ಸಿಎಎ ವಿರೋಧಿ ಪ್ರತಿಭಟನೆ: ವಿದೇಶಿ ವಿದ್ಯಾರ್ಥಿಗೆ ದೇಶ ತೊರೆಯಲು ಕೊಟ್ಟಿದ್ದ ನೋಟಿಸ್ ಗೆ ಹೈಕೋರ್ಟ್ ತಡೆ
ಸಿ ಎ ಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿ, ದೇಶ ತೊರೆಯುವಂತೆ ಪೋಲೆಂಡ್ ವಿದ್ಯಾರ್ಥಿಗೆ ವಿದೇಶಿ ಪ್ರಾದೇಶಿಕ ನೊಂದಣಿ ಕಚೇರಿ ನೀಡಿದ್ದ ನೋಟಿಸ್ ಗೆ ಕಲ್ಕತ್ತ ಹೈಕೋರ್ಟ್ ತಡೆಹಿಡಿದಿದೆ.
ಜಾಧವಪುರ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವ ಈ ಪೋಲಿಶ್ ನಾಗರಿಕನಿಗೆ ಕೊಟ್ಟಿರುವ ನೋಟಿಸ್ ಜಾರಿ ಮಾಡದಂತೆ ನ್ಯಾಯಮೂರ್ತಿ ಸಭ್ಯಸಾಚಿ ಭಟ್ಟಾಚಾರ್ಯ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ.
ಜಾಧವಪುರ ವಿಶ್ವವಿದ್ಯಾಲಯದ ತುಲನಾತ್ಮಕ ಸಾಹಿತ್ಯ ವಿಭಾಗದಲ್ಲಿ ಶಿಕ್ಷಣ ಪಡೆಯುತ್ತಿರುವ ಕಾಮಿಲ್ ಸೀಡ್ಜಿನ್ಕಿ ಅವರಿಗೆ ಭಾರತ ತೊರೆಯುವಂತೆ ವಿದೇಶಿ ಪ್ರಾದೇಶಿಕ ನೊಂದಣಿ ಕಲ್ಕತ್ತ ಕಚೇರಿ ಫೆಬ್ರವರಿ 14 ರಂದು ನೋಟಿಸ್ ನೀಡಿತ್ತು. ಭಾರತದ ಸಂಸತ್ತಿನಲ್ಲಿ ಮಂಜೂರಾಗಿರುವ ಕಾನೂನನ್ನು ವಿರೋಧಿಸುವ ಅಧಿಕಾರ ವಿದೇಶಿಗೆ ಇಲ್ಲವೆಂದು ಕೇಂದ್ರ ಸರ್ಕಾರ ವಾದ ಮಂಡಿಸಿದೆ.
ಇದಕ್ಕೆ ಪ್ರತಿವಾದ ಮಂಡಿಸಿರುವ ವಿದ್ಯಾರ್ಥಿ ಪರ ವಕೀಲ, ವಿದ್ಯಾರ್ಥಿ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾಗಿ ತಿಳಿಸಿ, ದೇಶ ತೊರೆಯಲು ಹೇಳಿರುವ ನಡೆ ಮಾನವ ಹಕ್ಕುಗಳ ಸಾರ್ವತ್ರಿಕ ಒಪ್ಪಂದವನ್ನು (1948) ಉಲ್ಲಂಘಿಸುತ್ತದೆ ಎಂದು ಕೋರ್ಟ್ ಗೆ ನಿವೇದಿಸಿಕೊಂಡಿದ್ದರು.