ಸರ್ಕಾರ ಮತ್ತು ರೈತರ 09ನೇ ಸುತ್ತಿನ ಮಾತುಕತೆಯೂ ವಿಫಲ: ಮತ್ತೊಂದು ಸಭೆಗೆ ಅವಕಾಶವಿಲ್ಲ ಎಂದ ರೈತರು!
ಕೃಷಿ ಕಾಯ್ದೆಗಳ ವಿರುದ್ದ ಹೋರಾಟ ನಡೆಸುತ್ತಿದ್ದ ರೈತರು ಮತ್ತು ಸರ್ಕಾರ ನಡುವಿನ 09ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ.
ಇಂದು (ಜ.16)ರಂದು ಶುಕ್ರವಾರ ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ರೈತ ಹೋರಾಟಗಾರ ದರ್ಶನ್ ಪಾಲ್, ಹನ್ನಾ ಮೊಲ್ಲಾ ಸೇರಿದಂತೆ ಹಲವು ರೈತ ಮುಖಂಡರು ಭಾಗಿಯಾಗಿದ್ದರು.
ಸರ್ಕಾರವು ಕೃಷಿ ಕಾಯ್ದೆಗಳ ವಿಚಾರದಲ್ಲಿ ತಿದ್ದುಪಡಿಯ ಹೊರತಾಗಿ ಬೇರೆ ಯಾವುದಕ್ಕೂ ಸಿದ್ದವಾಗಿಲ್ಲ. ಕೃಷಿ ಮಸೂದೆಗಳು ರದ್ದಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಹೋರಾಟಗಾರರು ಹೇಳಿದ್ದಾರೆ.
“ನಾವು ಹೆಚ್ಚು ನಿರೀಕ್ಷಿಸುವುದಿಲ್ಲ. ಸರ್ಕಾರದೊಂದಿಗಿನ ಕೊನೆಯ ಸುತ್ತಿನ ಮಾತುಕತೆ ವಿಫಲವಾಗಿದೆ. ಅಲ್ಲದೆ, ಈಗ ಅವರಿಗೆ ನ್ಯಾಯಾಲಯದಿಂದ ಸಹಾಯ ಪಡೆಯಲು ಅವಕಾಶ ಸಿಕ್ಕಿದೆ. ಸರ್ಕಾರವು ಚರ್ಚೆಗಳನ್ನು ಮುನ್ನಡೆಸಲು ಹೋಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಮೂರು ಕಾಯ್ದೆಗಳು ರದ್ದಾಗುವವರೆಗೂ ಹೋರಾಟ ಮುಂದುವರೆಯಲಿದೆ” ಎಂದು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನ್ನಾ ಮೊಲ್ಲಾ ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಕಳೆದ 52 ದಿನಗಳಿಂದ ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇದೂವರೆಗೂ ಸರ್ಕಾರ ಮತ್ತು ರೈತರ ನಡುವೆ 08 ಸುತ್ತಿನ ಮಾತುಗಳು ವಿಫಲವಾಗಿದ್ದವು. ಇಂದು 09ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ.
ಸುಪ್ರೀಂ ಕೋರ್ಟ್ ಕೃಷಿ ಕಾಯ್ದೆಗಳ ಅನುಷ್ಟಾನವನ್ನು ಸದ್ಯಕ್ಕೆ ತಡೆಹಿಡಿದಿದೆ. ಅಲ್ಲದೆ, ಕೃಷಿ ನೀತಿಗಳ ಬಗ್ಗೆ ಚರ್ಚಿಸಲು ಸಮಿತಿಯನ್ನು ರಚಿಸಿದೆ. ಆ ಸಮಿತಿಯಲ್ಲಿ ಕೃಷಿ ಕಾಯ್ದೆಗಳ ಸಮರ್ಥರನ್ನೇ ನೇಮಿಸಲಾಗಿದೆ. ಹಾಗಾಗಿ, ಸಮಿತಿ ಮತ್ತು ಸಮಿತಿಯ ಸಭೆಯಲ್ಲಿ ಭಾಗಬಹಿಸುವುದಿಲ್ಲ ಎಂದು ರೈತರು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟವನ್ನು ಖಾಲಿಸ್ತಾನಿ ತಂತ್ರವೆಂದ ಝೀ ನ್ಯೂಸ್: ಮಾಧ್ಯಮಕ್ಕೆ ತಿರುಗೇಟು ಕೊಟ್ಟ ರೈತರು