‘ಯುಗಾದಿಗೆ ಸಿಎಂ ಸ್ಥಾನಕ್ಕೆ ಉತ್ತರ ಕರ್ನಾಟಕದವರೇ ಬರುತ್ತಾರೆ’ – ಯತ್ನಾಳ್ ಹೊಸ ಬಾಂಬ್!
ಮಂತ್ರಿ ಸ್ಥಾನ ಕೊಡುವ ಜಾಗದಲ್ಲಿ ನಮ್ಮವರೇ ಒಬ್ಬರು ಬರುತ್ತಾರೆ ಎಂದು ಶಾಸಕ ಬಸನಗೌಡ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಸ್ಥಾನ ಬದಲಾವಣೆ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿರುವ ಯತ್ನಾಳ್ ಸಿಎಂ ಸ್ಥಾನಕ್ಕೆ ಉತ್ತರ ಕರ್ನಾಟಕದವರೇ ಬರುತ್ತಾರೆಂದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೂರು ತಿಂಗಳು ಮಾತ್ರ ಸಿಎಂ ಇರುವುದು ಎಂದು ಹೇಳಿದ್ದೆ. ಅದು ಬೇರೆಯದ್ದಕ್ಕೆ, ಇದೀಗ ಯುಗಾದಿಗೆ ಬದಲಾವಣೆಯಾಗುತ್ತೆ. ಹೊಸ ವರ್ಷಕ್ಕೆ ಹೊಸ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ಧಾರೆ.
ಶಿವಮೊಗ್ಗ ಸ್ಟೋಟದ ಬಗ್ಗೆ ಮಾತನಾಡಿದ ಯತ್ನಾಳ್, “ ಪ್ರಕರಣವನ್ನು ಸಿಬಿಐಗೆ ನೀಡಬೇಕು. ಎಲ್ಲ ರಾಜಕೀಯ ವ್ಯಕ್ತಿಗಳದ್ದೂ ಗಣಿಗಾರಿಕೆ ಇದೆ. ದುರ್ದೈವ ಎಂದರೆ ಗಣಿಗಾರಿಕೆಯಲ್ಲೇ ರಾಜಕಾರಣಿಗಳಿದ್ದಾರೆ. ಹೀಗಾಗಿ ಯಾವ ತನಿಖೆಯೂ ಸಫಲ ಆಗುವುದಿಲ್ಲ. ನೀವು ಕೂಡ ಎರಡು ದಿನ ತೋರಿಸುತ್ತೀರಿ. ನಂತರ ಬೇರೆ ಸುದ್ದಿಗೆ ಹೋಗ್ತೀರಿ. ಶಿವಮೊಗ್ಗ ಘಟನೆ ಭಾರೀ ಭಯಾನಕ ಘಟನೆ. ಒಂದು ವೇಳೆ ಶಿವಮೊಗ್ಗ ನಗರದಲ್ಲೇ ಬ್ಲಾಸ್ಟ್ ಆಗಿದ್ದರೆ ಏನು ಮಾಡುತ್ತೀದ್ದಿರಿ ಎಂದು ಪ್ರಶ್ನಿಸಿದ್ದಾರೆ. ಇದು ಎಲ್ಲಿಂದ ಬರ್ತಿದೆ, ಇದರಲ್ಲಿ ಯಾವ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂಬುದರ ಬಗ್ಗೆ ಮುಕ್ತವಾಗಿ ತನಿಖೆ ಆಗಬೇಕೆಂದು” ಆಗ್ರಹಿಸಿದರು.
ಈ ವೇಳೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಟ್ವೀಟ್ ಬಗ್ಗೆ ಮಾತನಾಡಿದ ಯತ್ನಾಳ್ ” ಠಾಕ್ರೆಗೆ ಮಾಡಲು ಕೆಲಸವಿಲ್ಲ. ತನ್ನ ಸರ್ಕಾರದ ವೈಫಲ್ಯವನ್ನ ಮುಚ್ಚಲು ಈ ರೀತಿ ಕುತಂತ್ರ ಮಾಡುತ್ತಿದ್ದಾರೆ. ಛತ್ತ ಸೇರಿದಂತೆ ಅನೇಕ ಮಹಾರಾಷ್ಟ್ರದ ಹಳ್ಳಿಗಳು ಬೆಳಗಾವಿಗೆ ಸೇರಬೇಕು. ಉಪದ್ಯಾಪಿ ಠಾಕ್ರೆ ಹತಾಶರಾಗಿ ಈ ಕೆಲಸ ಮಾಡುತ್ತಿದ್ದಾರೆ” ಎಂದು ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದರು.