ಟಿಕ್ಟಾಕ್ ಸ್ಟಾರ್ ಆತ್ಮಹತ್ಯೆ ಪ್ರಕರಣ: ಮಹಾರಾಷ್ಟ್ರ ಸಚಿವ ಸಂಜಯ್ ರಾಥೋಡ್ ರಾಜೀನಾಮೆ!
ಟಿಕ್ಟಾಕ್ನಲ್ಲಿ ಮಿಂಚಿದ್ದ 23 ವರ್ಷದ ಯುವತಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಅರಣ್ಯ ಸಚಿವ ಸಂಜಯ್ ರಾಥೋಡ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಕಲಿಯಲು ಮಹಾರಾಷ್ಟ್ರದ ಪುಣೆಯಲ್ಲಿ ವಾಸಿಸುತ್ತಿದ್ದ ಬೀಡ್ ಜಿಲ್ಲೆಯ ಪೂಜಾ ಚೌವಾಣ್ ಎಂಬ ಯುವತಿ ಫೆಬ್ರವರಿ 08 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಸಾವಿನ ಪ್ರಕರಣಕ್ಕೂ ಸಚಿವ ಸಂಜಯ್ ರಾಥೋಡ್ ಅವರಿಗೂ ಸಂಬಂಧವಿದೆ ಎಂಧು ವಿರೋಧ ಪಕ್ಷವಾದ ಬಿಜೆಪಿ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
“ಕೊಳಕು ರಾಜಕೀಯ” ದಿಂದಾಗಿ ತಾವು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ಸಚಿವ ಸಂಜಯ್ ರಾಥೋಡ್ ಹೇಳಿದ್ದಾರೆ.
ಯುವತಿಯ ಸಾವಿನ ಎರಡು ದಿನಗಳ ನಂತರ, ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಕ್ಲಿಪ್ ಬಿಡುಗಡೆಯಾಗಿದ್ದು, ಇದರಲ್ಲಿ ಇಬ್ಬರು ವ್ಯಕ್ತಿಗಳು ಯುವತಿಯ ಸಾವಿನ ಬಗ್ಗೆ ಮಾತನಾಡಿದ್ದಾರೆ. ಆಡಿಯೋ ಕ್ಲಿಪ್ನಲ್ಲಿರುವ ವ್ಯಕ್ತಿಗಳಲ್ಲಿ ಒಬ್ಬರು ಸಂಜಯ್ ರಾಥೋಡ್ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪವನ್ನು ಸಂಜಯ್ ರಾಥೋಡ್ ನಿರಾಕರಿಸಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ’ಆಕೆ ಆತ್ಮಹತ್ಯೆ ಮಾಡಿಕೊಂಡಂತೆ ಕಾಣಿಸಿಕೊಂಡರೂ, ಅದನ್ನು ಕ್ರಿಮಿನಲ್ ಪ್ರಕರಣ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಕಳೆದ ವಾರ ತಿಳಿಸಿದ್ದಾರೆ.
ಸಚಿವ ಸಂಜಯ್ ರಾಥೋಡ್ಗೂ ಮೃತ ಯುವತಿಯ ಸಾವಿಗೂ ಸಂಬಂಧವಿದೆ ಎಂದು ಬಿಜೆಪಿ ಆರೋಪಿಸಿ, ಅವರ ಬಂಧನಕ್ಕೆ ಪಕ್ಷ ಒತ್ತಾಯಿಸುತ್ತಿತ್ತು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಾವಿನ ಬಗ್ಗೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
“ಪೂಜಾ ಚೌವಾಣ್ ಆತ್ಮಹತ್ಯೆ ಪ್ರಕರಣದಲ್ಲಿ ಗಂಭೀರ ಆರೋಪ ಹೊಂದಿರುವ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಬೀಡ್ ಜಿಲ್ಲೆಯಲ್ಲಿ ಸಂಜಯ್ ರಾಥೋಡ್ ಅವರ ಪ್ರತಿಮೆಯನ್ನು ಸುಟ್ಟು ಬಿಜೆಪಿ ಪ್ರತಿಭಟನೆ ನಡೆಸಿತ್ತು” ಎಂದು ಬಿಜೆಪಿ ಮಹಾರಾಷ್ಟ್ರ ಕಳೆದ ವಾರ ಟ್ವೀಟ್ ಮಾಡಿದೆ.
“ಸಂಜಯ್ ರಾಥೋಡ್ ವಿರುದ್ಧ ಸಾಕಷ್ಟು ಪುರಾವೆಗಳಿವೆ ಆದರೆ ಏನೂ ಆಗುತ್ತಿಲ್ಲ. ಮಾಧ್ಯಮ ವರದಿಗಳು ಹೊರಬರದಿದ್ದರೆ ಏನೂ ಆಗುತ್ತಿರಲಿಲ್ಲ. ರಾಜ್ಯದ ಪೊಲೀಸರು ಒತ್ತಡದಲ್ಲಿದ್ದಾರೆ. ಮೊದಲು, ಪೋಲಿಸ್ ತನಿಖೆಯ ಬಗ್ಗೆ ತನಿಖೆ ನಡೆಸಬೇಕಾಗಿದೆ” ಎಂದು ಫಡ್ನವಿಸ್ ಕಳೆದ ವಾರ ಹೇಳಿದ್ದರು.
ಕಳೆದ ವಾರ ಅರಣ್ಯ ಸಚಿವ ಸಂಜಯ್ ರಾಥೋಡ್ ವಿರುದ್ಧ ಬಿಜೆಪಿಯ ಮಹಿಳಾ ಘಟಕ ಪ್ರತಿಭಟನೆ ನಡೆಸಿತು. ಆದರೆ ಯುವತಿಯ ಸಾವಿನ ಬಗ್ಗೆ ಆಕೆಯ ಕುಟುಂಬ ದೂರು ನೀಡಿಲ್ಲ.
ಇದನ್ನೂ ಓದಿ: ಬ್ರಿಟಿಷರನ್ನೇ ಭಾರತದಿಂದ ಓಡಿಸಿದವರಿಗೆ BJPಯನ್ನು ಅಧಿಕಾರದಿಂದ ಇಳಿಸುವುದೇ ಕಷ್ಟವಲ್ಲ?: ರಾಹುಲ್ಗಾಂಧಿ