ಬಂಗಾಳ ಚುನಾವಣೆ; ಮತದಾನದ ಮಧ್ಯೆ ಹಲವು BJP ಮುಖಂಡರು TMCಗೆ ಸೇರ್ಪಡೆ!
ಬೇಸಿಗೆಯ ನಡುವೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಈಗಾಗಲೇ ಎರಡು ಹಂತದ ಮತದಾನ ಮುಗಿದಿದ್ದು, ಇಂದು (ಮಂಗಳವಾರ) ಮೂರನೇ ಹಂತದ ಮತದಾನ ನಡೆಯುತ್ತಿದೆ. ಈ ನಡುವೆ, ಹಲವಾರು ಬಿಜೆಪಿ ಮುಖಂಡರು ಆಡಳಿತಾರೂಢ ಟಿಎಂಸಿ ಪಕ್ಷಕ್ಕೆ ಸೋಮವಾರ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಯುವಮೋರ್ಚಾದ ನಾಯಕರಾಗಿದ್ದ ಪ್ರಿಯಾಂಶು ಪಾಂಡೆ, ರಬಿ ಸಿಂಗ್, ಸುರೋಜಿತ್ ಬಿಸ್ವಾಸ್ ಮತ್ತು ಅಖಿಲೇಶ್ ಮಲ್ಹಾ ಅವರು ಟಿಎಂಸಿ ನಾಯಕರೂ ರಾಜ್ಯ ಸಚಿವರೂ ಆದ ಪೂರ್ಣೇಂದು ಬಸು ಮತ್ತು ಸಂಸದ ದೋಲಾ ಸೇನ್ ಸಮ್ಮುಖದಲ್ಲಿ ಟಿಎಂಸಿಗೆ ಸೇರಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಮಮತಾ ಅವರು ಮಾಡಿರುವ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನೋಡಿ ನಾವು ಟಿಎಂಸಿ ಸೇರಿದ್ದೇವೆ ಎಂದು ಅವರು ಹೇಳಿದ್ದಾರೆ.
ಟಿಎಂಸಿ ಸಾಗರ ಇದ್ದಂತೆ. ವಿವಿಧೆಡೆಗಳ ಜನ ಟಿಎಂಸಿ ಸೇರಿರುವುದನ್ನು ನೀವು ಕಂಡಿರಬಹುದು. ರಾಜ್ಯದಲ್ಲಿ ಮತ್ತೆ ಟಿಎಂಸಿ ಸರ್ಕಾರ ರಚನೆಯಾಗುವುದು ನಿಸ್ಸಂದೇಹ” ಎಂದು ಟಿಎಂಸಿ ನಾಯಕ ಬಸು ಹೇಳಿದ್ದಾರೆ.
“ಬಿವೈಜೆಎಂನಲ್ಲಿ ನಬನ್ನ ಅಭಿಯಾನ್ ಚಳವಳಿ ಆರಂಭಿಸಿದ ವ್ಯಕ್ತಿ ನಾನು. ಆದರೆ ಬಿಜೆಪಿ ಇಂದು ಅದೇ ಪಕ್ಷವಾಗಿ ಉಳಿದಿಲ್ಲ ಎನ್ನಲು ನನಗೆ ಅವಮಾನವಾಗುತ್ತಿದೆ. ಟಿಎಂಸಿಗೆ ದ್ರೋಹ ಮಾಡಿದವರು ಬಂಗಾಳದಲ್ಲಿ ಬಿಜೆಪಿಯಲ್ಲಿದ್ದಾರೆ” ಎಂದು ಪ್ರಿಯಾಂಶು ಪಾಂಡೆ ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಭ್ರಷ್ಟಾಚಾರದ ಆರೋಪ : ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅನಿಲ್ ದೇಶ್ಮುಖ್..!