ಖುರ್ಚಿಗಾಗಿ ವಿದ್ಯಾರ್ಥಿಗಳ ಮಧ್ಯೆ ಜಗಳ : ಶಾಲೆಯಲ್ಲಿ ಸಹಪಾಠಿಯನ್ನೇ ಗುಂಡಿಟ್ಟು ಕೊಂದ SSLC ವಿದ್ಯಾರ್ಥಿ….!
10 ನೇ ತರಗತಿಯ ವಿದ್ಯಾರ್ಥಿಯು ತನ್ನ ಸಹಪಾಠಿಯನ್ನು ಶಾಲೆಯಲ್ಲಿ ಗುರುವಾರ ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯ ನಡೆದಿದೆ.
ಇಲ್ಲಿನ ಪೊಲೀಸ್ ಮೂಲಗಳ ಪ್ರಕಾರ 14 ವರ್ಷದ ವಿದ್ಯಾರ್ಥಿ ತನ್ನ ಸಹಪಾಠಿಗೆ ಮಧ್ಯಾಹ್ನ ಮೂರು ಬಾರಿ ಗುಂಡು ಹಾರಿಸಿದ್ದಾನೆ. ತಕ್ಷಣ ಗುಂಡು ತಾಗಿದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಉಳಿಯಲಿಲ್ಲ. ಸಾವನ್ನಪ್ಪಿದ ಬಾಲಕ ಆರೋಪಿ ಇಬ್ಬರೂ ಒಂದೇ ವಯಸ್ಸಿನವರು.
ತರಗತಿಯಲ್ಲಿ ಆಸನಗಳ ವ್ಯವಸ್ಥೆ ಕುರಿತು ಬುಧವಾರ ಇಬ್ಬರೂ ವಾಗ್ವಾದ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾವನ್ನಪ್ಪಿದ ಬಾಲಕ ತರಗತಿಯಲ್ಲಿ ಬೇರೆಡೆ ಕುಳಿತುಕೊಳ್ಳಬೇಕೆಂದು ಗುಂಡು ಹಾರಿಸಿದ ವಿದ್ಯಾರ್ಥಿ ಬಯಸಿದ್ದ. ಆದರೆ ಆ ಕೆಲಸವನ್ನು ಸಹಪಾಠಿ ಮಾಡಿರಲಿಲ್ಲ. ಈ ವಿಚಾರಕ್ಕೆ ಆರೋಪಿ ಎಷ್ಟು ಕೋಪಗೊಂಡಿದ್ದನೆಂದರೆ ಅವನು ಗುರುವಾರ ಶಾಲೆಗೆ ಬರುವಾಗ ಸೇನಾ ಜವಾನ್ ಆಗಿದ್ದ ಚಿಕ್ಕಪ್ಪನ ಪಿಸ್ತೂಲನ್ನು ತಂದಿದ್ದನು.
ಗುಂಡು ಹಾರಿಸಿ ಆರೋಪಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದರಿಂದ ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆದರಿ ಸುರಕ್ಷತೆಗಾಗಿ ಶಾಲೆಯಿಂದ ಹೊರ ಓಡಿಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೆದರಿಸಲು ಅವನು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ. ತಕ್ಷಣ ಶಾಲೆಯ ಪ್ರಾಂಶುಪಾಲರು ಶಾಲೆಯ ದ್ವಾರಗಳನ್ನು ಮುಚ್ಚಿಸಿದ್ದಾರೆ. ಸ್ವಲ್ಪ ಸಮಯದ ನಂತರ ಆರೋಪಿಯನ್ನು ಕೆಲವು ಶಿಕ್ಷಕರು ಹಿಡಿದುಕೊಂಡಿದ್ದಾರೆ.
ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇಶ ನಿರ್ಮಿತ ಪಿಸ್ತೂಲ್ ಅನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಶಾಲೆಯೊಳಗೆ ಪಿಸ್ತೂಲ್ ತರಲು ಹೇಗೆ ಯಶಸ್ವಿಯಾದರು? ಮೃತ ವಿದ್ಯಾರ್ಥಿ ಫೋಷಕರು ಇದರ ತನಿಖೆಗೆ ಒತ್ತಾಯಿಸಿದ್ದಾರೆ.