ತಮಿಳುನಾಡು ಚುನಾವಣೆ: ಕಾಂಗ್ರೆಸ್ಗೆ 25 ಕ್ಷೇತ್ರಗಳನ್ನಷ್ಟೇ ಬಿಟ್ಟುಕೊಟ್ಟ ಡಿಎಂಕೆ!
ತಮಿಳುನಾಡಿನಲ್ಲಿ ಕಗ್ಗಂಟಾಗಿ ಉಳಿದಿದ್ದ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಕ್ಷೇತ್ರ ಹಂಚಿಕೆ ಚರ್ಚೆ ಸತತ ಆರು ದಿನಗಳ ಚರ್ಚೆಯ ನಂತರ ಅಂತ್ಯಗೊಂಡಿದೆ. ಏಪ್ರಿಲ್ 06 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ 25 ಸ್ಥಾನಗಳನ್ನು ಡಿಎಂಕೆ ಬಿಟ್ಟುಕೊಟ್ಟಿದೆ.
ತಮಿಳುನಾಡಿನಲ್ಲಿ ಕಾಂಗ್ರೆಸ್ 41 ಸ್ಥಾನಗಳಿಗೆ ಬೇಡಿಕೆ ಇಟ್ಟಿತ್ತು. ಆದರೆ, ಅಷ್ಟು ಸ್ಥಾನಗಳನ್ನು ಬಿಟ್ಟುಕೊಡಲು ಒಪ್ಪದ ಡಿಎಂಕೆ ಹಲವು ಸುತ್ತಿನ ಮಾತುಕತಗಳ ಬಳಿಕ ಇಂದು 25 ಸ್ಥಾನಗಳನ್ನು ಕಾಂಗ್ರೆಸ್ಗೆ ಬಿಟ್ಟುಕೊಂಡಿದೆ. ಇನ್ನು ಏಪ್ರಿಲ್ 26ರಂದು ನಡೆಯಲಿರುವ ಕನ್ಯಾಕುಮಾರಿ ಕ್ಷೇತ್ರದ ಲೋಕಸಭಾ ಉಪ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಸ್ಪರ್ಧಿಸಲಿದೆ.
ಬಿಜೆಪಿ ಈಗ ದೇಶದಲ್ಲಿ ಕೊರೋನವೈರಸ್ ಗಿಂತ ದೊಡ್ಡ ರೋಗವಾಗುತ್ತಿದೆ. ಕಾಂಗ್ರೆಸ್ ಬಲವಾದ ನೆಲೆಯನ್ನು ಹೊಂದಿದ್ದ ಪುದುಚೇರಿಯಲ್ಲಿ, ಬಿಜೆಪಿ ಮಧ್ಯೆ ಪ್ರವೇಶಿಸಿ ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ರಚನೆಯನ್ನು ನಾಶಮಾಡಲು ಕಾರಣವಾಯಿತು, ಇದರ ಪರಿಣಾಮವಾಗಿ ಸರ್ಕಾರವನ್ನು ಉರುಳಿಸಲಾಯಿತು. ಇದೇ ಉದ್ದೇಶಕ್ಕಾಗಿ ಕೇಂದ್ರವು ಕಿರಣ್ ಬೇಡಿಯವರನ್ನು ಇಲ್ಲಿಗೆ ಕಳುಹಿಸಿತ್ತು ಎಂದು ರಾಜ್ಯದ ಪಕ್ಷದ ಉಸ್ತುವಾರಿ ದಿನೇಶ್ ಗುಂಡೂರಾವ್ ಮತ್ತು ಕೆ ಎಸ್ ಅಲಗಿರಿ ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಆರೋಪಿಸಿದರು.
ಬಿಜೆಪಿಗೆ ಗೆಲುವಿಗೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ನಾವು ಡಿಎಂಕೆ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಈ ಮೈತ್ರಿಯಲ್ಲಿರುವುದು ಸರ್ಕಾರಕ್ಕಾಗಿ ಅಲ್ಲ, ಆದರೆ ನಮ್ಮ ಸಿದ್ಧಾಂತವನ್ನು ಜೀವಂತವಾಗಿಡಲು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಬಂಗಾಳದಲ್ಲಿ ಮಮತಾ; ತಮಿಳಲ್ಲಿ ಸ್ಟ್ಯಾಲಿನ್ಗೆ ಅಧಿಕಾರ; BJPಗೆ ಮುಖಭಂಗ?