ಪ್ರಧಾನಿ ಮೋದಿಗೆ ಜನರ ಆರೋಗ್ಯಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ: ಡಿಕೆ ಶಿವಕುಮಾರ್
ಪ್ರಧಾನಿ ಮೋದಿಯವರಿಗೆ ಜನರ ಆರೋಗ್ಯಕ್ಕಿಂತ ಚುನಾವಣೆ ಮತ್ತು ಚುನಾವಣಾ ರ್ಯಾಲಿಗಳೇ ಮುಖ್ಯವಾಗಿವೆ. ಅವರು ಜನರ ಆರೋಗ್ಯಕ್ಕಿಂತ ಚುನಾವಣೆಗಳಿಗೆ ಹೆಚ್ಚು ಒತ್ತುಕೊಡುತ್ತಾರೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿಯೂ ಮತ ಕೇಳಲು ಪ್ರಚಾರಕ್ಕೆ ಬರುತ್ತಾರೆ ಎಂದು ಮೋದಿ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಘೋಷಣೆ ಮಾಡಿತು. ಆದರೆ, ಇಲ್ಲಿಯವರೆಗೆ ಯಾರಿಗೆ ಆ ಹಣ ಸಿಕ್ಕಿದೆ. ಜಿಎಸ್ ಟಿ ಕಟ್ಟುವ ದುಡ್ಡಿಗೂ ಪೆನಾಲ್ಟಿ ಹಾಕ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ. ಸಿಮೆಂಟ್, ಗೊಬ್ಬರದ ಬೆಲೆ ಗಗನಕ್ಕೆ ಹೋಗಿದೆ. ರೈತರು ಇವತ್ತು ಪರದಾಡುತ್ತಿದ್ದಾರೆ. ಹೆಣ್ಣುಮಕ್ಕಳು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಯಾವ ಸಹಾಯಧನ ಸರ್ಕಾರ ನೀಡುತ್ತಿದೆ ಎಂದು ಪ್ರಶ್ನಿಸಿದರು.
ಸರ್ಕಾರ ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಟಿದೆ. ಹೆಣ ಸುಡುವವರಿಗೆ ವೇತನ ಕೊಡುತ್ತಿಲ್ಲ. ಹೆಣ ಹೂಳಲು ಜಾಗವಿಲ್ಲ. ಹೆಣ ಸುಡುವುದಕ್ಕೂ ಕ್ಯೂ ನಿಲ್ಲಬೇಕಾಗಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟಿವರ ಶವಗಳನ್ನು ಸುಡುವುದಕ್ಕೆ ಕಂದಾಯ ಭೂಮಿಯನ್ನು ಗುರುತಿಸಿ ಅವಕಾಶ ಮಾಡಿಕೊಡಬೇಕು ಎಂದು ಡಿಕೆಶಿ ಒತ್ತಾಯಿಸಿದ್ದಾರೆ.
ರಾತ್ರಿ ಕರ್ಫ್ಯೂನಿಂದ ಏನು ಪ್ರಯೋಜನ? ರಾತ್ರಿ ಲಾಕ್ಡೌನ್ ಮಾಡಿದರೆ ಮಾತ್ರ ಉಪಯೋಗವಾಗುತ್ತದೆಯೇ? ಹಗಲು ಹೊತ್ತು ಕೊರೊನಾ ಬರಲ್ವಾ? ಜನರ ಜೀವದ ಜೊತೆ ಬದುಕು ಮುಖ್ಯ. ಅದಕ್ಕೆ ನಾವು ಲಾಕ್ ಡೌನ್ ಗೆ ವಿರೋಧವಿದ್ದೇವೆ ಎಂದಿದ್ದಾರೆ.
ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಮಾತನಾಡಿದ ಅವರು, ಸಾರಿಗೆ ನೌಕರರನ್ನು ಕರೆದು ಮಾತನಾಡಲು ಸಮಸ್ಯೆಯೇನು? ಸರ್ಕಾರಕ್ಕೆ ಪ್ರತಿಷ್ಠೆ ಯಾಕೆ? ಖಾಸಗಿಯವರಿಗೆ ಕೊಡಲು ಹೊರಟಿದ್ದೀರಾ? ನೌಕರರದ್ದು ಸರಿಯೋ, ತಪ್ಪೋ ಗೊತ್ತಿಲ್ಲ. ಆದರೆ ಮೊದಲು ಅವರನ್ನು ಕರೆದು ಮಾತುಕತೆ ನಡೆಸಿ ಎಂದು ಡಿ ಕೆ ಶಿವಕುಮಾರ್ ಆಗ್ರಹಿಸಿದರು.
ಇದನ್ನೂ ಓದಿ: ಮಾಸ್ಕ್ ಹಾಕಳಿ – ದೂರ ನಿಂತ್ಕಳಿ; ಹೇಳೋದೊಂದು ಮಾಡೋದು ಇನ್ನೊಂದು; BJP ರಾಜ್ಯಾಧ್ಯಕ್ಷ ನಳಿನ್ ಫೋಟೋ ಟ್ರೋಲ್!