ಮರಾಠರನ್ನು ಆಕ್ರಮಕಾರರು ಎಂದ ಗೋವಾ ಟೂರಿಸಂ ಇಲಾಖೆ; ವಿರೋಧಕ್ಕೆ ಮಣಿದು ಕ್ಷಮೆಯಾಚಿಸಿದೆ!
ಗೋವಾ ಪ್ರವಾಸೋದ್ಯಮ ಇಲಾಖೆಯು ಛತ್ರಪತಿ ಶಿವಾಜಿ ಮಹಾರಾಜ್ ನೇತೃತ್ವದ ಮರಾಠಾ ಯೋಧರನ್ನು “ಆಕ್ರಮಣಕಾರರು” ಎಂದು ಶುಕ್ರವಾರ ಟ್ವೀಟ್ ಮಾಡಿತ್ತು. ನಂತರ, ಶೀಘ್ರವೇ ಆ ಟ್ವೀಟ್ಅನ್ನು ಅಳಿಸಿ ಹಾಕಿ ಕ್ಷಮೆಯಾಚಿಸಿದೆ.
ರಾಜ್ಯದ ಬಿಜೆಪಿ ಸರ್ಕಾರವು ಮರಾಠರನ್ನು ‘ಆಕ್ರಮಣಕಾರರು’ ಎಂದು ಕರೆದು ಅವಮಾನಿಸಿದೆ ಎಂದು ದೂಷಿಸಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಗೋವಾ ಪ್ರವಾಸೋದ್ಯಮ ಸಚಿವ ಮನೋಹರ್ ಅಜ್ಗಾಂವ್ಕರ್ ತಿಳಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ @ಟೂರಿಸಂಗೋವಾ, ಅಗುವಾಡಾ ಕೋಟೆಯ ಭಾಗವಾಗಿರುವ ಅಗುವಾಡಾ ಜೈಲಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ವೇಳೆ ಡಚ್ ಮತ್ತು ಮರಾಠರನ್ನು ಆಕ್ರಮಣಕಾರರು ಎಂದು ಉಲ್ಲೇಖಿಸಿತ್ತು.
“1612 ರಲ್ಲಿ ನಿರ್ಮಿಸಲಾದ ಅಗುವಾಡಾ ಜೈಲು ಅಗುವಾಡಾದ ಸುಂದರವಾದ ಕೋಟೆಯ ಒಂದು ಭಾಗವಾಗಿದೆ. ಒಮ್ಮೆ ಡಚ್ ಮತ್ತು ಮರಾಠಾ ಆಕ್ರಮಣಕಾರರ ವಿರುದ್ಧ ಪೋರ್ಚುಗೀಸರು ತಮ್ಮ ಭದ್ರಕೋಟೆಯನ್ನು ರಕ್ಷಿಸಿಕೊಳ್ಳಲು ಈ ಕೋಟೆಯನ್ನು ನಿರ್ಮಿಸಿದ್ದರು. ನಂತರ ಈ ಕೋಟೆಯನ್ನು ಮೇಲಿನ ಮತ್ತು ಕೆಳಗಿನ ಕೋಟೆ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ” ಎಂದು ಟ್ವೀಟ್ ನಲ್ಲಿ ಗೋವಾ ಪ್ರವಾಸೋದ್ಯಮ ಹೇಳಿತ್ತು.
ನಂತರ ಟ್ವೀಟ್ ಮಾಡಿದ ಕೆಲವೇ ಸಮಯದಲ್ಲಿ ಇಲಾಖೆ ಪೋಸ್ಟ್ ಅನ್ನು ಅಳಿಸಿ ಹಾಕಿದ್ದು, ಕ್ಷಮೆಯಾಚಿಸಿದೆ.
