ಸಾಕಾಗಿದೆ BJP-ಕಾಂಗ್ರೆಸ್ ಸಹವಾಸ; ವಿರೋಧ ಪಕ್ಷವಾಗಿರಲು ಸಿದ್ದ: ಜೆಡಿಎಸ್
ಮೈಸೂರು ಮಹಾನಗರ ಪಾಲಿಕೆಯ ಮೇಯರ್ – ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಹೊಂದಾಣಿಕೆ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಜೆಡಿಎಸ್ ಹೇಳಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಜೆಡಿಎಸ್ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್-ಬಿಜೆಪಿಗಳ ಸಹವಾಸ ಸಾಕಾಗಿದೆ. ಪಾಲಿಕೆಯಲ್ಲಿ ಜೆಡಿಎಸ್ ಸದಸ್ಯರು ವಿರೋಧ ಪಕ್ಷವಾಗಿರಲು ಸಿದ್ದರಾಗಿದ್ದಾರೆ ಎಂದು ಜೆಡಿಎಸ್ ಶಾಸಕ ಸಾರಾ ಮಹೇಶ್ ಹೇಳಿದ್ದಾರೆ.
ಪಾಲಿಕೆಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯ ಬಗ್ಗೆ ನಾವು ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ಆ ಬಗ್ಗೆ ನಮ್ಮಲ್ಲಿ ಯಾವುದೇ ಚರ್ಚೆಗಳೂ ನಡೆದಿಲ್ಲ. ಕಾಂಗ್ರೆಸ್ನ ತನ್ವೀರ್ ಸೇಠ್, ಬಿಜೆಪಿಯ ಪ್ರತಾಪ್ ಸಿಂಹ ನಮ್ಮೊಂದಿಗೆ ಮೈತ್ರಿ ವಿಚಾರವಾಗಿ ಮಾತನಾಡಿದ್ದಾರೆ. ಆದರೆ, ನಾವು ಯಾವುದೇ ಭರವಸೆಯನ್ನು ನೀಡಿಲ್ಲ. ಈ ವಿಚಾರವಾಗಿ ರಾಜ್ಯ ನಾಯಕರೊಂದಿಗೆ ಚರ್ಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಪಾಲಿಕೆಯಲ್ಲಿರುವ ನಮ್ಮ ಸದಸ್ಯರು, ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ದಿನಾಂಕ ಮತ್ತು ಮೀಸಲಾತಿ ಪ್ರಕಟಗೊಂಡ ನಂತರ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ಸಾರಾ ಮಹೇಶ್ ಹೇಳಿದ್ದಾರೆ.
ಸದ್ಯ, ಕಾಂಗ್ರೆಸ್ ಮತ್ತು ಬಿಜೆಪಿಯವರು ಮೈತ್ರಿಯ ಅಪೇಕ್ಷೆ ಮುಂದಿಟ್ಟಿದ್ದು, ಜೆಡಿಎಸ್ ಕಾದು ನೋಡುವ ತಂತ್ರವನ್ನು ಎಣೆಯುತ್ತಿದೆ. ಎರಡೂ ಪಕ್ಷಗಳಿಂದ ಅಂತರ ಕಾಯ್ದೆಕೊಂಡಿರುವ ಜೆಡಿಎಸ್ ಕೊನೆ ಗಳಿಕೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು JDS-BJP ಒಳ ಒಪ್ಪಂದ ಮಾಡಿಕೊಂಡಿದ್ದವು: ಜೆಡಿಎಸ್ ಶಾಸಕ