ನಾಳೆ ಕರ್ನಾಟಕ ಬಂದ್ ಹಿನ್ನೆಲೆ : ಇಂದು ರಾತ್ರಿಯಿಂದಲೇ ಪೊಲೀಸ್ ಬಿಗಿ ಭದ್ರತೆ..!
ಬಂದ್ ಮಾಡುತ್ತೇವೆಂದು ನಮ್ಮ ಬಳಿ ಯಾರೂ ಅನುಮತಿ ಕೇಳಿಲ್ಲ. ನಾವು ಕೊಟ್ಟಿಲ್ಲ ಎಂದು ನಾಳಿನ ಬಂದ್ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯಿಸಿದ್ದಾರೆ. ನಾಳೆ ಕರ್ನಾಟಕ ಬಂದ್ ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ನಾಳೆ (ಡಿ.5) ರಂದು ಕರ್ನಾಟಕ ಬಂದ್ ಗೆ ಎಲ್ಲಾ ಸಂಘ-ಸಂಘಟನೆಗಳು, ಜನರು ಸಹಕರಿಸುವಂತೆ ಮನವಿ ಮಾಡಲಾಗಿದೆ.
ಆದರೆ ಕೆಲ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದರೆ ಇನ್ನೂ ಕೆಲ ಸಂಘ-ಸಂಘಟನೆಗಳು ಕೊರೊನಾ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಬೆಂಬಲವನ್ನು ಸೂಚಿಸುವುದಿಲ್ಲ ಎಂದಿವೆ. ಇದರ ಮಧ್ಯೆ ರಾಜ್ಯದಲ್ಲಿ ಬಲವಂತದ ಬಂದ್ ಗೆ ಅವಕಾಶವಿಲ್ಲ ಎಂದು ಸರ್ಕಾರ ಎಚ್ಚರಿಕೆ ಕೊಟ್ಟಿದ್ದು, ಒಂದು ವೇಳೆ ಬಲವಂತವಾಗಿ ಬಂದ್ ಮಾಡಿದರೆ, ಕಲ್ಲು ತೂರಾಟ, ಅಹಿತಕರ ಘಟನೆಗಳಿಗೆ ಕೈ ಹಾಕಿದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಸಿಎಂ ಯಡಿಯೂರಪ್ಪ ಪೊಲೀಸ್ ಇಲಾಖೆಗೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ನಾಳೆ ಬಂದ್ ಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಕಯಗೊಳ್ಳಲಾಗಿದೆ. ಶಾಂತಿಯುತ ಪ್ರತಿಭಟನೆಗೆ ಮಾತ್ರ ಅವಕಾಶವಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇಂದು ರಾತ್ರಿಯಿಂದಲೇ ನಗರದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ.18 ಸಾವಿರ ಪೊಲೀಸ್ ಸಿಬ್ಬಂದಿ ಹಾಗೂ 12 ಡಿಸಿಪಿಗಳು ಭದ್ರತೆಯ ಉಸ್ತುವಾರಿ ವಹಿಸಲಿದ್ದಾರೆಂದು ಪಂತ್ ಹೇಳಿದ್ದಾರೆ. ಜೊತೆಗೆ ನಗರದ ಜನದಟ್ಟಣೆ ಇರುವ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಕ್ರಮ ಕೈಗೊಳ್ಳಲಾಗಿದೆ. ವಿಶೇಷವಾಗಿ ಮೆಟ್ರೋ, ಬಿಎಂಟಿಸಿ, ಕೆಎಸ್ ಆರ್ ಟಿಸಿ ನಿಲ್ದಾಣ, ಸಿಟಿ ರೈಲ್ವೆ ನಿಲ್ದಾಣ, ಫ್ರೀಡಂ ಪಾರ್ಕ್ಟೌನ್ ಹಾಲ್, ಮೈಸೂರು ಬ್ಯಾಂಕ್ ಸ್ಥಳದಲ್ಲಿ ಪ್ರತಿಭಟನಾ ರ್ಯಾಲಿ ನಡೆಯುವ ಸಂಭವವಿದ್ದು ಇಲ್ಲಿ ಹೆಚ್ಚಿನ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.