ಕೃಷಿ ಕಾಯಿದೆಗಳು ಮತ್ತು ಆದಾನಿ, ಅಂಬಾನಿಗಳ ಲಾಭಗಳು!

ಕಳೆದ ೪೭ ದಿನಗಳಿಂದ ದೆಹಲಿಗೆ ಮುತ್ತಿಗೆ ಹಾಕಿರುವ ಚರಿತ್ರಾರ್ಹ ರೈತ ಚಳವಳಿ ಒಂದು ದೇಶವ್ಯಾಪಿ ಬೃಹತ್ ಜನಾಂದೋಲನದ ರೂಪ ಪಡೆದುಕೊಂಡು ನಿರ್ಣಾಯಕ ಘಟ್ಟ ಪ್ರವೇಶಿಸಿದೆ. ಅದರಲ್ಲೂ ರೈತ ಚಳವಳಿಯು ಜನವರಿ ೨೬ ರಂದು ಮಾಡಲು ಉದ್ದೇಶಿಸಿರುವ ಜನಗಣ ಪೆರೇಡ್ ಅಂತೂ ಆಳುವವರ ನಿದ್ದೆಗೆಡಿಸಿದೆ.

ಆದ್ದರಿಂದಲೇ ಆಳುವ ಸರ್ಕಾರವು ಸುಪ್ರೀಂ ಕೋರ್ಟನ್ನು ಮಧ್ಯಪ್ರವೇಶಿಸುವಂತೆ ಮಾಡುವ ಮೂಲಕ ರೈತರು ಬೀಸುತ್ತಿರುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ನಡೆಸಿದೆ. ಸುಪ್ರಿಂಕೋರ್ಟ ನಿನ್ನೆ ನೀಡಿರುವ ಮಧ್ಯಂತರ ಆದೇಶ ಹಾಗೂ ಅದು ರಚಿಸಿರುವ ಸಮಿತಿಗಳಂತೂ ದಿನದಿನಕ್ಕೂ ಉಕ್ಕೇರುತ್ತಿರುವ ರೈತರ ಚಳವಳಿಗೆ ನಿಧಾನದ್ರೋಹ ಬಗೆದು ಮೋದಿ ಸರ್ಕಾರವನ್ನೂ ಹಾಗೂ ಕಾರ್ಪೊರೇಟ್ ಆಸಕ್ತಿಯನ್ನು ರಕ್ಷಿಸುವ ಉದ್ದೇಶವನ್ನೇ ಹೊಂದಿರುವುದು ಮುಖಕ್ಕೆ ರಾಚುವಷ್ಟು ನಿಚ್ಚಳವಾಗಿದೆ.

ಆದರೆ ಈ ಕಾಯಿದೆಗಳ ಹಿಂದೆ ಇರುವ ಅಂಬಾನಿ ಹಾಗೂ ಆದಾನಿಗಳಂಥವರ ಕಾರ್ಪೊರೇಟ್ ಹಿತಾಸಕ್ತಿಯನ್ನು ರೈತ ಚಳವಳಿ ಸ್ಪಷ್ಟವಾಗಿ ಅರ್ಥಮಾಡಿಕೊಂಡಿದೆ. ಹೀಗಾಗಿಯೇ ರೈತ ಚಳವಳಿ ದೊಡ್ಡ ಕಾರ್ಪೊರೇಟ್ ಬಂಡವಾಳಶಾಹಿಗಳನ್ನು ತನ್ನ ದಾಳಿಗೆ ಗುರಿಯಾಗಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಅಂಬಾನಿ ಹಾಗೂ ಆದಾನಿಗಳ ವಿರುದ್ಧವೂ ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಅಂಬಾನಿ ಕಂಪನಿಗೆ ಸೇರಿದ ನೂರಾರು ಜಿಯೋ ಟವರ್ ಗಳನ್ನು ಹಾನಿಗೊಳಿಸಿದ್ದಾರೆ. ಆದಾನಿಯ ಗೂಡ್ಸ್ ರೈಲು ಪಂಜಾಬಿನಲ್ಲಿ ಸಂಚರಿಸಿದಂತೆ ಯಶಸ್ವಿಯಾಗಿ ತಡೆಹಿಡಿದ್ದಾರೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್‌ ನೇಮಿಸುವ ಯಾವ ಸಮಿತಿಗೂ ನಾವು ಹೋಗುವುದಿಲ್ಲ: ಹೋರಾಟನಿರತ ರೈತರು

ಇವೆಲ್ಲವೂ, ಈಗಾಗಲೇ ಅಂಬಾನಿ ಹಾಗೂ ಆದಾನಿಗಳ ವಹಿವಾಟಿನಲ್ಲಿ ಗಣನೀಯ ಪ್ರಮಾಣದ ನಷ್ಟವನ್ನು ಉಂಟು ಮಾಡಲು ಪ್ರಾರಂಭಿಸಿದೆ. ಆದ್ದರಿಂದ ಎಚ್ಚೆತ್ತುಕೊಂಡಿರುವ ಅಂಬಾನಿ-ಆದಾನಿ ಕಂಪನಿಗಳು ಒಂದೆಡೆ ಸರ್ಕಾರಕ್ಕೆ ತಮ್ಮ ಆಸ್ತಿ-ಪಾಸ್ತಿಗಳ ರಕ್ಷಣೆ ಮಾಡಬೇಕೆಂದು ತಾಕೀತುಮಾಡುತ್ತಾ ಮತ್ತೊಂದೆಡೆ ತಮ್ಮಂಥ ಸ್ವದೇಶಿ ಹಾಗೂ ಆತ್ಮ ನಿರ್ಭರ ಉದ್ಯಮಿಗಳನ್ನು ನಾಶಮಾಡಲೆಂದೇ ವಿದೇಶೀ ಶಕ್ತಿಗಳು ಕೆಲವು ಗುಂಪುಗಳಿಗೆ ದುಡ್ಡುಕೊಟ್ಟು ಈ ಹೋರಾಟವನ್ನು ಮಾಡಿಸುತ್ತಿವೆಯೆಂದೂ, ಅವರನ್ನು ದೇಶದ್ರೋಹದ ಅಪರಾಧಗಳಿಗಾಗಿ ಬಂಧಿಸಬೇಕೆಂದೂ ಗೃಹ ಇಲಾಖೆಗೆ ದೂರು ಕೊಟ್ಟಿವೆ.

ಮತ್ತೊಂದೆಡೆ, ಅಂಬಾನಿಯ ರಿಲೈಯನ್ಸ್ ಕಂಪನಿ ತಾನು ಕಾಂಟ್ರಾಕ್ಟ್ ಫ಼ಾರ್ಮಿಂಗ್ ಮಾಡುವ ಯಾವುದೇ ಇರಾದೆಯನ್ನು ಹೊಂದಿಲ್ಲವೆಂದೂ, ತಮ್ಮ ವಿರೋಧಿಗ ಅಪಪ್ರಚಾರಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿದೆ. ಮತ್ತೊಂದು ಕಡೆ ಆದಾನಿ ಕಂಪನಿ ತಾನು ವ್ಯವಹಾರ ನಡೆಸುತ್ತಿರುವುದೇ ರೈತರ ಉದ್ಧಾರಕ್ಕಾಗಿಯೆಂದೂ, ತಾನು FCI- ಭಾರತೀಯ ಆಹಾರ ನಿಗಮವು- ರೈತರಿಂದ ಕೊಂಡ ಧಾನ್ಯಗಳನ್ನು ತನ್ನ ಗೋದಾಮಿನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡುವ ಕೆಲಸ ಮಾತ್ರ ಮಾಡುತ್ತಾ ದೇಶಕ್ಕೆ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿಕೊಂಡಿದೆ.

