BJP ಭ್ರಷ್ಟರನ್ನು ಖರೀದಿಸಬಹುದು; ನಿಷ್ಟರನ್ನಲ್ಲ: ಕೇಸರಿ ಪಡೆಗೆ ಮಮತಾ ಟಾಂಗ್
ಬಿಜೆಪಿ ಪಕ್ಷದವರು ಭ್ರಷ್ಟ ನಾಯಕರನ್ನು ಖರೀದಿಸಬಹುದು; ನಿಷ್ಟಾವಂತ ಕಾರ್ಯಕರ್ತರನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಬಂಗಾಳದ ಡೈಮಂಡ್ ಹಾರ್ಬರ್ ವಿಧಾನಸಭಾ ಕ್ಷೇತ್ರದ ಟಿಎಂಸಿ ಶಾಸಕ ದೀಪಕ್ ಹಲ್ದಾರ್ ಪಕ್ಷತೊರೆದು ಬಿಜೆಪಿ ಸೇರಿದ್ದಾರೆ. ಈ ಹಿನ್ನಲೆಯಲ್ಲಿ ಪಕ್ಷಾಂತರಿ ಶಾಸಕರು ಮತ್ತು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ಮಮತಾ ಬ್ಯಾನರ್ಜಿ, “ಟಿಎಂಸಿಯಲ್ಲಿ ಭ್ರಷ್ಟರಿಗೆ ಜಾಗವಿಲ್ಲ. ಪಕ್ಷ ತೊರೆದು ಹೋಗುವ ಭ್ರಷ್ಟ ನಾಯಕರು ಆದಷ್ಟು ಬೇಗ ಹೋಗಲಿ. BJP ಭ್ರಷ್ಟರನ್ನು ಖರೀದಿಸಬಹುದು; ನಿಷ್ಟರನ್ನಲ್ಲ” ಎಂದು ಹೇಳಿದ್ದಾರೆ.
“ಕೆಲ ನಾಯಕರು ಕೆಟ್ಟ ಮಾರ್ಗದಿಂದ ಸಂಪಾದಿಸಿದ ಹಣವನ್ನು ಕಾಪಾಡಿಕೊಳ್ಳುವ ಸಲುವಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿ ಸೇರಿರುವ ನಾಯಕರೆಲ್ಲರೂ ಖದೀಮರು” ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ ಎರಡು-ಮೂರು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಲಿದೆ. ಚುನಾವಣಾ ತಯಾರಿಯಲ್ಲಿ ಎಲ್ಲಾ ಪಕ್ಷಗಳು ಕಸರತ್ತು ನಡೆಸುತ್ತಿವೆ. ಈ ನಡುವೆ ಟಿಎಂಸಿಯ ಹಲವಾರು ಶಾಸಕ, ಸಂಸದ ಮತ್ತು ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಇದೂವರೆಗೂ ಸುವೇಂದು ಅಧಿಕಾರಿ, ರಾಜಿಬ್ ಬ್ಯಾನರ್ಜಿ, ಬೈಶಾಲಿ ದಾಲ್ಮಿಯ, ಪ್ರಬೀರ್ ಘೋಷಲ್, ರತನ್ ಚಕ್ರವರ್ತಿ, ರುದ್ರವಿಲ್ ಘೋಷ್ ಒಳಗೊಂಡು ಮೂವರು ಸಚಿವರು ಸೇರಿದಂತೆ ಒಟ್ಟು 14 ಜನ ಶಾಸಕರು ಟಿಎಂಸಿ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅಸ್ಸಾಂ ಗೆಲ್ಲಲು 03 ತಂತ್ರ ಎಣೆದ BJP: ಮುಸ್ಲಿಮರನ್ನು ಸೆಳೆಯುತ್ತಿರುವ ಕೇಸರಿ ಪಡೆಯ ತಂತ್ರಗಳೇನು? ಡೀಟೇಲ್ಸ್