“ಅಗುವಾಡಾ ಕೋಟೆಯ ಬಗ್ಗೆ ನಮ್ಮ ಪೋಸ್ಟ್ನಲ್ಲಿ, “ಆಕ್ರಮಣಕಾರ “ಎಂಬ ಪದವನ್ನು ಡಚ್ಚರನ್ನು ಉದ್ದೇಶಿಸಿ ಬಳಸಲಾಗಿತ್ತು. ಅದರ್ಲಲಿ, ‘ಭದ್ರಕೋಟೆಯ ವಿಚಾರದಲ್ಲಿ ಡಚ್ ಆಕ್ರಮಣಕಾರರು ಮತ್ತು ಮರಾಠಾ ಆಡಳಿತಗಾರರ ಪ್ರಾತ್ರ’ವನ್ನು ಓದಲು ಉದ್ದೇಶಿಸಲಾಗಿತ್ತು. ಆದರೆ, ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾವು ಈ ತಪ್ಪಿಗಾಗಿ ವಿಷಾದಿಸುತ್ತೇವೆ ಮತ್ತು ಕ್ಷಮೆಯಾಚಿಸುತ್ತೇವೆ” ಎಂದು ಇಲಾಖೆ ಮತ್ತೊಂದು ಟ್ವೀಟ್ ಮಾಡಿದೆ.
ಈ ರೀತಿಯ ದೋಷ ಸ್ವೀಕಾರಾರ್ಹವಲ್ಲ ಮತ್ತು ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸುವುದಾಗಿ ಅಜ್ಗಾಂವ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ನೀವು ನಡೆಸುತ್ತಿರುವ ಸರ್ಕಾರವನ್ನೋ? ಸರ್ಕಸ್ ಕಂಪನಿಯನ್ನೋ?: ಕೇಂದ್ರಕ್ಕೆ ಕಾಂಗ್ರೆಸ್ ಪ್ರಶ್ನೆ
ಇಲಾಖೆಯ ಎರಡೂ ಟ್ವೀಟ್ಗಳನ್ನು ಹಂಚಿಕೊಂಡ ಪ್ರತಿಪಕ್ಷದ ನಾಯಕ ದಿಗಂಬಾರ್ ಕಾಮತ್, “ಬೇಜವಾಬ್ದಾರಿಯುತ ಗೋವಾ ಬಿಜೆಪಿ ಸರ್ಕಾರವು ಛತ್ರಪತಿ ಶಿವಾಜಿ ಮಹಾರಾಜ್ ನೇತೃತ್ವದ ಗ್ರೇಟ್ ವಾರಿಯರ್ಸ್ ಅನ್ನು ಆಕ್ರಮಣಕಾರರು ಎಂದು ಕರೆಯುತ್ತದೆ. ಗೋವಾ ಪ್ರವಾಸೋದ್ಯಮ ಇಲಾಖೆಯು ಪೋರ್ಚುಗೀಸರ ಬಗ್ಗೆ ಪ್ರಚಾರ ಮಾಡುತ್ತಿದೆ. ಮೋದಿ ಕಾಲದ ಇತಿಹಾಸದಲ್ಲಿ ಗೋವಾ ಮುಖ್ಯಮಂತ್ರಿ ಇದನ್ನು ಬರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಉತ್ತರ ಗೋವಾದಲ್ಲಿರುವ ಅಗುವಾಡಾ ಕೋಟೆಯನ್ನು ಪೋರ್ಚುಗೀಸರು 1612 ರಲ್ಲಿ ನಿರ್ಮಿಸಿದ್ದರು. ನಾಲ್ಕು ಶತಮಾನಗಳಿಂದ ಗೋವಾವನ್ನು ಆಳಿದ ಪೋರ್ಚುಗೀಸರು ಕೋಟೆಯ ಒಂದು ಭಾಗವನ್ನು ಸೆರೆಮನೆಯನ್ನಾಗಿ ಮಾಡಿದ್ದರು. ಡಚ್ ಮತ್ತು ಮರಾಠರಿಂದ ಪೋರ್ಚುಗೀಸ್ ಭದ್ರಕೋಟೆಯನ್ನು ಕಾಪಾಡಲು ಮತ್ತು ರಕ್ಷಿಸಲು ಈ ಕೋಟೆಯನ್ನು ನಿರ್ಮಿಸಲಾಗಿತ್ತು.
ಇದನ್ನೂ ಓದಿ: ಚುನಾವಣೆ ವೇಳೆ ರಜನಿಕಾಂತ್ಗೆ ಫಾಲ್ಕೆ ಪ್ರಶಸ್ತಿ: ಇದು BJPಯ ಕೊಳಕು ರಾಜಕೀಯದ ಸಮಯ!