ಬೆಳ್ಳಂಬೆಳ್ಳಗೆ ಅಫಘಾತ: ಮದುವೆಗೆ ಹೊರಟ ನಾಲ್ವರು ಮಸಣಕ್ಕೆ!
ಭಾನುವಾರ ಬೆಳ್ಳಂಬೆಳಗ್ಗೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿರುವ ಭೀಕರ ಅಪಘಾತ ಹಾಸನ ನಗರದ ಹೊರವಲಯದಲ್ಲಿರುವ ಕೆಂಚಟ್ಟಳ್ಳಿ ಬಳಿಯ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ನಡೆದಿದೆ.
ಧರ್ಮಸ್ಥಳಕ್ಕೆ ಟಾಟಾ ಸುಮೋದಲ್ಲಿ ತೆರಳುತ್ತಿದ್ದವರಿಗೆ ಹಿಂದೆಯಿಂದ ಬಂದ ಕ್ವಾಲೀಸ್ ಕಾರು ಡಿಕ್ಕಿ ಹೊಡೆದಿದ್ದು, ಕ್ವಾಲೀಸ್ ಕಾರಿನಲ್ಲಿ ಮದುವೆಗೆ ತೆರಳುತ್ತಿದ್ದ ನಾಲ್ವರು ಮೃತ ಪಟ್ಟಿದ್ದಾರೆ. ಉಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ, ಸುಮೋದಲ್ಲಿದ್ದ 10 ಜನರಿಗೂ ಗಾಯಗಳಾಗಿದ್ದು, ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಕೆಂಚಟ್ಟಳ್ಳಿ ಬಳಿ ಇದ್ದ ಹಂಪ್ಸ್ ಬಳಿ ಟಾಟಾಸುಮೋ ಚಾಲಕ ವಾಹನವನ್ನು ನಿಧಾನ ಮಾಡಿದ್ದಾನೆ. ಹಿಂದಿನಿಂದ ವೇಗವಾಗಿ ಬಂದ ಕ್ವಾಲೀಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಸುಮೋ ಪಲ್ಟಿ ಹೊಡೆದಿದೆ. ಪರಿಣಾಮ ಸುಮೋದಲ್ಲಿದ್ದ ಕೆಲವರ ಸ್ಥಿತಿ ಗಂಭೀರವಾಗಿದೆ. ಅದರೆ, ಸುಮೋದಲ್ಲಿದ್ದ ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಟಾಸುಮೋದಲ್ಲಿದ್ದ ಎಲ್ಲರೂ ಮುಳಬಾಗಿಲು ಮೂಲದವರಾಗಿದ್ದು, ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಕ್ವಾಲೀಸ್ ಕಾರಿನಲ್ಲಿದ್ದವರು ಕೆಜಿಎಫ್ನವರಾಗಿದ್ದು, ಮದುವೆಗಾಗಿ ಉಡುಪಿಗೆ ತೆರಳುತ್ತಿದ್ದರು. ಇವರಲ್ಲಿ ಸುನೀಲ್ ಕುಮಾರ್, ನವೀನ್ ಕುಮಾರ್, ಪ್ರದೀಪ್ ಕುಮಾರ್ ಹಾಗೂ ಚಂದ್ರಶೇಖರ್ ಎಂಬುವವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮಹಿಳೆಗೆ ಹೆರಿಗೆ ರಜೆ ನೀಡದೆ ಸೇವೆಯಿಂದ ವಜಾ; ಅಧಿಕಾರಿಗೆ 25,000 ದಂಡ ವಿಧಿಸಿದ ಹೈಕೋರ್ಟ್!