ರೈತ ಹೋರಾಟ: ಪರಸ್ಪರ ಗುಲಾಬಿ ಕೊಟ್ಟು, ಒಟ್ಟಿಗೆ ಊಟ ಮಾಡಿದ ರೈತರು-ಪೊಲೀಸರು!
ದೆಹಲಿ ಇಂದು ಐತಿಹಾಸಿಕ ರೈತ ಹೋರಾಟಕ್ಕೆ ಸಾಕ್ಷಿಯಾಗಿದೆ. ಲಕ್ಷಾಂತರ ಟ್ರ್ಯಾಕ್ಟರ್ಗಳಲ್ಲಿ ದೆಹಲಿ ರಸ್ತೆಗಿಳಿದ ರೈತರು ಪರೇಡ್ ನಡೆಸಿ ಗಮನ ಸೆಳೆದಿದ್ದಾರೆ. ಒಂದೆರೆಡು ಸ್ಥಳಗಳಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಅದರಲ್ಲಿ ಒಬ್ಬ ರೈತ ಮೃತಪಟ್ಟಿದ್ದಾನೆ. ಇನ್ನು ರೈತರ ಒಂದು ಗುಂಪು ಮಾರ್ಗ ಉಲ್ಲಂಘಿಸಿ ಕೆಂಪು ಕೋಟೆ ನುಗ್ಗಿ ಧ್ವಜ ಹಾರಿಸಿವೆ.
ಇಷ್ಟೆಲ್ಲದರ ನಡುವೆಯೂ ಶೇ.99 ರಷ್ಟು ಟ್ರ್ಯಾಕ್ಟರ್ ರ್ಯಾಲಿ ಶಾಂತಿಯುತವಾಗಿ ನಡೆದಿದೆ. ಈ ನಡುವೆ ಕೆಲವೆಡೆ ರೈತರು ಮತ್ತು ಪೊಲೀಸರು ಪರಸ್ಪರ ಗುಲಾಬಿ ವಿನಿಮಯ ಮಾಡಿಕೊಂಡಿದ್ದಲ್ಲದೇ ಒಟ್ಟಿಗೆ ಊಟ ಮಾಡಿ ಸೌಹಾರ್ದತೆ ಮೆರೆದಿದ್ದಾರೆ.
ಉತ್ತರ ಪ್ರದೇಶ ಮತ್ತು ದೆಹಲಿ ನಡುವಿನ ಚಿಲ್ಲಾ ಗಡಿಯಲ್ಲಿ ಹೋರಾಟನಿರತ ರೈತರು ಮತ್ತು ಪೊಲೀಸರು ಪರಸ್ಪರ ಗುಲಾಬಿ ವಿನಿಮಯ ಮಾಡಿಕೊಂಡು ಸಾವಿರಾರು ಜನರ ಹೃದಯ ಗೆದ್ದಿದ್ದಾರೆ. ನೋಯ್ಡಾ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಣವಿಜಯ್ ಸಿಂಗ್ ಅವರಿಗೆ ಭಾರತ್ ಕಿಸಾನ್ ಒಕ್ಕೂಟದ (ಭನು) ಯುಪಿ ಅಧ್ಯಕ್ಷ ಯೋಗೇಶ್ ಪ್ರತಾಪ್ ಸಿಂಗ್ ಅವರು ಗುಲಾಬಿಗಳನ್ನು ನೀಡಿದರು. ರಣವಿಜಯ್ ಸಿಂಗ್ ಪ್ರತಿಭಟನಾಕಾರ ರೈತರು ಸಿದ್ಧಪಡಿಸಿದ ಊಟ ಮಾಡುವು ಮೂಲಕ ಶಾಂತಿ ಸಂದೇಶ ಸಾರಿದ್ದಾರೆ.
ಭಾರತ್ ಕಿಸಾನ್ ಒಕ್ಕೂಟದ ಸದಸ್ಯರು ಪ್ರತಿಭಟನಾ ಸ್ಥಳಕ್ಕೆ ಹೋಗಲು ಪೊಲೀಸರು ತಡೆಯುವುದಿಲ್ಲ ಎಂದು ಘೋಷಿಸಿದಾಗ ಈ ಘಟನೆ ನಡೆದಿದ್ದು ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಳೆದ ಎರಡು ತಿಂಗಳಿನಿಂದ ರಾಜ್ಯ ಪೊಲೀಸರು ಜನರನ್ನು ಚಿಲ್ಲಾ ಗಡಿ ತಲುಪಲು ಬಿಟ್ಟಿರಲಿಲ್ಲ. ಮೀರತ್ ಮತ್ತು ಆಗ್ರಾದಲ್ಲಿ ಟ್ರ್ಯಾಕ್ಟರ್ಗಳನ್ನು ತಡೆಯಲಾಗಿತ್ತು.
ಇದನ್ನೂ ಓದಿ: ದೆಹಲಿ ತಲುಪಿದ ರೈತರು: ಕೆಂಪುಕೋಟೆ ಮೇಲೆ ಹಾರಿದ ರೈತರ ಧ್ವಜಗಳು!