ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ವದಂತಿ: ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಹೇಳಿದ್ದೇನು?
ಒಂದರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಮತ್ತು ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ವಿಚಾರವಾಗಿ ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಿಕ್ಷಣ ಇಲಾಖೆಯು ಈ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಆರನೇ ತರಗತಿಯ ವರೆಗಿನ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಪಾಸ್ ಮಾಡಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯನ್ನೂ ನೀಡಲಾಗುತ್ತದೆ ಎಂಬ ವದಂತಿ ರಾಜ್ಯಾದ್ಯಂತ ಚರ್ಚೆಯನ್ನು ಸೃಷ್ಟಿಸಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ಪರೀಕ್ಷೆಗಳು ಇವೆಯೇ, ಬೇಸಿಗೆ ರಜೆ ಸಿಗುತ್ತದೇಯೇ ಎಂಬ ಗೊಂದಲ ಸೃಷ್ಟಿಯಾಗಿತ್ತು.
ಈ ಬಗ್ಗೆ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ಹರಿದಾಡುತ್ತಿರುವ ಎಲ್ಲಾ ರೀತಿಯ ವದಂತಿಗಳು ಸುಳ್ಳು. ಮಕ್ಕಳಿಗೆ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯನ್ನು ನೀಡುವಲ್ಲಿ ತಲ್ಲಿನರಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಇಲಾಖೆ ಸಹಕಾರ ನೀಡುತ್ತಿದೆ. ಈ ಹೊತ್ತಿನಲ್ಲಿ ಬೇಸಿಗೆ ರಜೆಯನ್ನು ನೀಡುವ ಉದ್ದೇಶವಾಗಲಿ, ಪ್ರಸ್ತಾವನೆಯಾಗಲಿ ಇಲಾಖೆ ಮುಂದೆ ಇಲ್ಲ ಅಂತ ಅವರು ಹೇಳಿದ್ದಾರೆ.
ಈಗಾಗಲೇ ಖಾಸಗಿ ಶಾಲೆಗಳು ಆನ್ಲೈನ್ ಮೂಲಕ ತಮ್ಮ ವಿದ್ಯಾರ್ಥಿಗಳಿಗೆ ಕಲಿಕೆಯ ಕಾರ್ಯಕ್ರವನ್ನು ನೀಡುತ್ತಿದೆ. ಇದಲ್ಲದೇ ರಾಜ್ಯ ಸರ್ಕಾರ ಕೂಡ ದರಿಂದ ಐದನೇ ತರಗತಿ ಸರ್ಕಾರಿ ಶಾಲಾ ಮಕ್ಕಳಿಗೆ ಆಕಾಶವಾಣಿಯಲ್ಲಿ ಕಲಿಯೋಣ- ನಲಿಯೋಣ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದು, ಇದರ ಜೊತೆಗೆ ದೂರದರ್ಶನದಲ್ಲಿ ಸಂವೇದಾ ಕಾರ್ಯಕ್ರಮವನ್ನು ಕೂಡ ಪ್ರಸಾರ ಮಾಡುತ್ತಿದ್ದು, ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು, ಸುಳ್ಳು ಸುದ್ದಿಗಳನ್ನು ನಂಬಬಾರದು ಅಂತ ಅವರು ಮನವಿ ಮಾಡಿಕೊಂಡಿದ್ದಾರೆ.
Read Also: ಕಾಂಗ್ರೆಸ್ನ ಶಿವಮೊಗ್ಗ ಚಲೋ ಹೋರಾಟದಲ್ಲಿ ಗಲಭೆ ಸೃಷ್ಟಿಸಲು BJP ಸಂಚು: ಡಿಕೆಶಿ ಆರೋಪ