ಒಟ್ಟಿನಲ್ಲಿ ಅಂಬಾನಿ ಹಾಗೂ ಆದಾನಿಗಳಿಬ್ಬರೂ ತಮಗೂ ಮತ್ತು ಕೃಷಿ ಕಾಯಿದೆಗಳಿಗೂ ಯಾವ ಸಂಬಂಧವೂ ಇಲ್ಲವೆಂದು ರುಜುವಾತುಪಡಿಸಲು ಹೆಣಗುತ್ತಿವೆ.

ಆದರೆ ವಾಸ್ತವವೇನು?

ಅಸಲಿ ವಿಷಯವೆಂದರೆ ಮೋದಿ ಸರ್ಕಾರದ ಈ ಮೂರು ಕಾಯಿದೆಗಳಿಂದ ಹಾಗೂ ಈ ಹಿಂದಿನ ಯುಪಿಎ ಸರ್ಕಾರ ಪ್ರಾರಂಭಿಸಿದ ಕೃಷಿ ಮಾರುಕಟ್ಟೆ ಖಾಸಗೀಕರಣ ನೀತಿಗಳಿಂದ ಈ ದೇಶದಲ್ಲಿ ಅಪಾರ ಲಾಭ ಮಾಡಿದವರು, ಮಾಡುತ್ತಿರುವವರು ಹಾಗೂ ಮುಂದೆಯೂ ಮಾಡಲಿರುವವರು ಆದಾನಿ ಮತ್ತು ಅಂಬಾನಿಗಳೆ ಆಗಿದ್ದಾರೆ.

ಆದ್ದರಿಂದಲೇ ಈ ಹೋರಾಟದಲ್ಲಿ ಈಗಾಗಲೇ ೬೦ಕ್ಕೂ ಹೆಚು ರೈತರು ಜೀವತೆತ್ತಿದ್ದರೂ ಅಂಬಾನಿ-ಆದಾನಿಗಳ ಅಪರಿಮಿತ ಲಾಭಕ್ಕೆ ಅವಕಾಶ ಕೊಡುವ ನೀತಿಗಳನ್ನು ಹಿಂತೆಗೆದುಕೊಳ್ಳಲು ಮೋದಿ ಸರ್ಕಾರ ಸಿದ್ಧವಿಲ್ಲ. ಸುಪ್ರೀಂಕೋರ್ಟೂ ತಯಾರಿಲ್ಲ.

AALC- ಆಹಾರ ದಾಸ್ತಾನಿನ ಆದಾನೀ ಕರಣ

ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯಿದೆಗಳಲ್ಲಿ ಹೆಚ್ಚು ಚರ್ಚೆಯಾಗದಿರುವುದು ಅಗತ್ಯ ವಸ್ತುಗಳ ತಿದ್ದುಪಡಿ ಕಾಯಿದೆ. ಈ ಕಾಯಿದೆ ಜಾರಿಯಾಗುವ ಮುಂಚೆ ಆಹಾರ ಧಾನ್ಯಗಳ ದಾಸ್ತಾನು, ಸಾಗಾಟ ಮತ್ತು ಮಾರಾಟಗಳ ಮೇಲೆ ಸರ್ಕಾರದ ನಿಯಂತ್ರಣವಿತ್ತು.

ಆದರೆ ವಾಜಪೇಯಿಯವರು ಮೊದಲಬಾರಿಗೆ ಪ್ರಧಾನಿಯಾದಾಗಲೇ ೨೦೦೦ ದಲ್ಲಿ ಈ ವ್ಯವಸ್ಥೆಯನ್ನು ಬದಲು ಮಾಡಿ ಆಹಾರ ನಿಗಮದ ದಾಸ್ತಾನು ವಹಿವಾಟನ್ನು ಖಾಸಗಿಯವರಿಗೆ ವಹಿಸಿಕೊಡುವ ಪ್ರಸ್ತಾಪವನ್ನು ಪರಿಗಣಿಸಲಾಗಿತ್ತು.

ಏಕೆಂದರೆ ಕೃಷಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳವು ಬರಬೇಕೆಂದರೆ ಆಹಾರ ನಿಗಮ ವ್ಯವಸ್ಥೆ ರದ್ದಾಗಬೇಕೆಂಬುದು ಕೃಷಿ ಕಂಪನಿಗಳ ಆಗ್ರಹವಾಗಿತ್ತು. ಏಕೆಂದರೆ ಮಾರುಕಟ್ಟೆಯಲ್ಲಿ ಆಹಾರದ ಬೆಲೆ ಹೆಚ್ಚಾದರೆ ನಿಗಮದ ಮೂಲಕ ಮಾರುಕಟ್ಟೆಗೆ ಕಡಿಮೆ ದರದಲ್ಲಿ ಧಾನ್ಯ ಪೂರೈಕೆ ಮಾಡಿ ದರವನ್ನು ತಗ್ಗಿಸುವ ವ್ಯವಸ್ಥೆ ಖಾಸಗಿ ವ್ಯಾಪಾರಿಗಳ ಲಾಭಕ್ಕೆ ದೊಡ್ಡ ಅಡ್ಡಿಯಾಗಿತ್ತು. ಹೀಗಾಗಿ ವಿಶ್ವಬ್ಯಾಂಕ್-WTO ಮೂಲಕವೂ ಜಾಗತಿಕ ದೈತ್ಯ ಕೃಷಿ ಉದ್ಯಮಿಗಳು ಭಾರತದ ಆಹಾರ ನಿಗಮ ಸಂಸ್ಥೆಯನ್ನೂ ಹಾಗೂ ಸರ್ಕಾರವೇ ರೈತರಿಂದ ಕನಿಷ್ಟ ದರ ಕೊಟ್ಟು ಖರೀದಿ ಮಾಡುವ ವ್ಯವಸ್ಥೆಯನ್ನು ರದ್ದುಮಾಡಬೇಕೆಂಬ ಒತ್ತಡವನ್ನು ಹಾಕುತ್ತಲೇ ಬಂದಿದ್ದವು. ಈ ಒತ್ತಡಗಳಿಗೆ ಮಣಿದು ಯುಪಿಎ ಸರ್ಕಾರ ಅಂಶಿಕವಾಗಿ ಆಹಾರ ದಾಸ್ತಾನಿನ ಖಾಸಗೀಕರಣ ಯೋಜನೆಯನ್ನು ೨೦೦೫ರಲ್ಲಿ ಪ್ರಾರಂಭಿಸಿತ್ತು.

ಇದನ್ನೂ ಓದಿ: ರೈತರಿಗೆ ಹೆದರಿದ ಸರ್ಕಾರ: 26ಕ್ಕೆ ರೈತರ ಟ್ರ್ಯಾಕ್ಟರ್ ರ್‍ಯಾಲಿ ತಡೆಯುವಂತೆ ಸುಪ್ರೀಂಗೆ ಮನವಿ!

ಆಗಲೇ ಗಾಳಿಯ ದಿಕ್ಕನ್ನು ಅರಿತುಕೊಂಡ ಆದಾನಿ ಕಂಪನಿ Adani Agro Logistics Limited- AALC ಕಂಪನಿಯನ್ನೂ ಸ್ಥಾಪಿಸಿತು.

ಆದರೆ ಯುಪಿಎ ಸರ್ಕಾರ ಅಗತ್ಯ ವಸ್ತುಗಳ ತಿದ್ದುಪಡಿ, ಕಾಂಟ್ರಾಕ್ಟ್ ಫಾರ್ಮಿಂಗ್ ಹಾಗೂ APMC ಕಾಯಿದೆಗಳಿಗೆ ಕಂಪನಿ ಪರವಾದ ತಿದ್ದುಪಡಿ ಮಾಡುವಷ್ಟು ಸಂಖ್ಯಾಬಲವನ್ನು ಹೊಂದಿರಲಿಲ್ಲ. ವಿಪರ್ಯಾಸವೆಂದರೆ ಆಗ ಯುಪಿಎ ಸರ್ಕಾರ ಕಂಪನಿಗಳ ಪರವಾಗಿ ಮಾಡಬೇಕೆಂದಿದ್ದ ಸಣ್ಣಪುಟ್ಟ ತಿದ್ದುಪಡಿಗಳನ್ನು ರೈತ ಹಿತಾಸಕ್ತಿಯನ್ನು ಮುಂದುಮಾಡಿ ವಿರೋಧಿಸಿದ್ದು ಬಿಜೆಪಿ ಪಕ್ಷವೇ!

ಆದರೆ ೨೦೧೪ರಲ್ಲಿ ಮೋದಿ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಮೇಲೆ ಈ ಹಿಂದಿನ ಕಾಯಿದೆಗಳಿಗೆ ದೊಡ್ಡ ಮಟ್ಟದ ತಿದ್ದುಪಡಿ ತರದೆಯೇ ಕೃಷಿ ಸರಕುಗಳ ದಾಸ್ತಾನು, ಕಾಂತ್ರಾಕ್ಟ್ ಫಾರ್ಮಿಂಗ್, ಕೃಷಿ ಮಾರುಕಟ್ತೆಯಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕೊಡುತ್ತಾ ಬಂದಿತು. ಇದರ ಅತಿದೊಡ್ಡ ಲಾಭ ಪಡೆದುಕೊಂಡಿದ್ದು ಮೋದಿಯವರ ಅತ್ಯಾಪ್ತ ರಾಗಿದ್ದ ಆದಾನಿ.

೨೦೦೫ರಲ್ಲೇ ಆದಾನಿ ಕಂಪನಿಗೆ ಆಹಾರ ನಿಗಮವು ತನ್ನ ಪರವಾಗಿ ಆಹಾರ ದಾಸ್ತಾನು ಮತ್ತು ಸಾಗಾಟದ ಪರವಾನಗಿ ಕೊಟ್ಟಿದ್ದರೂ AALC ಕಂಪನಿ ದೊಡ್ಡ ಪ್ರಮಾಡದಲ್ಲಿ ತನ್ನ ವಹಿವಾಟನ್ನು ವಿಸ್ತರಿಸಿದ್ದೂ ಮತ್ತು ದುಪ್ಪಟು ಲಾಭ ಮಾಡಿದ್ದು ಮೋದಿ ಕಾಲದಲ್ಲೇ..

ಸರ್ಕಾರದ ದುಡ್ಡು-ಆದಾನಿಯ ಗೋಡೋನು!

ಕಳೆದ ದಶಕದ ವೇಳೆಗೆ ಭಾರತದಲ್ಲಿ ಆಹಾರ ಧಾನ್ಯ ಉತ್ಪತ್ತಿಯ್ತು ಆಹಾರ ನಿಗಮದ ದಾಸ್ತಾನು ಸಾಮರ್ಥ್ಯಕ್ಕಿಂತ ೪೦ ಲಕ್ಷ ಟನ್ನಿನಷ್ಟು ಹೆಚ್ಚಿಗೆಯಾಗಿತ್ತು. ಅಷ್ಟು ಪ್ರಮಾಣದ ಹೆಚ್ಚುವರಿ ಸಂಗ್ರಹವನ್ನು ದಾಸ್ತಾನು ಮಾಡಿಕೊಳ್ಳಲು ನಿಗಮವು ಹೊಸ ಸ್ಟೀಲ್ ಸಂಗ್ರಹಾಗರ-ಸೈಲೋಗಳನ್ನು ನಿರ್ಮಿಸಬೇಕಿತ್ತು. ಆದರೆ ಅದಕ್ಕೆ ಸುಮಾರು ೪೦೦೦ ಕೋಟಿ ರೂ.ಗಳು ವೆಚ್ಚವಾಗುವುದರಿಂದ ಆ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಬೇಕೆಂದು ಮೋದಿ ಸರ್ಕಾರ ತೀರ್ಮಾನ ಕೈಗೊಂಡಿತು. ಈ ತೀರ್ಮಾನದ ಪ್ರಮುಖ ಫಲಾನುಭವಿಯಾಗಿದ್ದು-ಆದಾನಿಯ AALC ಕಂಪನಿ.

ಈ ಯೋಜನೆಯ ಪ್ರಕಾರ ಆದಾನಿಯ AALC ಕಂಪನಿಯು ೭೦೦ ಕೋಟಿ ವೆಚ್ಚದಲ್ಲಿ ಪಂಜಾಬ್, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡುಗಳಲ್ಲಿ ಅತ್ಯಾಧುನಿಕ ಗುಣಮಟ್ಟದ ಹಾಗೂ ಒಟ್ಟಾರೆ ೧೦ ಲಕ್ಷ ಟನ್ ದಾಸ್ತಾನು ಸಾಮರ್ಥ್ಯದ ಸೈಲೋಗಳನ್ನು ನಿರ್ಮಿಸುತ್ತದೆ. ಆದಾನಿಯವರ ವೆಬ್ ಸೈಟಿನಲ್ಲಿ ಇದರ ಬಗ್ಗೆ ಬರೆದುಕೊಂಡಿರುವಂತೆ ಇಲ್ಲಿ ರೈತರು ತಮ್ಮ ಸರಕುಗಳನ್ನು ತಂದು ಸುರಿದುಹೋದರೆ ಸಾಕು, ಕಂಪನಿಯೇ ಅದನ್ನು ಅತ್ಯಾಧುನಿಕ ಯಂತ್ರಗಳಿಂದ ಸ್ವಚ್ಚಗೊಳಿಸಿ, ಹೊಟ್ಟು ತೆಗೆದು, ಸರಿಯಾದ ತಾಪಮಾನದಲ್ಲಿ ಸೈಲೋಗಳಲ್ಲಿ ಸಂಗ್ರಹಿಸುತ್ತದೆ. ಮತ್ತು ಆ ನಂತರ ಅದು ತನ್ನದೇ ಅತ್ಯಾಧುನಿಕ ಸ್ವಂತ ರೈಲಿನಲ್ಲಿ ಅಹಾರ ನಿಗಮವು ಹೇಳುವ ಕಡೆ ಸರಬರಾಜು ಮಾಡುತ್ತದೆ. ಈ ವ್ಯವಹಾರಕ್ಕಾಗಿಯೇ ಆದಾನಿ ಕಂಪನಿ ತಲಾ ೫೦ ವ್ಯಾಗನ್ನುಗಳಿರುವ ಏಳು ಟ್ರೈನುಗಳನ್ನು ಖರೀದಿ ಮಾಡಿದೆ. ಇಲ್ಲಿ ಲೋಡ್-ಅನ್ಲೋಡ್ ಮಾಡುವುದು ಯಂತ್ರಗಳೇ. ಕೂಲಿಕಾರ್ಮಿಕರು ಬೇಕಿಲ್ಲ. ಹಾಗೂ ೫೦ ವ್ಯಾಗನ್ನುಗಳಿರುವ ಒಂದು ರೇಕಿಗೆ ಲೋಡ್ ಮಾಡಲು ಕೇವಲ ೫ ಗಂಟೆಗಳು ಸಾಕಂತೆ..

