ಮೀಸಲಾತಿಯನ್ನು ಚರ್ಚೆಗೆ ತಂದ ಪಟಾಕಿ ವಿಚಾರ: ಕಂಗನಾ ವಿರುದ್ಧ ನೆಟ್ಟಿಗರ ಆಕ್ರೋಶ!
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆಲವು ರಾಜ್ಯಗಳು ಪಟಾಕಿ ನಿಷೇಧಿಸಿವೆ. ಇದೀಗ ಪಟಾಕಿ ನಿಷೇಧದ ವಿಚಾರ ಮೀಸಲಾತಿ ಯನ್ನು ವಿರೋಧಿಸುವಲ್ಲಿಗೆ ಬಂದು ನಿಂತಿದೆ. ಪಟಾಕಿ ನಿಷೇಧವನ್ನು ಸ್ವಾಗತಿಸಿದ ಕರ್ನಾಟಕದ ಐಪಿಎಸ್ ಅಧಿಕಾರಿ ಡಿ ರೂಪ ಅವರನ್ನು ಟೀಕಿಸುವ ಭರದಲ್ಲಿ ಇದು ಮೀಸಲಾತಿಯ ಅಡ್ಡಪರಿಣಾಮ ಎಂದು ಹೇಳಿರುವ ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಹಲವು ರಾಜ್ಯಗಳು ಪಟಾಕಿ ನಿಷೇಧಿಸಿದ್ದನ್ನು ಸ್ವಾಗತಿಸಿದ್ದ ಐಪಿಎಸ್ ಅಧಿಕಾರಿ ಡಿ. ರೂಪರವರು “ಪಟಾಕಿ ನಿಷೇದ ಸರಿಯಾದ ಕ್ರಮ. ಇದನ್ನು ಕೆಲವರು ಹಿಂದೂ ಧರ್ಮದ ವಿರುದ್ಧ ಪಿತೂರಿ ಎನ್ನುತ್ತಿದ್ದಾರೆ. ಹಿಂದೂ ಧರ್ಮದ ಯಾವುದಾದರೂ ಪುರಾತನ ಗ್ರಂಥಗಳಲ್ಲೋ, ಶಾಸ್ತ್ರಗಳಲ್ಲೋ ಪಟಾಕಿ ಉಲ್ಲೇಖ ಇದ್ದರೆ ಕೊಡಿ, ನಾನು ಕ್ಷಮೆ ಕೇಳುತ್ತೇನೆ, ಇಲ್ಲವಾದಲ್ಲಿ ನೀವು ಕ್ಷಮೆ ಕೇಳಿ. ಸ್ವಯಂ ಹಿಂದುತ್ವವಾದಿಗಳು ಅಂದುಕೊಂಡವರು ಇತರ ಹಿಂದುಗಳನ್ನು ದಾರಿತಪ್ಪಿಸಬೇಡಿ” ಎಂದು ಫೇಸ್ಬುಕ್ನಲ್ಲಿ ದೀರ್ಘ ಪೋಸ್ಟ್ ಒಂದನ್ನು ಹಾಕಿದ್ದರು.
ಆ ಸಮಯದಲ್ಲಿ ಡಿ.ರೂಪರವರ ವಿರುದ್ಧ ಸರಣಿ ಟ್ವೀಟ್ಗಳನ್ನು ಮಾಡಿದ ಕಂಗನಾ ರಾಣವತ್ “ನೀವೆಲ್ಲಾ ಮೀಸಲಾತಿ ಅಡ್ಡಪರಿಣಾಮಗಳು” ಎಂದು ಮೂದಲಿಸಿದ್ದಾರೆ. ಯೋಗ್ಯರಲ್ಲದವರಿಗೆ ಅಧಿಕಾರ ದೊರೆತರೆ ಅವರು ಸಮಾಜದಲ್ಲಿನ ಗಾಯಗಳನ್ನು ಶಮನಗೊಳಿಸುವ ಬದಲು ಮತ್ತಷ್ಟು ವ್ರಣಗೊಳಿಸುತ್ತಾರೆ. ರೂಪರವರ ವೈಯಕ್ತಿಕ ಬದುಕಿನ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ, ಆದರೆ ಅವರು ಅಸಾಮರ್ಥ್ಯದಿಂದಾಗಿ ಹತಾಶೆಗೊಳಗಾಗಿರುವುದಂತೂ ಖಾತ್ರಿ ಇದೆ” ಎಂದು ಟ್ವೀಟ್ ಮಾಡಿದ್ದರು.
Moudgil is from brahmin background! Why don't you do your research before hitting up on reservation system??
