ರಸ ಗೊಬ್ಬರ ಬೆಲೆ ಏರಿಕೆ : ಇದು ದೇಶ ವಿನಾಶದ ಕೃತ್ಯ ಎಂದು ಸಿದ್ದರಾಮಯ್ಯ ಆಕ್ರೋಶ!

ರಸ ಗೊಬ್ಬರ ಬೆಲೆ ಏರಿಕೆ ಬೆನ್ನಲ್ಲೆ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಸಿದ್ದರಾಮಯ್ಯ. ” ಕೇಂದ್ರದದಲ್ಲಿರುವ ಮೋದಿಯವರ ನೇತೃತ್ವದ ಸರ್ಕಾರ ಯಾವ ದೃಷ್ಟಿಯಿಂದ ನೋಡಿದರೂ ಬಡವರ, ರೈತರ, ಹಿಂದುಳಿದವರ, ದಲಿತರ, ಮಹಿಳೆಯರ, ಮಕ್ಕಳ ಪರವಾಗಿಲ್ಲ ಎಂಬುದು ಪದೇ ಪದೇ ನಿಜವಾಗುತ್ತಿದೆ. ಮೋದಿಯವರ ಭಾಷಣಗಳು ಹೂರಣ ಇಲ್ಲದ ಹೋಳಿಗೆಯಂತೆ, ಕಡುಬಿನಂತೆ. ಅವರು ಬರೀ ಸುಳ್ಳು ಹೇಳುತ್ತಿದ್ದಾರೆ. ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್ ಹೂವನ್ನೇ ನಿಜವಾದ ಹೂವು ಅನ್ನುತ್ತಾರೆ. ಮುಗ್ಧ ಜನರೂ ಕೆಲವೊಮ್ಮೆ ನಂಬಿಬಿಡುತ್ತಾರೆ. ಇಂಥ ಮನೆಹಾಳು, ಜನದ್ರೋಹಿ ಸರ್ಕಾರಗಳನ್ನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ ” ಎಂದು ಕಡಿ ಕಾರಿದ್ದಾರೆ.

ದೇಶ ಭೀಕರ ಹತಾಶೆಯಲ್ಲಿದೆ. ದೇಶದ ಎಲ್ಲ ರಂಗಗಳೂ ಮಕಾಡೆ ಮಲಗಿವೆ. ದೇಶದ ಸರ್ಕಾರಿ ಖಜಾನೆ ಖಾಲಿಯಾಗುತ್ತಿದೆ. ಆದರೆ ಅದಾನಿ, ಅಂಬಾನಿ ಮುಂತಾದವರ ಖಜಾನೆಗಳು ತುಂಬಿ ತುಳುಕುತ್ತಿವೆ. ಕೋವಿಡ್ ಬಿಕ್ಕಟ್ಟಿನಲ್ಲೂ 12 ಲಕ್ಷ ಕೋಟಿಗೂ ಹೆಚ್ಚು ಸಂಪತ್ತು ವೃದ್ಧಿಯಾಗಿದೆ. ಅವರ ಮೇಲೆ ತೆರಿಗೆ ಹಾಕುವ ಬದಲು ಬಡವರ ಅನ್ನದ ತಟ್ಟೆಯ ಮೇಲೆ ಮೋದಿಯರು ಕಣ್ಣು ಹಾಕಿದ್ದಾರೆ.

ದೇಶ ಬಿಕ್ಕಟ್ಟಿನ ಬೆಂಕಿಯಲ್ಲಿ ಬೇಯುವಾಗ ನಮ್ಮ ರೈತರು ಕಷ್ಟ ಪಟ್ಟು ದುಡಿದು ಈ ವರ್ಷ ದೇಶವನ್ನು ಉಳಿಸಿದ್ದರು. ಕೃಷಿಯು ರಾಜ್ಯದಲ್ಲಿ ಶೇ.6.4 ರಷ್ಟು ಪ್ರಗತಿ ಕಂಡಿದೆ. ದೇಶದಲ್ಲಿ ಶೇ. 3.4 ಕ್ಕೂ ಹೆಚ್ಚು ಬೆಳವಣಿಗೆ ಕಂಡಿದೆ. ದೇಶದ ಜಿ.ಡಿ.ಪಿ ಗೆ ಈ ವರ್ಷ ಶೇ. 20 ರಷ್ಟು ಕೊಡುಗೆಯನ್ನು ಕೃಷಿ ಕೊಟ್ಟಿದೆ. ಇಂಥ ಸಂದರ್ಭದಲ್ಲಿ ಈ ಮನೆಹಾಳು ಮೋದಿ ಸರ್ಕಾರ ರಸಗೊಬ್ಬರದ ಬೆಲೆಗಳನ್ನು ಶೇ. 60 ರಷ್ಟು ಹೆಚ್ಚಿಸಿದೆ. ಡಿ.ಎ.ಪಿ ಗೊಬ್ಬರ ಏಪ್ರಿಲ್ 1 ರಿಂದ ಒಂದು ಕ್ವಿಂಟಾಲಿಗೆ 1400 ಗಳಷ್ಟು ಬೆಲೆ ಜಾಸ್ತಿಯಾಗುತ್ತಿದೆ. ಇದುವರೆಗೆ 2400 ರೂಪಾಯಿಗಳಿದ್ದ ಬೆಲೆ ಈಗ 3800 ರೂ ಗಳಾಗುತ್ತಿದೆ.

ಹಾಗೆಯೇ ಎನ್.ಪಿ.ಕೆ ಸಾರಜನಕ, ರಂಜಕ ಮತ್ತು ಪೊಟ್ಯಾಷ್]ಗಳ ಮೇಲಿನ ಬೆಲೆ ಒಂದು ಕ್ವಿಂಟಾಲ್ ಗೆ 1250 ರೂಪಾಯಿಗಳಷ್ಟು ಹೆಚ್ಚಿಸಿದ್ದಾರೆ. ಇದುವರೆಗೆ 2350 ರೂಗಳಿಗೆ ಸಿಗುತ್ತಿದ್ದ ಗೊಬ್ಬರ ಈಗ 3600 ಆಗಲಿದೆ. ಕೇಂದ್ರ ಸರ್ಕಾರ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಜಾಸ್ತಿಯಾಗಿದೆ ಎನ್ನುತ್ತಿದೆ. ಅದಕ್ಕೆ ಬೆಲೆ ಜಾಸ್ತಿ ಮಾಡಿದ್ದೇವೆ ಎನ್ನುತ್ತಾರೆ. ಇದು ಶುದ್ಧ ಸುಳ್ಳು.. ಈ ಬಾರಿ ಬಜೆಟ್ಟಿನಲ್ಲಿ 54417 ಕೋಟಿ ರೂಪಾಯಿಗಳಷ್ಟು ಸಬ್ಸಿಡಿಯನ್ನು ಕಡಿಮೆ ಮಾಡಿದೆ. ಕಳೆದ ವರ್ಷ 1,33,947 ಕೋಟಿ ರೂಪಾಯಿಗಳನ್ನು ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲಾಗಿತ್ತು. ಈಗ ಅದು 79530 ಕೋಟಿ ರೂಪಾಯಿಗಳಿಗೆ ಇಳಿಸಿದ್ದಾರೆ. ಶೇ 40.62 ರಷ್ಟು ಕಡಿಮೆ ಮಾಡಿದ್ದಾರೆ. ಆದ್ದರಿಂದಲೇ ಏಪ್ರಿಲ್ 1 ರಿಂದ ಬೆಲೆ ಹೆಚ್ಚಾಗಿದೆ.

ಇದನ್ನು ಪ್ರಶ್ನಿಸದ ರಾಜ್ಯ ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಬಿ.ಜೆ.ಪಿ ಎಂ.ಪಿಗಳು ಹೇಡಿಗಳು, ಗುಲಾಮೀ ಮನಸ್ಥಿತಿಯವರು. ಇವರು ರಾಜ್ಯಕ್ಕೆ ಅಷ್ಟೆ ಅಲ್ಲ. ಭೂಮಿಗೇ ಭಾರ. ಈ ದುಷ್ಟ ಬಿ.ಜೆ.ಪಿ ಸರ್ಕಾರಗಳನ್ನು ಮೊದಲು ಕಿತ್ತೆಸೆಯದಿದ್ದರೆ ದೇಶ ಜಗತ್ತಿನಲ್ಲಿ ತಲೆ ಎತ್ತಿ ನಡೆಯಲಾಗದ ಸ್ಥಿತಿಗೆ ತಲುಪುತ್ತದೆ. ದೇಶದ ಜನ ಎರಡು ಹೊತ್ತಿನ ಅನ್ನಕ್ಕೆ ಪರದಾಡಬೇಕಾದ ಸ್ಥಿತಿಗೆ ಬರುತ್ತಾರೆ. ದೇಶದ ಪ್ರಜ್ಞಾವಂತರು, ಮಾಧ್ಯಮಗಳು ಇಂಥ ಹೊತ್ತನಲ್ಲೂ ಸುಮ್ಮನೆ ಕೂರಬಾರದು. ಹಾಗೆ ಕೂತರೆ ನಮ್ಮ ಮುಂದಿನ ತಲೆಮಾರುಗಳು ನಮ್ಮನ್ನು ಕ್ಷಮಿಸಲಾರವು. ಗ್ಯಾಸ್, ಪೆಟ್ರೋಲ್ ,ಡೀಸೆಲ್ ಎಲ್ಲವುಗಳ ಬೆಲೆ ಗಗನ ಮುಟ್ಟಿದೆ. ಇಂಥ ಸಂದರ್ಭದಲ್ಲಿ ರಸಗೊಬ್ಬರಗಳ ಬೆಲೆ ಹೆಚ್ಚಿಸಲಾಗಿದೆ. ಇದು ರೈತನ ಹೊಟ್ಟೆಯ ಮೇಲೆ ಹಾಕಿದ ಭೀಕರ ಬರೆ. ರಸಗೊಬ್ಬರಗಳ ಬೆಲೆಯೇರಿಕೆಯಂಥ ಜನದ್ರೋಹಿ ನಿರ್ಧಾರವನ್ನು ಈ ಕೂಡಲೇ ವಾಪಸ್ಸು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights