ಅಂಗಡಿ ಮುಚ್ಚಿಸಲು ಹೋದ ಖಾಕಿಯಿಂದ ಲಾಠಿ ಪ್ರಹಾರ : ಪೊಲೀಸ್ ಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
ಪೊಲೀಸ್ ಲಾಠಿ ಏಟಿಗೆ ಸ್ಥಳೀಯನ ತಲೆ ಒಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಪೊಲೀಸ್ ಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭೋಪಾಲ್ನಿಂದ ಸುಮಾರು 330 ಕಿ.ಮೀ ದೂರದಲ್ಲಿರುವ ಹತ್ರಪುರದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಹೌದು… ಕೊರೊನಾ ಲಾಕ್ಡೌನ್ ನಿಯಮ ಉಲ್ಲಂಘಿಸಿ ಅಂಗಡಿಗಳನ್ನು ತೆಗೆದಿದ್ದಾರೆಂದು ಅಂಗಡಿಗಳನ್ನು ಮುಚ್ಚಿಸಲು ಗ್ರಾಮಕ್ಕೆ ತೆರಳಿದ ಪೊಲೀಸ್ ಸ್ಥಳೀಯನ ತಲೆ ಒಡೆಯುವಂತೆ ಹೊಡೆದಿದ್ದಾನೆಂದು ಆರೋಪಿಸಿ ಗ್ರಾಮಸ್ಥರು ಪೊಲೀಸ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಥಳಿಸಿದ ಗ್ರಾಮಸ್ಥರಲ್ಲಿ ಒಬ್ಬರಿಗೆ ತಲೆಯಿಂದ ರಕ್ತ ಸೋರುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಸರ್ಕಾರದ ನಿಯಮದಂತೆ ಗ್ರಾಮಸ್ಥರು ಯಾರೂ ಕೂಡ ಮಾಸ್ಕ್ ಧರಿಸಿರಲಿಲ್ಲ.
ಆದರೆ ಕೋವಿಡ್ ಕರ್ಫ್ಯೂ ಉಲ್ಲಂಘಿಸಿದ ಅಂಗಡಿಗಳನ್ನು ಮುಚ್ಚುವಂತೆ ಹೇಳಿದಾಗ ಸ್ಥಳೀಯರು ಕೋಪಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋದಲ್ಲಿ ಹಲ್ಲೆಗೊಳಗಾದ ಪೊಲೀಸ್, “ಅಂಗಡಿಗಳನ್ನು ಮುಚ್ಚುವಂತೆ ಹೇಳಿದಾಗ ಅವರು ನನ್ನನ್ನು ಹೊಡೆದರು” ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇನ್ನೊಬ್ಬ ಪೊಲೀಸ್ ಅಧಿಕಾರಿ ಶಶಾಂಕ್ ಜೈನ್, “ಝಾಮ್ತುಲಿ ಗ್ರಾಮದಲ್ಲಿ ಕೋವಿಡ್ ಕರ್ಫ್ಯೂ ಉಲ್ಲಂಘಿಸಲಾಗುತ್ತಿದೆ ಎಂಬ ಮಾಹಿತಿ ನಮಗೆ ದೊರೆತಿದೆ. ನಿರ್ಬಂಧಗಳನ್ನು ಜಾರಿಗೊಳಿಸಲು ಒಂದು ತಂಡ ಅಲ್ಲಿಗೆ ಹೋಯಿತು. ಅಂಗಡಿಗಳನ್ನು ಮುಚ್ಚುವಂತೆ ಹೇಳಿದಾಗ ಕೆಲವರು ಕೋಪಗೊಂಡು ಸಿಬ್ಬಂದಿಗಳನ್ನು ಥಳಿಸಿದರು” ಎಂದಿದ್ದಾರೆ.
“ನಾವು ಇನ್ನೂ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ವಿವರಗಳನ್ನು ಪಡೆದ ಕೂಡಲೇ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದರು.
ಈ ವಾರದ ಆರಂಭದಲ್ಲಿ ಕೋವಿಡ್ ವ್ಯಾಕ್ಸಿನೇಷನ್ಗಾಗಿ ಗ್ರಾಮಸ್ಥರನ್ನು ಪ್ರೇರೇಪಿಸಲು ಉಜ್ಜಯಿನಿ ಜಿಲ್ಲೆಯ ಮಲಿಖೇಡಿ ಗ್ರಾಮಕ್ಕೆ ಭೇಟಿ ನೀಡಿದ ಮಹಿಳಾ ತಹಶೀಲ್ದಾರ್ (ಕಂದಾಯ ಅಧಿಕಾರಿ) ನೇತೃತ್ವದ ತಂಡದ ಮೇಲೆ ಸ್ಥಳೀಯರಿಂದ ದಾಳಿ ನಡೆದಿತ್ತು.
ಕಳೆದ ವರ್ಷ, ಕೆಲವು ಆರೋಗ್ಯ ಕಾರ್ಯಕರ್ತರು ಮತ್ತು ನಾಗರಿಕ ಅಧಿಕಾರಿಗಳ ಮೇಲೆ ಇಂದೋರ್ ನೆರೆಹೊರೆಯಲ್ಲಿ ಕೋಪಗೊಂಡ ಸ್ಥಳೀಯರ ಗುಂಪೊಂದು ದಾಳಿ ನಡೆಸಿತು.