ಅಸ್ಸಾಂ ಚುನಾವಣೆ: ಕಾಂಗ್ರೆಸ್-AIUDF ಮೈತ್ರಿ ‘ಮಹಾಜೋತ್’ ಅಲ್ಲ ‘ಮಹಾಜೂತ್’; ಪ್ರಧಾನಿ ಮೋದಿ
ಕಾಂಗ್ರೆಸ್-AIUDF ‘ಮಹಾಜೋತ್’ (ಮಹಾ ಮೈತ್ರಿ) ಅಲ್ಲ, ಇದು ‘ಮಹಾಜೂತ್’ (ದೊಡ್ಡ ಸುಳ್ಳು) ಆಗಿದೆ. ಹಾಗಾಗಿ ಇದರ ಬಗ್ಗೆ ಎಚ್ಚರದಿಂದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಸ್ಸಾಂ ಜನರಿಗೆ ಕರೆ ನೀಡಿದ್ದಾರೆ.
ಬಿಹ್ಪುರಿಯಾದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಹಳೆಯ ಪಕ್ಷಕ್ಕೆ ಆದರ್ಶಗಳಾಗಲೀ, ಸಮರ್ಥ ನಾಯಕರಾಗಲಿ ಇಲ್ಲ ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಕೆ ಪಾಸ್ ನಾ ನೇತಾ ಹೈ ನಾ ನಿತಿ, ಸರ್ಫ್ ಮಹಾಜೂತ್ ಹೈ (ಕಾಂಗ್ರೆಸ್ಗೆ ನಾಯಕ ಅಥವಾ ಆದರ್ಶಗಳಿಲ್ಲ, ಅದು ದೊಡ್ಡ ಸುಳ್ಳನ್ನು ಮಾತ್ರ ಹೊಂದಿದೆ)” ಎಂದು ಅವರು ಹೇಳಿದ್ದಾರೆ.
“ರಾಜ್ಯದ ಗುರುತು (ಐಡೆಂಟಿಟಿ) ಮತ್ತು ಸಂಸ್ಕೃತಿಗೆ ಅಪಾಯಕಾರಿಯಾದ ಶಕ್ತಿಗಳೊಂದಿಗೆ ಕಾಂಗ್ರೆಸ್ ಜೋಡಿಸಿದೆ ಎಂಬ ವಿಚಾರದ ಬಗ್ಗೆ ನಾನು ನಿಮ್ಮನ್ನು ಜಾಗೃತಗೊಳಿಸಲು ಬಂದಿದ್ದೇನೆ” ಎಂದು ಮೋದಿ ಹೇಳಿದರು.
ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಯಾವುದೇ ಮಟ್ಟಕ್ಕೆ ಇಳಿಯಬಹುದು. ಒಳನುಸುಳುವ ಅಕ್ರಮ ವಲಸಿಗರ ಬಲದಿಂದ ಹುಟ್ಟಿರುವ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಜನರನ್ನು ವಿಭಜಿಸುತ್ತದೆ” ಎಂದು ಆರೋಪಿಸಿದ್ದಾರೆ.
ಎನ್ಡಿಎ ಸರ್ಕಾರ ಬಾಂಗ್ಲಾದೇಶದಿಂದ ಅಕ್ರಮ ಒಳನುಸುಳುವಿಕೆಯನ್ನು ತಡೆಗಟ್ಟುತ್ತದೆ ಮತ್ತು ಗಡಿ ಭದ್ರತೆಯನ್ನು ಬಲಪಡಿಸಲು ಕ್ರಮ ಕೈಗೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ.
“ರಾಜ್ಯದ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳನ್ನು ರಕ್ಷಿಸಿರುವ ಬಿಜೆಪಿ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಗುರುತನ್ನು ನಾಶಮಾಡುವವರು ಮತ್ತು ಅಕ್ರಮ ವಲಸಿಗರಿಗೆ ಪ್ರವೇಶವನ್ನು ನೀಡುವವರಿಗೆ ನೀವು ಅಸ್ಸಾಂ ಅಧಿಕಾರವನ್ನು ಹಸ್ತಾಂತರಿಸಬಹುದೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಅಸ್ಸಾಂನ ಬಿಹಪುರಿಯಾ ಮತ್ತು ಸಿಪಾಜಾರ್ನಲ್ಲಿ ಎರಡು ಚುನಾವಣಾ ರ್ಯಾಲಿಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಮೇಲೆ BJP-RSS ದಾಳಿ ಮಾಡುತ್ತಿವೆ; ಸಂಸ್ಕೃತಿಯನ್ನು ಕಾಂಗ್ರೆಸ್ ರಕ್ಷಿಸಲಿದೆ: ಕಾಂಗ್ರೆಸ್ ಪ್ರಣಾಳಿಕೆ