ಸುಳ್ಳು ಸುದ್ದಿ ಹಬ್ಬಿದ ಯುಟ್ಯೂಬ್ ಚಾನಲ್ ವಿರುದ್ಧ ರಘು ದೀಕ್ಷಿತ್ ಗರಂ…
‘ರಘು ದೀಕ್ಷಿತ್ ಆತ್ಮಹತ್ಯೆ, ಕಣ್ಣೀರಿನಲ್ಲಿ ಕನ್ನಡ ಚಿತ್ರರಂಗ, ಏನಾಯ್ತು?’ ಎಂಬ ಹೆಡ್ಲೈನ್ ನೀಡಿದ ಯೂಟ್ಯೂಬ್ ಚಾನಲ್ ವಿರುದ್ಧ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಗರಂ ಆಗಿದ್ದಾರೆ.
ಹೌದು.. ‘ಫಿಲ್ಮ್ ತಂತ್ರ24’ ಹೆಸರಿನ ಯೂಟ್ಯೂಬ್ ಚಾನೆಲ್ನವರು ಈ ಸುದ್ದಿ ಪ್ರಕಟಿಸಿದ್ದಾರೆ. ‘ರಘು ದೀಕ್ಷಿತ್ ಆತ್ಮಹತ್ಯೆ, ಕಣ್ಣೀರಿನಲ್ಲಿ ಕನ್ನಡ ಚಿತ್ರರಂಗ, ಏನಾಯ್ತು?’ ಎಂಬ ಹೆಡ್ಲೈನ್ ನೀಡಿದ ಯೂಟ್ಯೂಬ್ ಚಾನಲ್ ನ ಸ್ಕ್ರೀನ್ ಶಾಟ್ ಹಂಚಿಕೊಂಡ ರಘು ದೀಕ್ಷಿತ್ ‘ಜೀವನದಲ್ಲಿ ಸಾಕಷ್ಟು ನೋಡಿದ್ದೇನೆ, ಆದರೆ ಇದು ಎಲ್ಲವನ್ನೂ ಮೀರಿಸಿದ್ದು’ ಎಂದು ವ್ಯಂಗ್ಯ ಮಾಡಿದ್ದಾರೆ. ವೀಡಿಯೋದಲ್ಲಿ ರಘುದೀಕ್ಷಿತ್ ಆತ್ಮಹತ್ಯೆ ಮಾಡಿಕೊಮಡಿದ್ದಾರೆ ಎಂದು ಹೇಳಿಲ್ಲ. ಬದಲಿಗೆ ರಘು ದೀಕ್ಷಿತ್ ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಹಿಂದೊಮ್ಮೆ ರಘುದೀಕ್ಷಿತ್ ಕಾರ್ಯಕ್ರಮವೊಂದರಲ್ಲಿ ತಾವು ಖಿನ್ನತೆಗೆ ಒಳಗಾಗಿದ್ದರ ಬಗ್ಗೆ ಹಂಚಿಕೊಂಡಿದ್ದರು. ಈ ವಿಡಿಯೋವನ್ನೇ ಬಳಸಿಕೊಂಡ ಚಾನಲ್ ಸುಳ್ಳು ಸುದ್ದಿಯನ್ನು ಪ್ರಕಟಿಸಿದೆ. ಹೆಡ್ ಲೈನ್ ದೊಡ್ಡದಾಗಿ ಹಾಕಿ ನೋಡುಗರ ದಾರಿ ತಪ್ಪಿಸಿದ್ದಾರೆ. ಇದರ ವಿರುದ್ಧ ದೂರು ನೀಡುವುದು ಹೇಗೆ ಎಂದು ರಘ ದೀಕ್ಷಿತ್ ಸಾಮಾಜಿಕ ತಾಣದಲ್ಲಿ ಪ್ರಶ್ನಿಸಿದ್ದಾರೆ. ಈ ಚಾನಲ್ ಕೇವಲ ರಘು ದೀಕ್ಷಿತ್ ಮಾತ್ರವಲ್ಲದೇ ಬೇರೆ ಸೆಲೆಬ್ರಿಟಿಗಳ ಬಗ್ಗೆಯೂ ಇದೇ ರೀತಿ ಸುಳ್ಳು ಸುದ್ದಿ ಮಾಡಿದೆ. ನಟಿ ಅಮೂಲ್ಯಗೆ ಅಪಘಾತವಾಗಿದೆ ಎಂಬ ಸುದ್ದಿಯನ್ನು ಸಹ ಈ ಯೂಟ್ಯೂಬ್ ಚಾನೆಲ್ ಪ್ರಕಟಿಸಿದೆ.
ನಿರೂಪಕಿ ಅನುಶ್ರೀ ಸಂದರ್ಶನದಲ್ಲಿ ತಾವು ಖಿನ್ನತೆಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದ ರಘದೀಕ್ಷಿತ್ ಹೇಳಿಕೆಯನ್ನು ತಿರುಚಿ ಪ್ರಕಟಿಸಲಾಗಿದೆ. ಈ ರೀತಿ ದಾರಿ ತಪ್ಪಿಸುವಂತಹ ಸುದ್ದಿಗಳ ವಿರುದ್ಧ ರಘು ದೀಕ್ಷಿತ್ ಕೆಂಡವಾಗಿದ್ದಾರೆ.