ಬೆಂಗಳೂರಿಗೆ ಅಮಿತ್ ಶಾ: ಭಿಕ್ಷುಕರು ಮತ್ತು ನಾಯಿಗಳ ಸೆರೆ; ವಿಧಾನಸೌಧ ಸಿಬ್ಬಂದಿಗೆ ಅರ್ಧ ದಿನ ರಜೆ: ಜನರ ಆಕ್ರೋಶ
ಇಂದು (ಶನಿವಾರ) ಕೇಂದ್ರ ಗೃಹ ಅಮಿತ್ ಶಾ ಬೆಂಗಳೂರು ಆಗಮಿಸಲಿದ್ದಾರೆ. ಬೆಂಗಳೂರಿನ ವಿಧಾನಸೌಧಕ್ಕೂ ಅವರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ವಾಸಿಸುತ್ತಿದ್ದ ಭಿಕ್ಷುಕರನ್ನು ಮತ್ತು ಸುತ್ತಮುತ್ತ ತಿರುಗಾಡುತ್ತಿದ್ದ ಬೀದಿನಾಯಿಗಳನ್ನು ಸೆರೆ ಹಿಡಿಯಲಾಗಿದೆ. ಅಲ್ಲದೆ, ವಿಧಾನಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಅರ್ಧದಿನ (ಮಧ್ಯಾಹ್ನದ ನಂತರ) ರಜೆ ಕೊಡಲಾಗಿದೆ. ಸರ್ಕಾರದ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ನಿನ್ನೆ ಬಿಬಿಎಂಪಿ ಸಿಬ್ಬಂದಿಗಳು ವಿಧಾನಸೌಧ ಸುತ್ತಮುತ್ತಲಿದ್ದ ನಾಯಿಗಳನ್ನು ಭಾರೀ ಶ್ರಮಪಟ್ಟು ಸೆರೆ ಹಿಡಿದ್ದಾರೆ. ಹೀಗಾಗಿ, ಇದಕ್ಕೂ ಮುನ್ನ ಕರ್ನಾಟಕಕ್ಕೆ ಯಾವ ಗೃಹ ಸಚಿವರೂ ಬಂದಿರಲೇ ಇಲ್ಲವೇ? ಸಾಕಷ್ಟು ಗೃಹ ಸಚಿವರು ಬಂದು ಹೋಗಿದ್ದಾರೆ. ಆದರೆ, ಅಮಿತ್ ಶಾ ಬರುವ ಹಿನ್ನೆಲೆಯಲ್ಲಿ ಇಷ್ಟೆಲ್ಲಾ ಸರ್ಕಸ್ ಮಾಡಬೇಕೇ ಎಂಬ ಪ್ರಶ್ನೆಗಳು ವ್ಯಕ್ತವಾಗುತ್ತಿವೆ.
ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ರಾತ್ರಿಯ ವೇಳೆಯಲ್ಲಿ ಜನರು ಓಡಾಡಲೂ ಆಗದೇ ಇರುವಂತಹ ಮಟ್ಟಿಗೆ ನಾಯಿಗಳು ಜನರಿಗೆ ತೊಂದರೆ ಕೊಡುತ್ತಿವೆ. ಬೀದಿ ನಾಯಿಗಳಿಂದ ಬೇಸತ್ತ ಸಾವಿರಾರು ಜನರು ನಾಯಿಗಳನ್ನು ಸೆರೆ ಹಿಡಿಯುವಂತೆ ಬಿಬಿಎಂಪಿಗೆ ಮನವಿ ಮಾಡುತ್ತಲೇ ಇದ್ದಾರೆ.
ಜನರ ಮನವಿಗೆ ಎಳ್ಳಷ್ಟೂ ಸ್ಪಂದಿಸದ ಬಿಬಿಎಂಪಿ ‘ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಹಿಂದೇಟು ಹಾಕಿತ್ತು. ಆದರೆ, ಇದೀಗ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ಏಕೈಕ ಕಾರಣಕ್ಕೆ ವಿಧಾನಸೌಧದ ಬಳಿ ಇದ್ದ ನಾಯಿಗಳನ್ನು ಬಿಬಿಎಂಪಿ ಭಾರೀ ಶ್ರಮಪಟ್ಟು ಸೆರೆಹಿಡಿದಿದೆ.
ಅಲ್ಲದೆ, ವಿಧಾನಸೌಧ, ಕಬ್ಬನ್ ಪಾರ್ಕ್ ಬಳಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕರನ್ನೂ ಅಲ್ಲಿಂದ ಓಡಿಸಲಾಗಿದೆ. ಮಾತ್ರವಲ್ಲ, ವಿಧಾನಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳೂ ಕೂಡ ಅಮಿತ್ ಶಾ ಭೇಟಿಯ ವೇಳೆ ಇರಬಾರದು ಎಂಬ ಕಾರಣಕ್ಕೆ ಸಿಬ್ಬಂದಿಗಳಿಗೆ ಅರ್ಧ ದಿನ ರಜೆ ನೀಡಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
“ಅಮಿತ್ ಶಾ ಬರ್ತಾರಂತ ಬೀದಿನಾಯಿ ಹಿಡಿದು ಹಾಕಿದ್ದಾರಂತೆ”. ಮೀಡಿಯಾ ಇರುವಾಗ ಇವಕ್ಕೇನು ಕೆಲಸ ಅಂತಲೊ ಅಥವಾ ಅಲ್ಲಿಯೂ ಕಾಂಪಿಟಿಷನ್ ಬೇಡ ಅಂತಲೋ? ಎಂದು ಫೇಸ್ಬುಕ್ನಲ್ಲಿ ಪ್ರಶ್ನಿಸಿದ್ದಾರೆ.
ಪ್ರತಿದಿನ ಬೀದಿನಾಯಿಗಳ ಹಾವಳಿಗೆ ತುತ್ತಾಗುವ ಜನರ ಅಳಲಿಗೆ ಸ್ಪಂದಿಸದ ಬಿಬಿಎಂಪಿ, ಒಂದು ದಿನ ಅಮಿತ್ ಶಾ ಬಂದು ಹೋಗುತ್ತಾರೆ ಎಂಬ ಕಾರಣಕ್ಕೆ ನಾಯಿಗಳನ್ನು ಸೆರೆ ಹಿಡಿದ್ದಾರೆ. ಅಮಿತ್ ಶಾ ಏನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ, ಕಾರಿನಲ್ಲಿ ಬಂದು ಹೋಗುವ ಗೃಹ ಸಚಿವರಿಗೆ ನಾಯಿಗಳು ಕಾರಣಬಾರದು ಎಂದು ಸೆರೆ ಹಿಡಿದ್ದಾರೆ. ಅಮಿತ್ ಶಾ ನಾಯಿಗಳನ್ನೇ ಕಂಡಿಲ್ಲವೇ ಎಂದು ಪ್ರಶ್ನಿಸಲಾಗಿದೆ.
ಮತ್ತೊಬ್ಬ ಜಾಲತಾಣಿಗರು, ನಾಯಿಗಳನ್ನು ಸೆರೆ ಹಿಡಿಯಲು ಅವರೇ ಬರಬೇಕಾಯಿತು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಇದನ್ನೂ ಓದಿ: ‘ಮೇಡ್ ಇನ್ ಇಂಡಿಯಾ’ 2 ಕೋವಿಡ್ ಲಸಿಕೆಗಳು ಭಾರತದ ಪ್ರತಿಭೆಯನ್ನು ತೋರಿಸುತ್ತವೆ: ಮೋದಿ