ದೋಣಿ – ಹಡಗು ನಡುವೆ ಅಪಘಾತ: 25 ಜನರ ದಾರುಣ ಸಾವು!
ಪ್ರಯಾಣಿಕರನ್ನು ಹೊತ್ತೊಯ್ಯತ್ತಿದ್ದ ದೋಣಿ ಮತ್ತು ಮರಳು ಸಾಗಿಸುತ್ತಿದ್ದ ಹಡಗು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದು, ಪರಿಣಾಮ ದೋಣಿಯಲ್ಲಿದ್ದ 25 ಮಂದಿ ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ಮಧ್ಯ ಬಾಂಗ್ಲಾದ ಶಿಬ್ಬಾರ್ ಪಟ್ಟಣದ ಸಮೀಪವಿರುವ ಪದ್ಮಾ ನದಿಯಲ್ಲಿ ಸುಮಾರು 30 ಜನರನ್ನು ಹೊತ್ತೊಯ್ಯತ್ತಿದ್ದ ದೋಣಿಗೆ ಮರಳು ಸಾಗಿಸುತ್ತಿದ್ದ ಹಡಗು ಡಿಕ್ಕಿಹೊಡೆದಿದೆ. ಇದರಿಂದಾಗಿ ದೋಣಿ ಮಗುಚಿಕೊಂಡಿದ್ದು, ದೋಣಿಯಲ್ಲಿದ್ದ ಐವರನ್ನು ರಕ್ಷಿಸಲಾಗಿದೆ. 25 ಜನರ ಮೃತದೇಹವನ್ನು ಪತ್ತೆ ಮಾಡಲಾಗಿದೆ. ಆದರೆ, ದೋಣಿಯಲ್ಲಿ ನಿಖರವಾಗಿ ಎಷ್ಟು ಜನರು ಇದ್ದರು ಎಂದು ಇನ್ನೂ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಯಾಣಿಕರ ನಿಖರ ಸಂಖ್ಯೆ ತಿಳಿಯದೇ ಇರುವ ಕಾರಣ, ಪೊಲೀಸರು ರಕ್ಷಣಾ ಕಾರ್ಯವನ್ನು ಮುಂದುವರೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮಿರಾಜ್ ಹುಸೇನ್ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಈ ರೀತಿಯ ಅಪಘಾತಗಳು ಸಾಮಾನ್ಯ. ಕಳಪೆ ನಿರ್ವಹಣೆ ಹಾಗೂ ಹಡಗು ಮಾರ್ಗದಲ್ಲಿ ಸುರಕ್ಷಿತ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದೇ ಇರೋದು ಈ ಎಲ್ಲಾ ದುರಂತಗಳಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಏಪ್ರಿಲ್ ತಿಂಗಳ ಆರಂಭದಲ್ಲೂ ಸಹ 50 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ದೋಣಿಯು ಸರಕು ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ 30ಕ್ಕೂ ಹೆಚ್ಚು ಮಂದಿ ದಾರುಣವಾಗಿ ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: ನಾಳೆಯಿಂದ ಸಿಎಂ ಮನೆ ಮುಂದೆ ಧರಣಿ ಕೂರುತ್ತೇನೆ: ಹೆಚ್ಡಿ ರೇವಣ್ಣ