07 ಜನರಿಗೆ ಒಲಿಯಲಿದೆ ಮಂತ್ರಿಗಿರಿ; ಮುನಿರತ್ನರನ್ನು ಕೈಬಿಡ್ತಾರಾ ಬಿಎಸ್ವೈ?
ಅಂತೂ ವರ್ಷದಿಂದ ಚರ್ಚೆಯಲ್ಲಿಯೇ ಉಳಿದಿದ್ದ ಸಂಪುಟ ವಿಸ್ತರಣೆ ಕಸರತ್ತಿಗೆ ಇಂದು ತೆರೆಬೀಳಲಿದೆ. ಇಂದು (ಬುಧವಾರ) ಸಂಜೆ 04 ಗಂಟೆಗೆ 7 ಅಥವಾ 8 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ವಲಸೆ ಬಂದವರಿಗೆ ಹೆಚ್ಚಿನ ಮಣೆ ಹಾಕಲಾಗುತ್ತಿದ್ದು, ಇನ್ನೂ ಮೂವರಿಗೆ ಸಚಿವ ಸ್ಥಾನ ಕೊಡುವುದು ಬಾಕಿ ಇದೆ. ಅಲ್ಲದೆ, ಹಲವು ಬಾರಿ ಗೆದ್ದಿದ್ದು, ಇದೂವರೆಗೂ ಸಚಿವ ಸ್ಥಾನ ಸಿಗದೇ ಇರುವವರು ಸಚಿವ ಸ್ತಾನಕ್ಕಾಗಿ ಲಾಬಿ ನಡೆಸುತ್ತಿದ್ದು, ಅವರಲ್ಲಿ ಯಾರಿಗೆ ಮಂತ್ರಿಗಿರಿ ದೊರೆಯಲಿದೆ ಎಂಬುದು ಕುತೂಹಲ ಹುಟ್ಟಿಸಿದೆ.
ಸದ್ಯ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಎಸ್ ಅಂಗಾರ, ಆರ್ ಶಂಕರ್, ಎಂಟಿಬಿ ನಾಗರಾಜ್ ಮತ್ತು ಸಿಪಿ ಯೋಗೇಶ್ವರ್ಗೆ ಸಚಿವ ಸ್ಥಾನ ಸಿಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಆದರೆ, ಯಾರಿಗೆ ಸಚಿವ ಸ್ಥಾನ ಎಂಬುದು ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ.
ಪ್ರಸ್ತುತ 7 ಸ್ಥಾನಗಳು ಖಾಲಿ ಇದ್ದು, ಒಬ್ಬರನ್ನು ಕೈಬಿಡಬೇಕಾಗಿ ಬರಬಹುದು ಎಂಬ ಮಾತನ್ನು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಬಹಿರಂಗವಾಗಿ ಹೇಳಿದ್ದಾರೆ. ಅಬಕಾರಿ ಸಚಿವ ಹೆಚ್.ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ನಾಗೇಶ್ ಅವರ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸ್ವತಃ ನಾಗೇಶ್ ಅವರೂ ಕೂಡ ತಮ್ಮನ್ನು ಸಂಪುಟದಿಂದ ಕೈಬಿಡದಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ನಾಗೇಶ್ ಅವರ ಮನವಿಗೆ ಮಣಿದು ಅವರನ್ನು ಸಂಪುಟದಲ್ಲಿ ಮುಂದುವರೆಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಸಧ್ಯದಲ್ಲೇ ತಿಳಿಯಲಿದೆ.
ಈ ಲಿಸ್ಟ್ನಲ್ಲಿ ಮುನಿರತ್ನ ಹೆಸರು ಇಲ್ಲವಾಗಿದ್ದು, ಅವರಿಗೆ ಸಚಿವ ಸ್ಥಾನ ಸಿಗುವುದೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಸಿಎಂ ಯಡಿಯೂರಪ್ಪ ನಿವೃತ್ತಿ ವದಂತಿ: ಸ್ಪಷ್ಟನೆ ನೀಡಿದ ಬಿಜೆಪಿ ಹೈಕಮಾಂಡ್!