿಪಬ್ಲಿಕ್ ಟಿವಿ ಪ್ರಸಾರ ಮುಖ್ಯಸ್ಥ ಘನಶ್ಯಾಂ ಸಿಂಗ್ ಅರೆಸ್ಟ್!
ಮಾಧ್ಯಮ ಲೋಕವನ್ನು ನಿಬ್ಬರಗು ಗೊಳಿಸಿರುವ ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ವಿತರಣಾ ಮುಖ್ಯಸ್ಥ ಘನಶ್ಯಾಂ ಸಿಂಗ್ ಎಂಬುವವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ರಿಪಬ್ಲಿಕ್ ಚಾನೆಲ್ ತನ್ನ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಟಿಆರ್ಪಿಯನ್ನು ತಿರುಚುವ ಸಲುವಾಗಿ ಹಣ ನೀಡಿದೆ ಎಂಬ ಆರೋಪದ ಮೇಲೆ ಮುಂಬೈ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಇದುವರೆಗೂ ಘನಶ್ಯಾಂ ಸೇರಿದಂತೆ 12 ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
2018ರ ಅತ್ಮಹತ್ಯಾ ಪ್ರಕರಣವೊಂದರಲ್ಲಿ ಅರ್ನಾಬ್ ಗೋಸ್ವಾಮಿಯನ್ನು ಕಳೆದವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಘನಶ್ಯಾಂ ಸಿಂಗ್ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎನ್ಡಿಟಿವಿ ವರದಿ ಮಾಡಿದೆ.
ಕೆಲವು ವೀಕ್ಷಕರು ರಿಪಬ್ಲಿಕ್ ಟಿವಿಯನ್ನು ನೋಡದಿದ್ದರೂ ಸಹ ಅದನ್ನು ನೋಡುವಂತೆ ಮಾಡಲು ಟಿವಿ ವೀಕ್ಷಕರಿಗೆ ಹಣ ನೀಡಲಾಗಿದೆ ಎಂದು ಸಾಕ್ಷ್ಯ ದೊರಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಟಿಆರ್ಪಿ ಹಗರಣದ ಬಗ್ಗೆ ಆರಂಭಿಕ ತನಿಖೆಯಲ್ಲಿ ಎರಡು ಸ್ಥಳೀಯ ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನೆಮಾ ಚಾನೆಲ್ಗಳನ್ನು ಹೆಸರಿಸಲಾಗಿದೆ.
ರಿಪಬ್ಲಿಕ್ ಟಿವಿಯ ವೀಕ್ಷಕರ ಸಂಖ್ಯೆ ಹೆಚ್ಚಿಸಲು ಬೇಕಾಗಿ ಆಯ್ದ ಕುಟುಂಬಗಳಿಗೆ ಪ್ರತಿ ತಿಂಗಳು 15 ಲಕ್ಷ ರೂ. ಪಾವತಿಸಲಾಗುತ್ತಿತ್ತು ಎಂದು ಥಾಣೆ ಮೂಲದ ಕೇಬಲ್ ವಿತರಕ ಸಂಸ್ಥೆಯಾದ ಕ್ರಿಸ್ಟಲ್ ಬ್ರಾಡ್ಕಾಸ್ಟ್ ಮಾಲಕ ಆಶಿಶ್ ಚೌಧರಿ ಒಪ್ಪಿಕೊಂಡಿದ್ದಾಗಿ ಟಿಆರ್ಪಿ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿದೆ.
ಆರೋಪಿಯು ತಾನು ಹವಾಲಾ ಆಪರೇಟರ್ಗಳಿಂದ ಹಣ ಸ್ವೀಕರಿಸಿದ್ದಾಗಿ ಮತ್ತು ಈ ಬಗ್ಗೆ ತಪ್ಪೊಪ್ಪಿಗೆ ಸಾಕ್ಷಿಯಾಗಲು ಒಪ್ಪಿಕೊಂಡಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ. ಮ್ಯಾಕ್ಸ್ಮೀಡಿಯಾ ಎಂಬ ಮಾರಾಟ ಸಂಸ್ಥೆಯ ಅಭಿಷೇಕ್ ಕೊಲವಾಡೆ ಮತ್ತು ಆಶಿಶ್ ಚೌಧರಿಯ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಅಪರಾಧ ವಿಭಾಗ ಸಲ್ಲಿಸಿದ ಅರ್ಜಿಯಲ್ಲಿ ಈ ವಿಚಾರವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: TRP ಹಗರಣ: ರೇಟಿಂಗ್ ಪಾಯಿಂಟ್ ಹೆಚ್ಚಿಸಲು ವಿಕ್ಷಕರಿಗೆ 15 ಲಕ್ಷ ರೂ. ಕೊಟ್ಟ ರಿಪಬ್ಲಿಕ್ ಟಿವಿ