(https://www.adaniagrilogistics.com/silo-storage)

ಆದರೆ ಇದರಿಂದ ಆದಾನಿ ಕಂಪನಿಗೇನು ಲಾಭ?

೨೦೧೫ರ ಒಪ್ಪಂದದ ಪ್ರಕಾರ ಭಾರತೀಯ ಆಹಾರ ನಿಗಮವು ಒಂದು ಕ್ವಿಂಟಾಲ್ ಧಾನ್ಯವನ್ನು ಸಂಗ್ರಹಿಸಿಟ್ಟುಕೊಳ್ಳಲು ಒಂದು ತಿಂಗಳಿಗೆ ೧೦೦ ರೂ. ಬಾಡಿಗೆಯನ್ನು ನೀಡುತ್ತದೆ. ಹಾಗೂ ಈ ಒಪ್ಪಂದವು ೩೦ ವರ್ಷಗಳ ಕಾಲ ಖಾಯಂ ಆಗಿರುವುದಲ್ಲದೆ ಪ್ರತಿವರ್ಷ ಬಾಡಿಗೆ ದರವನ್ನು ಹಣದುಬ್ಬರಕ್ಕೆ ತಕ್ಕಂತೆ ಪರಿಷ್ಕರಿಸಲಾಗುವುದು.

ಆದಾನಿ ಕಂಪನಿಯ ವೆಬ್ ಸೈಟೇ ಹೇಳುವಂತೆ ಪ್ರತಿವರ್ಷ ಅದು ೧೦ ಲಕ್ಷ ಟನ್ನು ಆಹಾರ ಧಾನ್ಯಗಳನ್ನು ಆಹಾರ ನಿಗಮಕ್ಕಾಗಿ ಸಂಗ್ರಹಿಸಿಟ್ಟುಕೊಳ್ಳಲಿದೆ.

ತಿಂಗಳಿಗೆ ಒಂದು ಕ್ವಿಂಟಾಲಿಗೆ ೧೦೦ ರೂ. ಬಾಡಿಗೆಯಂತೆ ೧೦ ಲಕ್ಷ ಟನ್ನಿಗೆ ಒಂದು ವರ್ಷಕ್ಕೆ ಆದಾನಿ ಕಂಪನಿಗೆ ಸರ್ಕಾರವು ತೆರಲಿರುವ ಬಾಡಿಗೆ ಎಷ್ಟು? ೧೨೦ ಕೋಟಿ.

ಇದನ್ನೂ ಓದಿ: ರೈತ ಹೋರಾಟದ ಕಿಡಿ ಜಗಮೋಹನ್‌ ಸಿಂಗ್‌ ಪಟಿಯಾಲ; ಇವರು ಯಾರು ಗೊತ್ತೇ?

ಅಂದರೆ ಕೇವಲ ಆರು ವರ್ಷಗಳಲ್ಲಿ ಈ ಸೈಲೋಗಳನ್ನು ಕಟ್ಟಲು ಆದ ೭೦೦ ಕೋಟಿಯನ್ನು ಆದಾನಿ ಕಂಪನಿ ವಾಪಸ್ ಪಡೆದುಕೊಂಡಿರುತ್ತದೆ. ಆದರೆ ಕಾಂಟ್ರಾಕ್ಟ್ ೩೦ ವರ್ಷಗಳದ್ದು. ಹೀಗಾಗಿ ಉಳಿದ ೨೩ ವರ್ಷ ಲಾಭ! ಇಂಥಾ ಲಾಭ ಯಾವ ಖಾಸಗಿ ವ್ಯವಹಾರಗಳಲ್ಲಿ ಇರಲು ಸಾಧ್ಯ??

ಇದು ಕೇವಲ ದಾಸ್ತಾನಿನ ವ್ಯವಹಾರ. ಅವನ್ನು ತನ್ನ ಸ್ವಂತ ಟ್ರೈನುಗಳಲ್ಲಿ ನಿಗಮವು ಹೇಳಿದ ಕಡೆ ಸರಬರಾಜು ಮಾಡುವ ವೆಚ್ಚವೂ ಸೇರಿದಲ್ಲಿ ಟನ್ನಿಗೆ ೨೫೦೦ ರೂ. ಅನ್ನು ಸರ್ಕಾರ ಕಂಪನಿಗೆ ೩೦ ವರ್ಷಗಳ ಕಾಲ ಪಾವತಿಸಲಿದೆ. ಅಂದರೆ ಸರ್ಕಾರದ ವೆಚ್ಚದಲ್ಲಿ ಆದಾನಿ ಕಂಪನಿ ಲಕ್ಷಾಂತರ ಟನ್ನ್ ಸಾಮರ್ಥ್ಯದ ದಾಸ್ತಾನು ಸಂಗ್ರಹಾಗಾರಗಳನ್ನು ನಿರ್ಮಿಸಿಕೊಂಡಂತಾಗಲಿಲ್ಲವೇ?

ಇಷ್ಟೆಲ್ಲಾ ಆದ ನಂತರ ಇದೀಗ ಮೋದಿ ಸರ್ಕಾರ ಅಧಿಕೃತವಾಗಿ ಅಗತ್ಯ ವಸ್ತುಗಳ ಕಾಯಿದೆಯನ್ನು ರದ್ದು ಮಾಡಿ ಯಾವ ಖಾಸಗಿ ಕಂಪನಿಯಾದರೂ ಎಷ್ಟು ಬೇಕಾದರೂ ಸಂಗ್ರಹ ಮಾಡಿ, ಎಷ್ಟು ಬೇಕಾದರೂ ರಫ್ತು ಮಾಡಬಹುದು ಎಂಬ ಕಾಯಿದೆಯನ್ನು ಜಾರಿ ಮಾಡಿದೆ.

ಆದರೆ ಈ ಹೊಸ ಕಾಯಿದೆಯ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಸಾಮರ್ಥ್ಯವಿರುವುದು ಮೋದಿ ಮಿತ್ರ ಆದಾನಿ ಕಂಪನಿಗೆ ಮಾತ್ರ. ಏಕೆಂದರೆ ಈಗ ಭಾರತದಲ್ಲಿ ಆಹಾರ ನಿಗಮವನ್ನು ಬಿಟ್ಟರೆ ಆ ಪ್ರಮಾಣದಲ್ಲಿ ದಾಸ್ತಾನು ಸಾಮರ್ಥ್ಯ ಇರುವುದು ಆದಾನಿಗೆ. ಮತ್ತು ಅದಕ್ಕೆ ಆ ಸಾಮರ್ಥ್ಯ ಬಂದಿದ್ದು ಮೋದಿ ಸರ್ಕಾರದ ಕಳೆದ ಆರು ವರ್ಷಗಳ ನೀತಿಯಿಂದ..

