ಮುಂದಿನ ವಾರ ಅತೃಪ್ತರ ಸಭೆ : ದೆಹಲಿಗೆ ತೆರಳಿದ ಎಂ.ಪಿ ರೇಣುಕಾಚಾರ್ಯ…!
ನಿನ್ನೆಯಷ್ಟೇ ಸಿಎಂ ಸಂಪುಟಕ್ಕೆ 7 ಜನ ಸೇರಿಕೊಂಡಿದ್ದು, ಇನ್ನುಳಿದ ಸಚಿವಾಕಾಂಕ್ಷಿಗಳಿಗೆ ಇದು ಬೇಸರ ತಂದಿದೆ. ಹೀಗಾಗಿ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಮುಂದಿನ ವಾರ ಅತೃಪ್ತರ ಸಭೆ ನಡೆಯಲಿದೆ ಎಂದು ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, “ನನಗೆ ಅಸಮಾಧಾನಗೊಂಡ ಬಹುತೇಕ ಸಚಿವಾಕಾಂಕ್ಷಿಗಳು ಕರೆ ಮಾಡಿದ್ದಾರೆ. ಎಲ್ಲರೂ ಸೇರಿ ಮುಂದಿನ ವಾರ ಸಭೆ ನಡೆಸುತ್ತೇವೆ. ಸಿಎಂ 12 ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಕಡೆಗಣಿಸಿದ್ದಾರೆ. ನನಗೆ ಯಾವತ್ತೂ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ. ಆದರೆ ನಮ್ಮ ಕ್ಷೇತ್ರಕ್ಕೆ ಒಂದು ಖಾತೆ ಕೊಡಿ ಎಂದು ಕೇಳಿದ್ದೆ” ಎಂದಿದ್ದಾರೆ.
ಬಿಜೆಪಿಯಲ್ಲಿ 12 ಜನ ಸಚಿವಾಕಾಂಕ್ಷಿಗಳು ಅಸಮಾಧಾನಗೊಂಡಿದ್ದು ಇವರೆಲ್ಲರಿಗೂ ರೇಣುಕಾಚಾರ್ಯ ರೆಬೆಲ್ ನಂತೆ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಅವರು ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ಸಿಕ್ಕಿ ವಿಚಾರವಾಗಿ ತುಂಬಾನೇ ಬೇಸರ ವ್ಯಕ್ತಪಡಿಸಿದ್ದಾರೆ. ಯೋಗೇಶ್ವರ್ ಮೇಲೆ 420 ಕೇಸ್ ಇದೆ. ಯೋಗೇಶ್ವರ್ ಅವರಲ್ಲಿ ಹಲವಾರು ಲೋಪದೋಷಗಳಿವೆ. ಅವರನ್ನು ಕ್ಷೇತ್ರದ ಜನ ತಿರಸ್ಕರಿಸಿದ್ದಾರೆ. ಹಲವಾರು ಕೇಸ್ ಗಳು ಯೋಗೇಶ್ವರ ಮೇಲಿದೆ. ಹೀಗಿರುವಾಗ ಅವರನ್ನು ಯಾವ ಮಾನದಂಡದ ಮೇಲೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಆದರೆ ನ್ಯಾಯುತವಾಗಿ ಇದ್ದವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಅವಕಾಶ ಸಿಕ್ಕರೆ ನಾಯಕರೊಂದಿಗೆ ಮಾತನಾಡುತ್ತೇನೆ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ನಾವು ಪಕ್ಷಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರು ಮತ್ತು ಬೆಳಗಾವಿಗೆ ಮಾತ್ರ ಪ್ರಾತಿನಿಧ್ಯ ಕೊಡಲಾಗಿದೆ. ಕೆಲವರು ಹಿಂಭಾಗದಿಂದ ರಾಜಕಾರಣ ಮಾಡಿದವರಿಗೆ ಮಣೆ ಹಾಕಲಾಗಿದೆ. ಹೈಕಮಾಂಡ ಜೊತೆ ಮಾಡುವ ಅವಕಾಶ ಸಿಕ್ಕರೆ ವಾಸ್ತವ ವಿಚಾರ ಹೇಳಿಕೊಳ್ಳುತ್ತೇನೆ. ದೂರು ಕೊಡುವುದಿಲ್ಲ. ಯಡಿಯೂರಪ್ಪ ಅವರ ವಿರುದ್ಧ ದೂರು ಕೊಡುತ್ತಿಲ್ಲ. ದೂರು ಕೊಡುವಷ್ಟು ದೊಡ್ಡವನಲ್ಲ ಎಂದಿದ್ದಾರೆ.
ಬಸವರಾಜ್ ಯತ್ನಾಳ್ ಹೇಳಿದ ಸಿಡಿ ಕೋಟಾ ವಿಚಾರ ಮಾತನಾಡಿದ ರೇಣುಕಾಚಾರ್ಯ, ನನಗೆ ಯಾವ ಸಿಡಿ ವಿಚಾರವೂ ಗೊತ್ತಿಲ್ಲ. ನಮಗೆ ಬೇಸರವಾಗಿದೆ. ಈ ವಿಚಾರವನ್ನು ನಾನು ಹೈಕಮಾಂಡ ಮುಂದೆ ಅವಕಾಶ ಸಿಕ್ಕರೆ ಇಡುತ್ತೇನೆ. ನಮ್ಮ ಬೇಸರವನ್ನು ಅವರ ಮುಂದಿಡುತ್ತೇನೆ ಎಂದಿದ್ದಾರೆ.