‘ನನಗೆ ಒಬ್ಬಳೇ ಹೆಂಡತಿ, ಒಂದೇ ಸಂಸಾರ’ : ಸುಧಾಕರ್ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು!
ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಬಿಸಿ ಬಿಸಿ ಚರ್ಚೆಯಾಗುತ್ತಿರುವಾಗಲೇ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕಾಂಗ್ರೆಸ್ ನಾಯಕರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ಸುಧಾಕರ್ ನುಡಿಮುತ್ತುಗಳನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ. ಈ ವಿಚಾರವನ್ನು ನಮ್ಮ ನಾಯಕರೊಂದಿಗೆ ಮಾತನಾಡುತ್ತೇನೆ. ಚರ್ಚೆ ಮಾಡುವಂತ ಹೇಳಿಕೆ ಇದು. ಇಲ್ಲಿ ಮಾತನಾಡುವುದಿಲ್ಲ ಅಸೆಂಬ್ಲಿಯಲ್ಲಿ ಚರ್ಚೆ ಮಾಡಬೇಕು. ನನಗೆ ಇರೋದು ಒಂದೇ ಹೆಂಡತಿ. ಒಂದೇ ಸಂಸಾರ’ ಎಂದು ತಿರುಗೇಟು ಕೊಟ್ಟಿದ್ದಾರೆ.
ಡಾ.ಕೆ ಸುಧಾಕರ್ ಹೇಳಿದ್ದೇನು..?
‘ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ ನ ರಮೇಶ್ ಕುಮಾರ್, ಮುನಿಯಪ್ಪ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜೆಡಿಎಸ್ ಕುಮರಾಣ್ಣವರು ಏಕಪತ್ನಿವ್ರತಸ್ಥರಾ? ಸತ್ಯಹರಿಶ್ಚಂದ್ರರಾ? ರಮೇಶ್ ಕುಮಾರ್, ಮುನಿಯಪ್ಪ, ಸಿದ್ದರಾಮಯ್ಯ, ಕುಮರಾಣ್ಣವರು, ಡಿಕೆಶಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರಾ? ಯಾರು ಸದನದಲ್ಲಿ ಮಾತನಾಡುತ್ತಾರೋ ಅವರಿಗೆಲ್ಲಾ ಒಂದು ಸವಾಲು ಹಾಕುತ್ತೇನೆ. 224 ಶಾಸಕರ ತನಿಖೆ ಆಗಲಿ. ಯಾರ್ಯಾರು ಸಿಎಂ ಆಗಿದ್ದಾಗ ಏನೇನು ಮಾಡಿದ್ದಾರೆ? ಎಲ್ಲರ ಬಗ್ಗೆ ತನಿಖೆ ಆಗಲಿ. ಎಲ್ಲಾ ಪಕ್ಷದ ಮಾಜಿ ಹಾಗೂ ಹಾಲಿ ಸಚಿವರು ಮತ್ತು ಶಾಸಕರ ತನಿಖೆ ಆಗಲಿ. ಆಗ ರಾಜ್ಯದ ಜನರಿಗೆ ತಿಳಿಯುತ್ತದೆ’ ಎಂದು ಸವಾಲು ಹಾಕಿದ್ದರು.
ಆದರೆ ರಮೇಶ್ ಜಾರಕಿಹೊಳಿ ಸಿಡಿ ತನಿಖೆಯಲ್ಲಿರುವಾಗ ಸಚಿವ ಸುಧಾಕರ್ ಈ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.