ಸಾಗಾಟ ಸಾಮ್ರಾಟ- ಕಪ್ಪ ಮೋದಿಗೆ, ಕಷ್ಟ ರೈತರಿಗೆ

ಆದಾನಿ ಕಂಪನಿ ಕಳೆದ ಆರು ವರ್ಷಗಳಿಂದ ದೊಡ್ದ ಮಟ್ಟದಲ್ಲಿ ವಿಮಾನ ನಿಲ್ದಾಣಗಳ ಹಾಗೂ ರೈಲ್ವೆ ನಿಲ್ದಾಣಗಳ ನಿರ್ವಹಣಾ ಗುತ್ತಿಗೆಯನ್ನು ತೆಗೆದುಕೊಳ್ಳುತ್ತಿರುವುದನ್ನು ಈ ಹಿನ್ನೆಲೆಯೆಲ್ಲಿ ಅರ್ಥಮಾಡಿಕೊಂಡರೆ ಒಟ್ಟಾರೆ ಚಿತ್ರಣ ಇನ್ನಷ್ಟು ಸ್ಪಷ್ಟವಾಗುತ್ತದೆ.

ಈ ಹೊಸ ಕಾಯಿದೆಗಳೀಂದ ನೇರವಾಗಿ ರೈತರಿಂದ ಬೇಕೆಂದಷ್ಟು ಖರೀದಿ ಮಾಡಿ, ಸೈಲೋಗಳಲ್ಲಿ ದಾಸ್ತಾನು ಮಾಡಿಟ್ಟುಕೊಂಡು, ೧) ಎಲ್ಲಿ ಬೇಕಾದಲ್ಲಿ ತನ್ನದೇ ಟ್ರೈನುಗಳಲ್ಲಿ ಸಾಗಾಟ ಮಾಡಿ ಹೆಚ್ಚಿನ ಲಾಭಕ್ಕೆ ದೇಶೀಯ ಮಾರುಕಟ್ಟೆಗೇ ಮಾರುವುದು ಅಥವಾ ೨) ವಿದೇಶಕ್ಕೆ ರಫ್ತು ಮಾಡುವುದು, ಆದಾನಿಗೆ ಸುಲಭವಾಗುತ್ತದೆ. ಹೀಗಾಗಿ ಕೃಷಿ ಸಾಗಾಟ ಸೌಕರ್ಯ- ಅಗ್ರಿ ಲಾಜಿಸ್ಟಿಕ್ಸ್- ಮಾರುಕಟ್ಟೆಯಲ್ಲಿ ಪ್ರಶ್ನಾತೀತ ದೈತ್ಯ ಮಾನೋಪಲಿಯಾಗಿ ಆದಾನಿ ಕಂಪನಿ ಬೆಳೆಯಲಿದೆ.

ಇದನ್ನೂ ಓದಿ: ಹೊಸ ಬೆಳೆ ಬೆಳೆಯಬಲ್ಲವ… ಹೊಸ ನಗರವನ್ನು ಸೃಷ್ಟಿಸಬಲ್ಲ! ದೆಹಲಿ ಗಡಿಯಲ್ಲಿ ನಗರ ನಿರ್ಮಿಸುತ್ತಿದ್ದಾರೆ ರೈತರು

ಆದಾನಿಯವರ ೨೦೧೯-೨೦ರ ವಾರ್ಷಿಕ ವಹಿವಾಟು ವರದಿಯ ಪ್ರಕಾರ ಒಟ್ಟಾರೆ ಆದಾನಿ ಸಾಮ್ರಾಜ್ಯದ ಗಳಿಕೆಯು ಶೇ.೨೭ರ ದರದಲ್ಲಿ ಬೆಳೆದರೆ, ಅಗ್ರಿ ಲಾಜಿಸ್ಟಿಕ್ಸ್ ಮೂಲದ ಲಾಭದ ದರವು ಶೇ.೬೦ರ ದರದಲಿ ಬೆಳೆದಿದೆ.

ಅದೇ ವರದಿಯಲ್ಲಿ ಆದಾನಿ ಕಂಪನಿಯು :

“AALL has long term (20-30 year) guaranteed offtake contracts on use or pay basis with 70%+ EBITDA margins. AALL targets to double infrastructure capacity in the next 3 years and tap the new 12.5 MMT infrastructure market as well”

(ಅಂದರೆ- ಆದಾನಿ ಅಗ್ರಿ ಲಾಜಿಸ್ಟಿಕ್ಸ್ ಕಂಪನಿಗೆ ಸರ್ಕಾರದಿಂದ ೨೦-೩೦ ವರ್ಷಗಳ ಖಾತರಿಯಾದ ಒಪ್ಪಂದವಿದೆ. ಇದು ಶೇ. ೭೦ ರಷ್ಟು ಲಾಭವನ್ನು ಗಳಿಸಿಕೊಡಲಿದೆ. ಹೀಗಾಗಿ ಮುಂದಿನ ಮೂರು ವರ್ಷಗಳಲ್ಲಿ ತನ್ನ ಸಾಮರ್ಥ್ಯವನ್ನು ೧.೨೫ ಕೋಟಿ ಟನ್ನಿಗಳಿಗೆ ಹೆಚ್ಚಿಸಿಕೊಳ್ಳುವ ಯೋಜನೆಯನ್ನು ಹೊಂದಿದೆ)..ಎಂದು ಹೇಳಿಕೊಂಡಿದೆ.

((https://www.adaniports.com/-/media/Project/Ports/Investor/corporate-governance/Corporate-Announcement/other-intimation–1/24523022019Intimation-of-proposal-for-acquisition.pdf?la=en

ರೈತರಿಗೆ ಬೆಲೆಯನ್ನು ಖಾತರಿಗೊಳಿಸಲು ನಿರಾಕರಿಸುವ ಮೋದಿ ಸರ್ಕಾರ ಆದಾನಿ ಕಂಪನಿಗೆ ಒಂದಲ್ಲ ಎರಡಲ್ಲ ೩೦ ವರ್ಷಗಳ ಕಾಲ ಶೇ. ೭೦ ರಷ್ಟು ಲಾಭವನ್ನು ಖಾತರಿಗೊಳಿಸಿದೆ. ಮಿತ್ರಋಣ ತೀರಿಸುತ್ತಿದೆ. ದೇಶಕ್ಕೆ ದ್ರೋಹಬಗೆಯುತ್ತಿದೆ.

ಆತ್ಮಬರ್ಬರ ಆದಾನಿ ವಿಲ್ಮರ್ ಮತ್ತು ಆದಾನಿ ಫ್ರೆಶ್

ಇದರ ಜೊತೆಗೆ ಆದಾನಿ ಕಂಪನಿಯು ಸಿಂಗಾಪುರದ ವಿಲ್ಮರ್ ಕಂಪನಿಯ ಜೊತೆ ಸೇರಿ ಆದಾನಿ-ವಿಲ್ಮರ್ ಎಂಬ ಬಹುರಾಷ್ಟ್ರೀಯ ಕಂಪನಿಯನ್ನು ಸ್ಥಾಪಿಸಿಕೊಂಡು ಭಾರತದ ಖಾದ್ಯ ತೈಲ ಮಾರುಕಟ್ಟೆಗೆ ಲಗ್ಗೆ ಹಾಕಿದೆ. ಇದಕ್ಕೆ ಕಾರಣ ಭಾರತವು ಶೇ. ೭೦ ರಷ್ಟು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ಸದ್ಯಕ್ಕೆ ಅದರಲ್ಲಿ ಸ್ವಾವಲಂಬನೆಯು ಸಾಧ್ಯವೂ ಇಲ್ಲ ಎಂದು ಅರ್ಥಮಾಡಿಕೊಂಡಿರುವ ಈ ಸ್ವದೇಶಿ ಆದಾನಿ, ವಿಲ್ಮರ್ ಜೊತೆಗೂಡಿ ವಿದೇಶಿ ಖಾದ್ಯ ತೈಲವನ್ನು ಭಾರತಕ್ಕೆ ಮಾರುವುದರಲ್ಲಿ ಈಗ ನಂಬರ್ ೧ ನೇ ಸ್ಥಾನವನ್ನು ಪಡೆದುಕೊಂಡಿದೆ. ಆದರೂ ತನನ್ನು ಆತ್ಮನಿರ್ಭರ ಉದ್ಯಮಿ ಎಂದು ಹೇಳಿಕೊಳ್ಳುತ್ತದೆ.

ತಾವು ಕಾಂಟ್ರಾಕ್ಟ್ ಫಾರ್ಮಿಂಗ್ ನಲ್ಲಿ ಇಲ್ಲ ಎಂದು ಲಜ್ಜೆಗೆಟ್ಟು ಹೇಳಿಕೊಳ್ಳುವ ಆದಾನಿ ಕಂಪನಿ ಕೆಲವು ವರ್ಷಗಳ ಕೆಳಗೆ ಆದಾನಿ ಅಗ್ರಿ ಫ್ರೆಶ್ ಎಂಬ ಹೊಸ ಕಾಂಟ್ರಾಕ್ಟ್ ಫಾರ್ಮಿಂಗ್ ಫಲಾನುಭವಿ ವ್ಯವಹಾರವನ್ನು ಸ್ಥಾಪಿಸಿದೆ. ಅದರ ೨೦೧೯ರ ವರದಿಯೇ ಹೇಳುವಂತೆ ೨೦೧೮-೧೯ರಲ್ಲಿ ಅದು ಹಿಮಾಚಲ ಪ್ರದೇಶದ ಸೇಬು ಬೆಳೆಗಾರರಿಂದ ೧೯೩೧೪ ಟನ್ ಸೇಬನ್ನು ೭೯ ಕೋಟಿಗೆ ಖರೀದಿ ಮಾಡಿ ೧೭೮ ಕೋಟಿಗೆ ಮಾರುಕಟ್ಟೆಯಲ್ಲಿ ಮಾರಿಕೊಂಡು ನಿವ್ವಳ ೧೦೦ ಕೋಟಿ ಲಾಭ ಮಾಡಿದೆ.

(https://www.adanienterprises.com/-/media/Project/Enterprises/Investors/Investor-Downloads/Annual-Report/AEL-AR-2019-20-05-06-2020.pdf

ಅಂಬಾನಿ ರೀಟೈಲ್ಸ್ ಮತ್ತು ಲಾಭಲೂಟಿಯ ಡೀಟೈಲ್ಸ್

ಇನ್ನೂ ಈ ಆದಾನಿಯ ಹಿರಿಯಣ್ಣ ಅಂಬಾನಿ ಸಹ ತಮ್ಮ ಕಂಪನಿ ದೇಶದಲ್ಲೆಲ್ಲೂ ಕಾಂಟ್ರಾಕ್ಟ್ ಫಾರ್ಮಿಂಗ್ ಮಾಡುತ್ತಿಲ್ಲ. ತಾನೂ ರೈತರಿಂದ ಖರೀದಿ ಮಾಡಿದರೂ ಅವರಿಗೆ ಮಾರುಕಟ್ಟೆ ಬೆಲೆಯನ್ನೂ ಕೋಟ್ಟು ಖರೀದಿ ಮಾಡುತ್ತೇವೆ ನನ್ನನ್ನು ನಂಬಿ ಪ್ಲೀಸ್ ಎಂದು ಸಿಲ್ಲಿ ಮೊಸಳೆ ಕಣ್ಣೀರನ್ನು ಸುರಿಸುತ್ತಿದೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳು ವರದಿ ಮಾಡಿರುವಂತೆ ಮೊನ್ನೆ ಸಿಂಧನೂರಿನಲ್ಲಿ ರಿಲೈಯನ್ಸ್ ಮಾರ್ಟ್ ಸಂಸ್ಥೆಯು ಸ್ವಾಸ್ಥ್ಯ ಎಂಬ ರೈತ ಉತ್ಪಾದಕ ಸಹಕಾರಿ ಸಂಘದಿಂದ ಸಾವಿರ ಟನ್ ಸೋನಾ ಮಸೂರಿ ಅಕ್ಕಿಯನ್ನು ಕ್ವಿಂಟಾಲಿಗೆ ೧೯೫೦ ರೂ. ಕೊಟ್ಟು ಕೊಂಡಿದ್ದನ್ನು ಉಲ್ಲೇಖಿಸಿ ಬಿಜೆಪಿ ಪಕ್ಷ ಕೃಷಿ ಮಾರುಕಟ್ಟೆಯ ಖಾಸಗೀಕರಣದ ಪರವಾಗಿ ಮಾತ್ರವಲ್ಲದೆ ಅಂಬಾನಿ ಪರವಾಗಿಯೂ ಲಜ್ಜೆಗೇಡಿ ಪ್ರಚಾರವನ್ನು ಪ್ರಾರಂಭಿಸಿಬಿಟ್ಟಿದೆ. ರಿಲೈಯನ್ಸ್ ಮಾಡುತ್ತಿರುವ ಈ ಖರೀದಿಯು ತಾನು ಕೃಷಿ ಮಾರುಕಟ್ಟೆಯ ವ್ಯವಹಾರದಲ್ಲೇ ಇಲ್ಲ ಎಂದು ಅದು ಮಾಡುತ್ತಿರುವ ಪ್ರಚಾರವನ್ನು ಸುಳ್ಳೆಂದು ಸಾಬೀತು ಮಾಡುತ್ತದೆ ಎಂಬ ಕನಿಷ್ಟ ತಿಳವಳಿಕೆಯೂ ಈ ಅರಿವುಗೇಡಿಗಳಿಗೆ ಇಲ್ಲ.