D roopa ma'am had got in to IPS by securing all india 43 rank… Get your facts and akal checked— Vivek endala (@viveke1) November 18, 2020
ಕಂಗನಾರವರ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಡಿ.ರೂಪರವರು ಬ್ರಾಹ್ಮಣ ಸಮುದಾಯದವರು. ಇಷ್ಟು ಕನಿಷ್ಠ ಜ್ಞಾನವಿಲ್ಲದೆ ನೀವು ಏಕೆ ಮೀಸಲಾತಿಯನ್ನು ದೂರುತ್ತೀರಿ? ಅವರು 2000ನೇ ಇಸವಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಲ್ ಇಂಡಿಯಾ 43ನೇ ರ್ಯಾಂಕ್ ಪಡೆದಿದ್ದಾರೆ. ಸ್ವಲ್ಪ ತಿಳಿದು ನಂತರ ಟ್ವೀಟ್ ಮಾಡಿ ಎಂದು ವಿವೇಕ್ ಎಂಡಲಾ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾತಿ ಪದ್ದತಿ, ಮೀಸಲಾತಿಯ ಬಗ್ಗೆ ಅರಿವಿರದೇ ಏಕೆ ಯಾವಾಗಲೂ ಸಂವಿಧಾನ ಮತ್ತು ಮೀಸಲಾತಿಯ ವಿರುದ್ಧ ಮಾತನಾಡುತ್ತೀರಿ? ಸರಿ ನೀವು ಎಲ್ಲಿಯವರೆಗೂ ಓದಿದ್ದೀರಿ? 16ನೇ ವಯಸ್ಸಿಗೆ ನಾವು SSLC ಓದುತ್ತಿದ್ದಾಗಲೇ ಬಾಲಿವುಡ್ ಪ್ರವೇಶಿಸಿದರೆ ಓದೋಕೆ ಸಮಯವಾದರೂ ಎಲ್ಲಿ ಸಿಗುತ್ತದೆ, ಸ್ವಲ್ಪ ಇತಿಹಾಸ ಓದಿ ಎಂದು ಕಿಡಿಕಾರಿದ್ದಾರೆ.
ಮೀಸಲಾತಿಯ ಬಗ್ಗೆ ನಿಮಗೆ ಮಾತನಾಡುವ ಹಕ್ಕಿಲ್ಲ. ಇಂದು ಮೀಸಲಾತಿ ಆಧಾರದಲ್ಲಿ ಉನ್ನತ ಹುದ್ದೆಗಳಿಗೆ ಬರುವವರು ಸಹ ಸಾಕಷ್ಟು ಪ್ರತಿಭಾವಂತರು, ಕಠಿಣ ಶ್ರಮ ಹಾಕುವವರಾಗಿದ್ದಾರೆ. ಮೀಸಲಾತಿ ಪಡೆಯುವವರ ಕಟ್ಆಫ್ ಅಂಕ ಕೂಡ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಸನಿಹವೇ ಇರುತ್ತದೆ. ಅಷ್ಟಿಲ್ಲದೇ ಯಾವ ಹುದ್ದೆ ಸಹ ಪಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ಒಬ್ಬ ಐಪಿಎಸ್ ಅಧಿಕಾರಿಯ ವಿರುದ್ಧ ಮಾತನಾಡುವ ನೀವು ಅದೇ ಐಪಿಎಸ್ ಪಾಸು ಮಾಡುವ ಸಾಮರ್ಥ್ಯ ಹೊಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಎಲ್ಲರೂ ಮೀಸಲಾತಿ ಕೊನೆಗೊಳಿಸುವುದರ ಕುರಿತು ಮಾತನಾಡುತ್ತಾರೆ. ಏಕೆ ಯಾರೋಬ್ಬರು ಜಾತಿಪದ್ದತಿ ಕೊನೆಗೊಳಿಸುವುದರ ಬಗ್ಗೆ ಮಾತನಾಡುವುದಿಲ್ಲ. ಕಂಗನಾ ಮೇಡಂ ನೀವ್ಯಾಕೆ ಮಾತನಾಡುವುದಿಲ್ಲ ಎಂದು ಚೇ ಗುವೆರಾ ಎಂಬ ಖಾತೆಹೊಂದಿರುವವರು ಪ್ರಶ್ನಿಸಿದ್ದಾರೆ.
https://twitter.com/PriyafromLA/status/1328983630861848577?s=20
ನೀವು ಯಾವ ಮೀಸಲಾತಿ ಕುರಿತು ಮಾತನಾಡುತ್ತಿದ್ದೀರಿ? ನಿನ್ನೆ ಓದಿದ ವರದಿಯಲ್ಲಿ 21 ಭ್ರಷ್ಟ ಅಧಿಕಾರಿಗಳ ಪೈಕಿ ದಲಿತರ ಸಂಖ್ಯೆ ಕೇವಲ 02. ಹೀಗಿರುವಾಗ ಜಾತಿಪದ್ದತಿ ಇರುವವರೆಗೂ ಮೀಸಲಾತಿ ದಲಿತರ ಹಕ್ಕು ಎಂದು ಶರೀಫ್ ಗಬೇರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಪಟಾಕಿ ನಿಷೇಧದ ವಿಷಯಕ್ಕೆ ಕಂಗನಾ ರಾಣವತ್ ತಪ್ಪು ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸ್ವಲ್ಪವು ಪರಿಶೀಲಿಸದೇ ಮೀಸಲಾತಿ ವಿರುದ್ಧ ಮಾತನಾಡುವ ಮೂಲಕ ತಮ್ಮ ಅಹಂಕಾರವನ್ನು ಪ್ರದರ್ಶಿಸಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ BJP ಬೆಳೆಯಲು ನೆರವಾಗುತಿದ್ಯಾ AIADMK: ಚುನಾವಣಾ ಮೈತ್ರಿ ಸಾಧ್ಯತೆ!