ಬೆಂಗಳೂರಿನತ್ತ ಮುಖ ಮಾಡಿದ ಓವೈಸಿ; ಬಿಬಿಎಂಪಿ ಚುನಾವಣೆಗೆ ಎಐಐಎಂಐಎಂ ಸ್ಪರ್ಧೆ!
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಚುನಾವಣೆಯನ್ನು ನಡೆಸಲು ಹಿಂದೇಟು ಹಾಕುತ್ತಿದೆ. ಈ ಹೊತ್ತಿನಲ್ಲಿಯೇ ಹೈದರಾಬಾದ್ ಮತ್ತು ಬಿಹಾರದಲ್ಲಿ ನಿರೀಕ್ಷಿತ ಗೆಲುವು ಸಾಧಿಸಿರುವ ಅಸಾದುದ್ದೀನ್ ಓವೈಸಿ ಅವರ ಎಐಐಎಂಐಎಂ ಪಕ್ಷವೂ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ತಿಳಿದುಬಂದಿದೆ.
ಹೈದರಾಬಾದ್ನ ಪಾಲಿಕೆಗಷ್ಟೇ ಸೀಮಿತವಾಗಿದ್ದ ಓವೈಸಿ ಅವರ ಪಕ್ಷ ಈ ಬಾರಿ ಬಿಹಾರದಲ್ಲಿಯೂ ಕಣಕ್ಕಿಳಿದು 05 ಸ್ಥಾನಗಳನ್ನು ಗೆದ್ದುಕೊಂಡಿದೆ. ಅಲ್ಲದೆ, ಹೈದರಾಬಾದ್ ಚುನಾವಣೆಯಲ್ಲಿ 44 ಸ್ಥಾನಗಳನ್ನು ಗೆದ್ದು, ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿರುವ ಎಐಐಎಂಐಎಂ ಪಕ್ಷವು 2021ಕ್ಕೆ ನಡೆಯಲಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭೆಯಲ್ಲಿಯೂ ಸ್ಪರ್ಧಿಸುವುದಾಗಿ ಘೋಷಿಸಿದೆ.
ಅಲ್ಲದೆ, ಬೆಂಗಳೂರಿನ ಬಿಬಿಎಂಪಿ ಚುನಾವಣೆಯಲ್ಲಿಯೂ ಸ್ಪರ್ಧಿಸಲು ನಿರ್ಧರಿಸಿದ್ದು, ಎಲ್ಲಾ 198 ಬಿಬಿಎಂಪಿ ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೂ ಕೆಲವು ವಾರ್ಡ್ಗಳಲ್ಲಿ ಪ್ರಭಾವಿ ಕಾರ್ಯಕರ್ತರನ್ನು ಕಣಕ್ಕಿಳಿಸಲು ಸಿದ್ದತೆ ನಡೆಸುತ್ತಿದೆ ಎಂದು ಹೇಳಲಾಗಿದೆ.
“ನಾವು ಈ ಹಿಂದೆ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದ್ದೆವು, ಆದರೆ ಸಿದ್ದರಾಮಯ್ಯ ಸರ್ಕಾರವು ವಿವಿಧ ತಂತ್ರಗಳನ್ನು ಬಳಸಿ ನಮ್ಮನ್ನು ತಡೆದಿದೆ. ಅದರ ಹೊರತಾಗಿಯೂ, ಈ ಹಿಂದೆ ನಮ್ಮೊಂದಿಗಿದ್ದ ಎಸ್ಡಿಪಿಐ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದರು. ಆದರೆ ಈ ಬಾರಿ ನಾವು ಮೊದಲೇ ತಯಾರಿ ನಡೆಸುತ್ತಿದ್ದೇವೆ” ಎಂದು ಎಐಎಂಐಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಲತೀಫ್ ಖಾನ್ ಪಠಾಣ್ ತಿಳಿಸಿದ್ದಾರೆ.
ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ವಾರ್ಡ್ ವಾರು ಸಮಿತಿಗಳನ್ನು ರಚಿಸಿದ್ದೇವೆ. ಜನರಿಗೆ ಒಳ್ಳೆಯ ಕೆಲಸ ಮಾಡಿದ ಕಾರ್ಯಕರ್ತರನ್ನು ನಾವು ಬಯಸುತ್ತೇವೆ. ನಾವು ಚುನಾವಣೆಗೆ ಸ್ಪರ್ಧಿಸಿದೊಡನೆ ಆಡಳಿತ ಪಕ್ಷವಾಗಲು ಸಾಧ್ಯವಿಲ್ಲ ಎಂದು ತಿಳಿದಿದೆ. ನಾವು ಅರ್ಹರಿಗೆ ಮಾತ್ರ ಆದ್ಯತೆ ನೀಡುತ್ತೇವೆ. ಈ ಬಾರಿ ಪ್ರಣಾಳಿಕೆಯನ್ನು ಹೊರತರುವ ಕುರಿತು ನಾವು ಚರ್ಚೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: 2021ರ ಚುನಾವಣೆಗಳಲ್ಲಿ BJP ಹೀನಾಯವಾಗಿ ಸೋಲುತ್ತದೆ: ಕಾರಣವೇನು ಗೊತ್ತೇ?