ಶಿವಮೊಗ್ಗದ ಡಾ. ಹಫೀಜ್ ಕರ್ನಾಟಕಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ!
ಕರ್ನಾಟಕದ ಸೌಹಾರ್ದತೆಯ ಸಂತ ಎಂದು ಕರೆಯಲ್ಪಡುವ ಉರ್ದು ಸಾಹಿತಿ ಡಾ. ಹಫೀಜ್ ಕರ್ನಾಟಕಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಡಾ. ಹಫೀಜ್ ಕರ್ನಾಟಕಿ ಅವರು ಬರೆದಿರುವ ‘ಫಕ್ರ್-ಇ-ವತನ್’ ಸಣ್ಣಕತೆಗಳ ಸಂಕಲನವು ಉರ್ದು ಸಾಹಿತ್ಯ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಶಿಕಾರಿಪುರದ ಶಿಕ್ಷಕ ಕುಟುಂಬವರಾದ ಹಫೀಜ್ ಅವರು, ಉರ್ದು ಸಾಹಿತ್ಯದಲ್ಲಿ ಇದುವರೆಗೂ 94 ಕೃತಿಗಳನ್ನು ರಚಿಸಿದ್ದಾರೆ. ನೈತಿಕ ಮೌಲ್ಯ, ಆಧ್ಯಾತ್ಮಿಕ ಅರಿವು, ಮಾನವತೆ, ಸೌಹಾರ್ದತೆ, ದೇಶಪ್ರೇಮ ಬಗೆಗೆ ಅವರ ಸಾಹಿತ್ಯದಲ್ಲಿ ಅತಿ ಹೆಚ್ಚು ಒತ್ತುಕೊಡಲಾಗಿದೆ. ಅವರ ಸಾಹಿತ್ಯದಲ್ಲಿ ಸಾಧನೆಗಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಹಫೀಜ್ ಅವರು ಶಿಕಾರಿಪುರದಲ್ಲಿ ಮದೀನತ್ ಉಲ್ ಉಲೂಮ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಈ ಮೂಲಕ ಸಮಾಜದ ಸಾವಿರಾರು ಬಡಮಕ್ಕಳಿಗೆ ವಿದ್ಯೆ, ಆಶ್ರಯ ನೀಡುತ್ತಿದ್ದಾರೆ. ಜೊತೆಗೆ, ಜಾತಿ, ಧರ್ಮ ಬೇಧವಿಲ್ಲದೆ ವಿಧವೆಯರು ಹಾಗೂ ವಿಧವೆಯರ ಮಕ್ಕಳಿಗೆ ಮಾಸಿಕ ವೇತನವನ್ನೂ ಟ್ರಸ್ಟ್ನಿಂದ ನೀಡುತ್ತಿದ್ದಾರೆ.
ಇವರು ಯಡಿಯೂರಪ್ಪ ಅವರ ಕಳೆದ ಅವಧಿಯ ಸರ್ಕಾರದಲ್ಲಿ ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಯಡಿಯೂರಪ್ಪ ಮುಕ್ತ BJPಗೆ ಸಿದ್ದತೆ ಜೋರಾಗಿದೆ: ಕಾಂಗ್ರೆಸ್ ಲೇವಡಿ