‘ರಾಬರ್ಟ್’ ಸಕ್ಸಸ್ ಯಾತ್ರೆಗೆ ಬ್ರೇಕ್ ಬೀಳುತ್ತಾ..? : ಮತ್ತೆ 50% ಥಿಯೇಟರ್ ಭರ್ತಿಗೆ ಚಿಂತನೆ!
ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದಂತೆ ತಜ್ಞರ ಸಲಹ ಸಮಿತಿ ಥಿಯೇಟರ್ ಗಳಲ್ಲಿ ಶೇ.50 ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಇದರ ಬಗ್ಗೆ ಆರೋಗ್ಯ ಸಚಿವ ಕೆ. ಸುಧಾಕರ್ ಅವರು ಸಿಎಂ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಈ ಹೇಳಿಕೆ ಸದ್ಯ ಸಿನಿಮಾರಂಗದಲ್ಲಿ ಸಂಚಲ ಮೂಡಿಸಿದೆ.
ಹೌದು… ದಿನದಿಂದ ದಿನಕ್ಕೆ ಕೊರೊನಾ ಅಬ್ಬರ ಹೆಚ್ಚಾಗುತ್ತಿರುವ ಬೆನ್ನಲ್ಲೆ ರಾಜ್ಯದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಹೀಗಾಗಿ ಜನ ಸಂದಣಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜನ ಪಾಲಿಸುವಂತೆ ಜಿಲ್ಲಾಡಳಿತ ಎಚ್ಚರ ವಹಿಸಬೇಕು ಎಂದು ಆದೇಶಿಸಿದೆ. ಇದರ ಬೆನ್ನಲ್ಲೆ ತಜ್ಞರ ಸಲಹಾ ಸಮಿತಿ ಇನ್ ಡೋರ್ ಸ್ವಿಮ್, ಜಿಮ್, ಥಿಯೇಟರ್ 50% ಭರ್ತಿ, ಪಾರ್ಕ್ ಬಂದ್, ಅಪಾರ್ಟ್ ಮೆಂಟ್ ಕಾರ್ಯಕ್ರಮಗಳನ್ನು ನಿಲ್ಲಿಸಲು ಜೊತೆಗೆ ಕಾಲೇಜು ಬಂದ್ ಗೆ ಸೂಚನೆ ನೀಡಿದೆ. ಆದರೂ ಸರ್ಕಾರ ತಜ್ಞರ ವರದಿಯನ್ನು ನಿರ್ಲಕ್ಷ್ಯ ವಹಿಸಿದೆ. ಸರ್ಕಾರ ರಚನೆ ಮಾಡಿದ ತಜ್ಞರ ಸಮಿತಿ ನೀಡಿದ ವರದಿಯನ್ನೇ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎನ್ನಲಾಗುತ್ತಿದೆ.
ಸದ್ಯ ಶೇ. 50ರಷ್ಟು ಸಿನಿಮಾ ಥಿಯೇಟರ್ ಭರ್ತಿ ಬಗ್ಗೆ ಸಿಎಂ ಜೊತೆಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾತನಾಡುವುದಾಗಿ ಪುನರರುಚ್ಚರಿಸಿದ್ದಾರೆ. ಇದು ಮುಂಬರುವ ಸಿನಿಮಾಗಳಿಗೆ ಆತಂಕವನ್ನುಂಟು ಮಾಡಿದೆ. ಜೊತೆಗೆ ರಾಬರ್ಟ್ ಸಕ್ಸಸ್ ಯಾತ್ರೆಗೆ ಬ್ರೇಕ್ ಬೀಳುತ್ತಾ..? ಎನ್ನುವ ಅನುಮಾನ ಮೂಡಿದೆ.
ಒಂದು ವೇಳೆ ಸರ್ಕಾರ ಶೇ. 50ರಷ್ಟು ಸಿನಿಮಾ ಥಿಯೇಟರ್ ಭರ್ತಿಗೆ ಆದೇಶಿಸಿದರೆ ದೊಡ್ಡ ಬಜೆಟ್ ಚಿತ್ರಗಳಾದ ಪುನೀತ್ ರಾಜಕುಮಾರ್ ಅಭಿನಿಯದ ‘ಯುವರತ್ನ’, ಕೆಜಿಎಫ್ 2, ಹೀಗೆ ಸಾಲು ಸಾಲು ಚಿತ್ರಗಳಿಗೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ.