ಸಿಡಿ ಬಗ್ಗೆ ಕಾಂಗ್ರೆಸ್ ಗೆ ಸುಧಾಕರ್ ಸವಾಲ್ : ಬಿದ್ದು ಬಿದ್ದು ನಕ್ಕ ಸೌಮ್ಯಾರೆಡ್ಡಿ! ಯಾರು ಏನೇಳಿದ್ರು?
ರಮೇಶ್ ಜಾರಕಿಹೊಳಿ ಸಿಡಿ ತನಿಖೆಯ ಹಂತದಲ್ಲಿರುವಾಗಲೇ ಸಚಿವ ಸುಧಾಕರ್ ಹೇಳಿಕೆ ಸಂಚಲನ ಉಂಟುಮಾಡಿದೆ. ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ಪ್ರಶ್ನಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಸಚಿವ ಸುಧಾಕರ್ ಓಪನ್ ಚಾಲೆಂಜ್ ಹಾಕಿದ್ದು ಇದಕ್ಕೆ ಕೆಲ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ.
ಡಾ. ಕೆ ಸುಧಾಕರ್ ಚಾಲೆಂಜ್ ಏನು..?
ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ಪ್ರಶ್ನಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಸುಧಾಕರ್ ಓಪನ್ ಚಾಲೆಂಜ್ ಹಾಕಿದ್ದು, “ರಮೇಶ್ ಕುಮಾರ್, ಮುನಿಯಪ್ಪ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜೆಡಿಎಸ್ ಕುಮರಾಣ್ಣವರು ಏಕಪತ್ನಿವ್ರತಸ್ಥರಾ? ಸತ್ಯಹರಿಶ್ಚಂದ್ರರಾ?ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರಾ? 224 ಶಾಸಕರ ತನಿಖೆ ಆಗಲಿ. ಯಾರ್ಯಾರು ಸಿಎಂ ಆಗಿದ್ದಾಗ ಏನೇನು ಮಾಡಿದ್ದಾರೆ? ಎಲ್ಲರ ಬಗ್ಗೆ ತನಿಖೆ ಆಗಲಿ. ಆಗ ಅವರ ಜೀವನದಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರಾ? ಇಟ್ಟುಕೊಂಡಿಲ್ವಾ? ಅನ್ನೋದು ರಾಜ್ಯದ ಜನರಿಗೆ ತಿಳಿಯುತ್ತದೆ’ ಎಂದು ಸವಾಲು ಹಾಕಿದ್ದರು.
ಶಾಸಕಿ ಸೌಮ್ಯರೆಡ್ಡಿ ಪ್ರತಿಕ್ರಿಯೆ ಏನು?
ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ಕೇಳಿ ವಿಧಾನಸೌಧದಲ್ಲಿ ಸೌಮ್ಯರೆಡ್ಡಿ ಬಿದ್ದು ಬಿದ್ದು ನಕ್ಕಿದ್ದಾರೆ. ಸುಧಾಕರ್ ‘ಕಾಮಿಡಿ ಮಾಡುತ್ತಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿಕೆ:
ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ನಾನು ‘ನೂರಕ್ಕೆ ನೂರರಷ್ಟು ಏಕಪತ್ನಿವ್ರತಸ್ಥ’ ಎಂದಿದ್ದಾರೆ. ಯಾವ ದೇವರ ಮೇಲೆ ಪ್ರಮಾಣ ಮಾಡಬೇಕು ಹೇಳಲಿ ನಾನು ಹೋಗಿ ಮಾಡುತ್ತೇನೆ.
ಅವರು ಯಾಕೆ ಬಾಯಿಗೆ ಬಂದಂತೆ ಮಾತನಾಡುತ್ತಾರೋ ಗೊತ್ತಿಲ್ಲ. ಅವರು ಸಂಬಂಧ ಇಟ್ಟುಕೊಂಡಿದ್ದಾರಾ? ಎಲ್ಲರ ಬಗ್ಗೆ ಯಾಕೆ ಮಾತನಾಡಬೇಕು..?ಎಂದು ತಿರುಗೇಟು ಕೊಟ್ಟಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ :
ಕಮಿಟಿ ಮಾಡಿ ಸತ್ಯಶೋಧನೆ ಮಾಡಬೇಕು. ಸುಧಾಕರ್ ಸರಿಯಾಗೇ ಹೇಳಿದ್ದಾರೆ. ಅವರು ಹೇಳಿದ್ದು ಸರಿಯಾಗೇ ಇದೆ. ಸಚಿವ ಸ್ಥಾನದಲ್ಲಿರೋರು ಜವಬ್ದಾರಿಯುತ ಸ್ಥಾನದಲ್ಲಿ ಇರೋರು ಹೇಳಿದ್ದಾರೆ ಎಂದರೆ ನೂರಕ್ಕೆ ನೂರಷ್ಟು ತನಿಖೆ ಆಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಎಂದಿದ್ದಾರೆ.
ಮಾಜಿ ಸಚಿವ ಹೆಚ್.ಡಿ ರೇವಣ್ಣ :
ಡಬಲ್ ಇಂಜಿನಿ ಸರ್ಕಾರ ಇವರದ್ದು. ಕೇಂದ್ರ-ರಾಜ್ಯದಲ್ಲಿ ಇದೆ. ಸರ್ಕಾರ ಅವರ ಕೈಯಲ್ಲಿ ಇದೆ. ತನಿಖೆ ಮಾಡಲಿ. ಬೇಕಾದರೆ ರಾಮದೇವರ ದೇವಸ್ಥಾನಕ್ಕೆ ಹೋಗಿ ಬರೋಣ ಅಂದ್ರೆ ಹೋಗಿ ಬಂದರಾಯ್ತು ಎಂದು ವ್ಯಂಗ್ಯವಾಡಿದ್ದಾರೆ.
ಶಾಸಕಿ ರೂಪಾ ಶಶಿಧರ್ :
‘ಸುಧಾಕರ್ ಬಳಸಿರುವ ಪದ ತಪ್ಪು’ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಈ ಸ್ಥಾನಕ್ಕೆ ಬರುವವರು ಗೌರವಯುತವಾಗಿ ಇದ್ದಾರೆ. ಅವರವರ ವೈಯಕ್ತಿಕ ವಿಚಾರವನ್ನು ನಾವು ಮಾತನಾಡಲ್ಲ. ಅವರು ಮಾಧ್ಯಮದ ಮುಂದೆ ಮಾತನಾಡುವಾಗ ಎಚ್ಚರ ವಹಿಸಬೇಕು ಎಂದಿದ್ದಾರೆ.