ಕೊರೊನಾ ನಿಯಮ ಮೀರಿ ಜಾತ್ರೆ : ಪೊಲೀಸರ್ ಲಾಠಿ ಚಾರ್ಜ್ಗೂ ಬಗ್ಗದ ಜನ..!
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸರ್ಕಾರ ಕಟ್ಟುನಿಟ್ಟಿನಿ ಕೊರೊನಾ ನಿಯಮಗಳನ್ನು ಜಾರಿಗೆ ತಂದಿದೆ. ಇದರ ನಡುವೆ ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಕಾಡ ಸಿದ್ದೇಶ್ವರ ಜಾತ್ರೆಯಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿ ರೈಥೋತ್ಸವ ಮಾಡಲಾಗಿದೆ.
ಜಿಲ್ಲೆಯ ಜಿಲ್ಲಾಡಳಿತ ಎಲ್ಲ ಜಾತ್ರಾ ಮಹೋತ್ಸವದ ರಥ ಎಳೆಯಲು ನಿಷೇಧ ಹೇರಿದೆ. ಭಕ್ತರ ಒತ್ತಾಯದ ಮೇರೆಗೆ ಐದು ಅಡಿ ಉದ್ದದವರೆಗೂ ತೇರು ಎಳೆಯಲು ಅವಕಾಶ ನೀಡಲಾಗಿತ್ತು. ಜಾತ್ರೆಯ ವೇಳೆ ಕೆಲ ಯುವಕರು ಪ್ರತಿ ವರ್ಷದಂತೆ ನಿಗದಿತ ಸ್ಥಳದವರೆಗೂ ಎಳೆಯಲು ಮುಂದಾಗಿದ್ರು. ಐದು ಅಡಿಗಿಂತ ಹೆಚ್ಚು ಮುಂದೆ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ ಎಂದು ಹೇಳಿದ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು.
ಬ್ಯಾರಿಕೇಡ್ ಕಿತ್ತೆಸೆದು ರಥೋತ್ಸವಕ್ಕೆ ಮುಂದಾದಾಗ ಯುವಕರ ಗುಂಪು ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಲಾಠಿ ಬೀಸಿದ್ದಾರೆ. ಕೆಲ ಕಿಡಿಗೇಡಿಗಳು ಬ್ಯಾರಿಕೇಡ್ ಗಳು ಒಂದೆಡೆ ಸೇರಿಸಿ ಅವುಗಳ ಮೇಲೆ ಕಲ್ಲು ಎತ್ತಿ ಹಾಕಿ ಜಖಂಗೊಳಿಸಿ ಪುಂಡತನ ಮೆರೆದಿದ್ದಾರೆ.
ತಳ್ಳಾಟ-ನೂಕಾಟದಲ್ಲಿ ಓರ್ವ ಪೊಲೀಸ್ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಓರ್ವ ಪೇದೆ ಸೇರಿದಂತೆ ಕೆಲ ಭಕ್ತರು ಗಾಯಗೊಂಡಿದ್ದಾರೆ. ರಥೋತ್ಸವದ ವೇಳೆಯ ಗಳಾಟೆ ದೃಶ್ಯಗಳು ಸ್ಥಳೀಯರ ಮೊಬೈಲೆ ನಲ್ಲಿ ಸೆರೆಯಾಗಿವೆ.