ಹಾಗೆ ನೋಡಿದರೆ ಚಿಲ್ಲರೆ ಮಾರಾಟದಲ್ಲಿ ಕಾರ್ಪೊರೇಟ್ ಬಂಡವಾಳಕ್ಕೂ ಅನುವು ಕೊಟ್ಟಾಗಿನಿಂದಲೂ ಅಂಬಾನಿಯ ರಿಲಯನ್ಸ್ ಎಲ್ಲಾ ಬಗೆಯ ಚಿಲ್ಲರೆ ಮಾರಾಟವನ್ನೂ ಆವರಿಸಿಕೊಳ್ಳುತ್ತಿದೆ. ಅದರ ಭಾಗವಾಗಿಯೇ ೨೦೦೬ರಲ್ಲಿ ಅದು ಪ್ರಾರಂಭಿಸಿದ ತಾಜಾ ತರಕಾರಿ ಹಾಗೂ ಹಣ್ಣುಗಳ ಮಾರಾಟದ ರಿಲೈಯನ್ಸ್ ಫ್ರೆಶ್ ವಿಭಾಗವು ಇಂದು ದೇಶಾದ್ಯಂತ ೬೨೧ ಮಳಿಗೆಗಳನ್ನು ಹೊಂದಿದ್ದು ಪ್ರತಿದಿನ ೨೦೦ ಟನ್ನಿನಷ್ಟು ಹಣ್ಣುಗಳನ್ನೂ ಹಾಗೂ ೩೦೦ ಟನ್ನಿನಷ್ಟು ತರಕಾರಿಗಳನ್ನೂ ಮಾರಾಟ ಮಾಡುತ್ತಿದೆ. ತನ್ನ ರಿಲೈಯನ್ಸ್ ಫ್ರೆಶ್ ನ ವೆಬ್ ಸೈಟ್ಟಿನಲ್ಲೇ ಅದು ಜಾಹೀರಾತು ಮಾಡಿಕೊಳ್ಳುವಂತೆ ಈ ಖರೀದಿಗಾಗಿ ಅದು ದೊಡ್ಡ ಸಂಖ್ಯಯ ರೈತಾಪಿಯ ಜೊತೆ ನೇರ ವಹಿವಾಟಿನಲ್ಲಿ ತೊಡಗಿಕೊಂಡಿದೆ ಅರ್ಥಾತ್ ಪ್ರತ್ಯಕ್ಷ ಅಥವಾ ಪರೋಕ್ಷ ರೂಪದ ಕಾಂಟ್ರಾಕ್ಟ್ ಫಾರ್ಮಿಂಗ್ ಸ್ವರೂಪದ ಸಂಬಂಧಗಳನ್ನು ಇಟ್ಟುಕೊಂಡಿದೆ.

ಜೊತೆಗೆ ರಿಲಯನ್ಸ್ ಸಂಸ್ಥೆಯು ಭಾರತದ ಅತಿ ದೊಡ್ಡ ಮಾವು ಉತ್ಪಾದಕನೂ ಆಗಿದ್ದು ಗುಜರಾತಿನಲ್ಲಿ ತನ್ನದೇ ೬೦೦ ಎಕರೆ ಮಾವು ತೋಪನ್ನೂ ಹೊಂದಿದೆ.

ಅಂಬಾನಿಯ ಜಿಯೋಮಾರ್ಟ್- ಕೃಷಿ ಮಾರುಕಟ್ಟೆಯ ಪ್ಯಾರಾಸೈಟ್

ಎಲ್ಲಕ್ಕಿಂತ ಮುಖ್ಯವಾಗಿ ಅಂಬಾನಿಯವರ ಅತಿದೊಡ್ಡ ವ್ಯಾವಹಾರಿಕ ಸಂಸ್ಥೆಯಾದ ಜಿಯೋಮಾರ್ಟ್ ಸಂಸ್ಥೆ ಈ ದೇಶದ ಚಿಲ್ಲರೆ ಮಾರಾಟದ ನಕ್ಷೆಯನೇ ಬದಲಿಸಲಿದೆ.

ಆ ಕಾರಣಕ್ಕಾಗಿಯೇ ಫೇಸ್ಬುಕ್ ಸಹ ಅಂಬಾನಿಯವರ ಜಿಯೋ ಮಾರ್ಟ ನಲ್ಲಿ ೫೩೦೦೦ ಕೋಟಿ ಹೂಡಿಕೆಯನ್ನು ಮಾಡಿದೆ. ಒಂದು ಅಂದಾಜಿನ ಪ್ರಕಾರ ಭಾರತದ ಅಸಂಘಟಿತ ಚಿಲ್ಲರೆ ಮಾರಾಟದ ವಾರ್ಷಿಕ ವಹಿವಾಟು ೮ ಲಕ್ಷ ಕೋಟಿಗಳನ್ನು ಮೀರಿದೆ. ಅದರಲ್ಲಿ ಶೇ. ೩೦ ಭಾಗ ಆಹಾರ ಧಾನ್ಯಗಳೆ ಮಾರಾಟವೇ ಆಗಿದೆ. ಅಂದಾಜು ೨-೩ ಲಕ್ಷ ಕೋಟಿಗಳಷ್ಟಾಗುವ ಆಹಾರ ಧಾನ್ಯಗಳ ಚಿಲ್ಲರೆ ಮಾರಟವನ್ನು ಸಂಘಟಿತ ಮಾರಾಟದಡಿಯಲ್ಲಿ ತಂದು ಲಾಭ ಸೂರೆ ಹೊಡೆಯುವುದು ಜಿಯೋ ಮಾರ್ಟ್‌ನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ರೈತ ಹೋರಾಟದಲ್ಲಿ ಪಿಲ್ಲರ್‌ ನಂಬರ್‌ಗಳು: ಹೊಸ ವಿಳಾಸಗಳು ಬಾರಿಸುತ್ತಿವೆ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ!

ವ್ಯಾಪಾರಿ ಮತ್ತು ಗ್ರಾಹಕರ ನಡುವೆ ಸಂಘಟಿತ ಹಾಗೂ ನಿರಂತರ ಸಂಬಂಧವನ್ನು ಏರ್ಪಡಿಸಿಕೊಳ್ಳಲು ವಾಟ್ಸಾಪ್ ಮತ್ತು ಪೇಸ್ಬುಕ್ ಬಳಕೆಯಾಗಲಿದೆ. ಹಾಗೂ ಆಹಾರ ಧಾನ್ಯಗಳ ಚಿಲ್ಲರೆ ವ್ಯಾಪಾರದಲ್ಲಿ ಲಾಭ ಹೆಚ್ಚಾಗಬೇಕೆಂದರೆ ರೈತರಿಂದ ಅಗ್ಗದ ಬೆಲೆಗೆ ನೇರ ಖರೀದಿ ಮಾಡಲು ತನ್ನದೇ ಆದ ಮಂಡಿ ಅಥವಾ ಖರೀದಿ ಕೇಂದ್ರ ಹಾಗೂ ಕೇಂದ್ರೀಕೃತವಾದ ದಾಸ್ತಾನು, ಹಾಗೂ ಸರಬರಾಜು ವ್ಯವಸ್ಥೆಯ ಅಗತ್ಯವಿರುತ್ತದೆ.

ಮೋದಿಯವರು ಜಾರಿಗೆ ತಂದಿರುವ ಕಾಯಿದೆಗಳು ಆ ರೀತಿಯಲ್ಲಿ ಜಿಯೊ ಮಂಡಿಗೂ, ಜಿಯೋ ಉಗ್ರಾಣಕ್ಕೂ ಅವಕಾಶ ಮಾಡಿಕೊಡಲಿದೆ

ಆದರೆ ಸಿಂಧನೂರಿನಲ್ಲಿ ಹೆಚ್ಚು ಬೆಲೆ ಕೊಟ್ಟಂತೆ ಎಲ್ಲಾ ಕಡೆಯೂ ಕೊಡಲಿದೆಯೇ?

ವಾಸ್ತವವಾಗಿ ೨೦೧೦-೧೩ರಲ್ಲಿ ಅಂಬಾನಿಯವರ ರಿಲೈಯನ್ಸ್ ಸಂಸ್ಥೆ ಆಂಧ್ರದ ಹಲವಾರು ಪ್ರಾಂತ್ಯಗಳಲ್ಲಿ ಕಾಂಟ್ರಾಕ್ ಕೃಷಿಯನ್ನು ಮಾಡಿತ್ತು. ಅದರ ಬಗ್ಗೆ ಅಧ್ಯಯನ ಮಾಡಿದ್ದ ಆಂಧ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಪ್ರಸಾದ್ ರಾವ್ ಅವರ ವರದಿಯ ಪ್ರಕಾರ ಅಂಬಾನಿ ಜೊತೆ ಒಪ್ಪಂದ ಮಾಡಿಕೊಂಡ ರೈತರಿಗೆ ಮೊದಲ ವರ್ಷ ಸಿಕ್ಕ ಸೌಲಭ್ಯಗಳು ಎರಡನೇ ವರ್ಷ ಸಿಗಲಿಲ್ಲ. ಹಾಗೂ ತಮ್ಮ ಒಪ್ಪಂದದ ಶರತ್ತುಗಳನ್ನು ಮೂರು ವರ್ಶದ ಅವಧಿ ಮುಗಿಯುವತನಕ ಯಾರ ಜೊತೆಗೆ ಹಮ್ಚಿಕೊಳ್ಳಬಾರದೆಂಬ ಮತ್ತು ತಗಾದೆಗಳು ಬಂದರೆ ಮುಂಬೈನ ತಮ್ಮ ಕೇಂದ್ರ ಕಚೇರಿಯಲ್ಲೇ ಬಗೆಹರಿಸಿಕೊಳ್ಳಬೇಕೆಂಬ ಶರತ್ತುಗಳನ್ನು ವಿಧಿಸಲಾಗಿತ್ತು!

ಜೈವಿಕ ಇಂಧನ ರಫ್ತಿಗಾಗಿ ರೈತ ಜೀವಗಳ ಬಲಿ

ಅಂಬಾನಿ ಹಾಗೂ ಹಲವಾರು ವಿದೇಶಿ ಕೃಷಿ ದತ್ಯ ಕಂಪನಿಗಳು ಭಾರತದಲ್ಲಿ ಕಾಂಟ್ರಾಕ್ಟ್ ಫಾರ್ಮಿಂಗ್ ಮಾಡಲು ಹಾತೊರೆಯುತ್ತಿರುವುದು ಆಹಾರ ಧಾನ್ಯಗಳ ಮಾರುಕಟ್ತೆಗಾಗಿ ಮಾತ್ರವಲ್ಲ. ಭಾರತದಲ್ಲಿ ಜೈವಿಕ ಇಂಧನಕ್ಕೆ ಅಗತ್ಯವಾಗಿರುವ ಜಾತ್ರೊಪಾ ವನ್ನು ಬೆಳೆಯುವುದು ರಿಲೈಯನ್ಸ್ ನ ಕೃಷಿ ಮಾರುಕಟ್ತೆಯ ಪ್ರಧಾನ ಉದ್ದೇಶವಾಗಿದೆ. ಇತ್ತೀಚೆಗೆ ಅಂಬಾನಿ ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಭಾಗವಾಗಿ ಶುರು ಮಾಡಿರು Bharat India Jodo- BIJ ಎಂಬ ಯೋಜನೆಯ ಭಾಗವಾಗಿ ಅದು ಹತ್ತು ರಾಜ್ಯಗಳ ಅತ್ಯಂತ ಕುಗ್ರಾಮಗಳ ಸಣ್ಣಪುಟ್ಟ ರೈತರನ್ನು ಒಂದು ಮಾಡಿ ಜಾತ್ರೊಪಾ ಬೆಳೆಯುವಂತೆ ಮಾಡಿ ದೇಶೋದ್ಧಾರ ಮಾಡಿದೆ ಎಂದು ತೋರಿಸಿಕೊಳ್ಳುತ್ತಿದೆ.

OECD ಯ ಇತ್ತೀಚಿನ ವರದಿಯ ಪ್ರಕಾರ ಜೈವಿಕ ಇಂಧನಕ್ಕೆ ಜಾಗತಿಕ ಮಾರುಕಟ್ಟೆ ಹೆಚ್ಚುತ್ತಿದ್ದು ಅದರ ಉತ್ಪಾದನೆಗೆ ಜಗತ್ತು ಭಾರತದತ್ತ ನೋಡುತ್ತಿದೆ. ಚತ್ತೀಸ್‌ಘಡ್ ನ ಹಿಂದಿನ ಬಿಜೆಪಿ ಸರ್ಕಾರ ಈ ಉದ್ದೇಶಕ್ಕಾಗಿ ಅಂಬಾನಿಯವರಿಗೆ ಸಾವಿರಾರು ಎಕರೆ ಸರ್ಕಾರಿ ಜಮೀನನ್ನು ಬಿಟ್ಟುಕೊಟ್ಟಿದೆ. ೨೦೦೮ರಲ್ಲೇ ಅಂಬಾನಿ ಸಂಸ್ಥೆಯು ಆಂಧ್ರ-ಮಹಾರಾಷ್ಟ್ರ-ಗುಜರಾತುಗಳಲ್ಲಿ ೧ ಲಕ್ಷ ಎಕರೆಯಷ್ಟು ಜಮೀನುಗಳ ಸಮುಚ್ಚಯದಲ್ಲಿ ೧ ಲಕ್ಷ ಟನ್ನಿನಷ್ಟು ಜೈವಿಕ ಇಂಧನವನ್ನು ತೆಗೆಯುವಷ್ಟು ಸಸ್ಯಗಳನ್ನು ಬೆಳೆಯುವ ಪ್ರಯತ್ನದಲ್ಲಿ ತೊಡಗಿತ್ತು.
ಇವೆಲ್ಲವೂ ಮೋದಿಯ ಹೊಸ ಕಾಯಿದೆಗಳು ಬರುವ ಮುನ್ನ ..ಈಗ ಇನ್ನೂ ಸಲೀಸು..

(https://www.livemint.com/Companies/5PUX6ShIurFRjlk9krgTPI/Reliance8217s-new-biofuel-business-model-to-provide-fuel.html

ಇದು ಈ ಅಂಬಾನಿ-ಆದಾನಿಗಳ ದೇಶಸೇವೆಯ ಹಾಗೂ ಮೋದಿಯವರ ದೇಶಪ್ರೇಮದ ಅಸಲಿ ಸ್ವರೂಪ.

-ಶಿವಸುಂದರ್


ಇದನ್ನೂ ಓದಿ: ಕೃಷಿ ಕಾಯ್ದೆ ಸಮರ್ಥಕರನ್ನೇ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ ನೇಮಿಸಿದೆ: ಭುಗಿಲೆದ್ದ ಆಕ್ರೋಶ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights