ಭೂಕಬಳಿಕೆ ಆರೋಪ: ತೆಲಂಗಾಣ ಸಚಿವ ಸಂಪುಟದಿಂದ ಆರೋಗ್ಯ ಸಚಿವ ಎಟೆಲಾ ರಾಜೇಂದರ್ಗೆ ಗೇಟ್ ಪಾಸ್!
ಭೂ ಕಬಳಿಕೆ ಆರೋಪದ ಮೇಲೆ ತೆಲಂಗಾಣ ಆರೋಗ್ಯ ಸಚಿವ ಎಟೆಲಾ ರಾಜೇಂದರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಘೋಷಿಸಿದ್ದಾರೆ.
ತೆಲಂಗಾಣದ ಮೇಡಕ್ ಜಿಲ್ಲೆಯ ಮಸಾಯಿಪೆಟ್ ಮಂಡಲದಲ್ಲಿರುವ ಅಚಾಂಪೆಟ್ಟೆಯ ಹೊರವಲಯದ ಜಮೀನುಗಳನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಎಟೆಲಾ ರಾಜೇಂದರ್ ವಿರುದ್ದ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ. ಅಲ್ಲದೆ, ಈ ಪ್ರಕರಣದ ಕುರಿತು ಮೇಡಕ್ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸಮಗ್ರ ವರದಿ ಪಡೆದು, ಅದನ್ನು ತಮಗೆ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರಿಗೆ ಸಿಎಂ ಕೆಸಿಆರ್ ಸೂಚಿಸಿದ್ದಾರೆ.
ಆರೋಪಗಳ ಹಿಂದಿನ ಸತ್ಯವನ್ನು ತಿಳಿದುಕೊಳ್ಳುವಂತೆ ಡಿಜಿಪಿ ಪೂರ್ಣಚಂದ್ರ ರಾವ್ ಅವರಿಗೆ ಸೂಚನೆ ನೀಡಿದ್ದು, ಈ ಕುರಿತು ಪ್ರಾಥಮಿಕ ತನಿಖೆ ಕೂಡಲೇ ನಡೆಸಬೇಕು ಎಂದು ಸಿಎಂ ಆದೇಶ ಹೊರಡಿಸಿದ್ದಾರೆ.
ಅಚಾಂಪೆಟ್ನಲ್ಲಿ ಹಲವಾರು ರೈತರು ಮತ್ತು ಭೂಮಾಲೀಕರು ತಮ್ಮ ಭೂಮಿಯನ್ನು ರಾಜೇಂದರ್ ಕುಟುಂಬದ ಒಡೆತನದ ಜಮುನಾ ಹ್ಯಾಚರೀಸ್ಗೆ ಮಾರಾಟ ಮಾಡಲು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭೂಮಿಯನ್ನು ಕಾನೂನುಬದ್ಧವಾಗಿ ಖರೀದಿಸಲಾಗಿದೆ ಮತ್ತು ಭೂಮಾಲೀಕರು ತಮ್ಮ ಭೂಮಿಯನ್ನು ಸ್ವಿಚ್ಛೆಯಿಂದ ಬಿಟ್ಟುಕೊಟ್ಟಿದ್ದಾರೆ. ಆದರೆ, ನನ್ನ ಚಿತ್ರಣವನ್ನು ಹಾಳುಗೆಡುವಲು ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಹಿಂದೆಯೂ ಆರೋಪ ಮಾಡಲಾಗಿತ್ತು. ಆಗ ನಾನು ಹಾಲಿ ನ್ಯಾಯಾಧೀಶರಿಂದ ವಿಚಾರಣೆ ನಡೆಸುವಂತೆ ಕೋರಿದ್ದೆ. ಜಮುನಾ ಮೊಟ್ಟೆಕೇಂದ್ರಗಳ ವಿಸ್ತರಣಾ ಯೋಜನೆಯ ಬಗ್ಗೆ ನಾನು ಸಿಎಂ ಮತ್ತು ಪ್ರಧಾನ ಕಾರ್ಯದರ್ಶಿ ನರಸಿಂಗ್ ರಾವ್ ಅವರಿಗೆ ತಿಳಿಸಿದ್ದೇನೆ” ಎಂದು ರಾಜೇಂದರ್ ಹೇಳಿದ್ದಾರೆ.
ಇದನ್ನೂ ಓದಿ: ಉಪಚುನಾವಣೆ ಫಲಿತಾಂಶಕ್ಕೆ ಪಾಲಿಕೆ ಫಲಿತಾಂಶ ಬುನಾದಿ? 3 ಕ್ಷೇತ್ರಗಳಲ್ಲಿ ಗೆಲ್ಲುತ್ತಾ ಕಾಂಗ್ರೆಸ್?