ಕೊರೊನಾ ಔಷಧವನ್ನು ಅಕ್ರಮವಾಗಿ ಶೇಖರಿಸಿದ್ದ ಗೌತಮ್ ಗಂಭೀರ್; ಡ್ರಗ್ ಕಂಟ್ರೋಲರ್ ವಿರುದ್ಧ ದೆಹಲಿ ಹೈಕೋರ್ಟ್ ಕಿಡಿ!
ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿರುವ ಫ್ಯಾಬಿಫ್ಲೂ ಔಷಧವನ್ನು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಔಷಧ ನಿಯಂತ್ರಕ (ಡ್ರಗ್ ಕಂಟ್ರೋಲರ್) ವಿರುದ್ದ ದೆಹಲಿ ಹೈಕೋರ್ಟ್ ಕಿಡಿಕಾರಿದೆ.
ಇಂದು ಪ್ರಕರಣದ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ನ ನ್ಯಾ. ವಿಪಿನ್ ಸಂಘಿ ಮತ್ತು ನ್ಯಾ.ಜಸ್ಮೀತ್ ಸಿಂಗ್ ಅವರ ಪೀಠವು, ಡ್ರಗ್ ಕಂಟ್ರೋಲರ್ಅನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಪರಿಸ್ಥಿತಿಯ ಲಾಭ ಪಡೆದು ರಕ್ಷಕರೆಂಬಂತೆ ತೋರಿಸಿಕೊಳ್ಳುವ ಜನರ ಮನಸ್ಥಿತಿಯನ್ನು ಖಂಡಿಸಬೇಕು ಎಂದು ಹೇಳಿದೆ.
ಗೌತಮ್ ಗಂಭೀರ್ ಗೆ ಹೇಗೆ ಅಷ್ಟು ಪ್ರಮಾಣದ ಫಾಬಿಫ್ಲೂ ಔಷಧ ಸಿಗುವುದಕ್ಕೆ ಸಾಧ್ಯವಾಯಿತು. ಈ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸದ ಡ್ರಗ್ ಕಂಟ್ರೋಲರ್ ಮೇಲಿದ್ದ ತನ್ನ ವಿಶ್ವಾಸ ಅಲುಗಾಡಿದೆ ಎಂದು ಹೈಕೋರ್ಟ್ ಹೇಳಿದೆ.
ಫ್ಯಾಬಿಫ್ಲೂ ಔಷಧದ ಕೊರತೆ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಗೌತಮ್ ಗಂಭೀರ್ ಸಾವಿರಾರು ಸ್ಟ್ರಿಪ್ ಗಳಷ್ಟು ಮಾತ್ರೆಗಳನ್ನು ಸಂಗ್ರಹಿಸಿದ್ದಾರೆ. ಆ ವೇಳೆ ಔಷಧದ ಅಗತ್ಯವಿದ್ದ ಹಲವಾರು ಮಂದಿಗೆ ಮಾತ್ರಗಳು ಸಿಗಲಿಲ್ಲ. ಆದರೆ, ಈ ಬಗ್ಗೆ ಡ್ರಗ್ ಕಂಟ್ರೋಲರ್ ಸರಿಯಾದ ರೀತಿಯಲ್ಲಿ ತನಿಖೆಯನ್ನು ನಡೆಸಿಲ್ಲ ಎಂದು ಕಿಡಿಕಾರಿರುವ ಹೈಕೋರ್ಟ್, ತನಿಖಾ ವರದಿಯನ್ನು ಸ್ವೀಕರಿಸಲು ನಿರಾಕರಿಸಿದೆ.
ಇದನ್ನೂ ಓದಿ: ಕೊರೊನಾ ಹುಟ್ಟು ಆಕಸ್ಮಿಕವೋ? ಉದ್ದೇಶಪೂರ್ವಕವೋ? ಮೂಲ ಪತ್ತೆಗಾಗಿ ಜೋ ಬಿಡನ್ ಆದೇಶ!
ಔಷಧ ಸರಬರಾಜಿನ ಕೊರತೆ ಇತ್ತು ಎಂದು ನೀವು ಹೇಳುತ್ತಿದ್ದೀರಿ. ಇದು ತಪ್ಪು. ನಾವೇನು ಕಣ್ಣು ಮುಚ್ಚಿಕೊಂಡು ಕುಳಿತಿದ್ದೇವೆ ಎಂದು ನೀವು ಭಾವಿಸಿದಂತಿದೆ. ನೀವು ಪಾರಾಗಬಹುದು ಎಂದು ತಿಳಿದಂತಿದೆ. ಅದು ಸಾಧ್ಯವಿಲ್ಲ. ನಿಮಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ನಮಗೆ ತಿಳಿಸಿ, ನಿಮ್ಮನ್ನು ಅಮಾನತುಗೊಸುತ್ತೇವೆ. ಈ ಕೆಲಸವನ್ನು ಬೇರೆಯಾರಾದರೂ ಮಾಡುತ್ತಾರೆ ಎಂದು ಡ್ರಗ್ ಕಂಟ್ರೋಲರ್ಅನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
“ಈ ರೀತಿ ಮಾಡುವುದು ತಪ್ಪು ಎಂದು ಈಗಾಗಲೇ ಕೋರ್ಟ್ ಹೇಳಿದೆ. ತಾವೇ ಸಮಸ್ಯೆ ಸೃಷ್ಟಿಸಿ ತಾವೇ ರಕ್ಷಕರಂತೆ ಜನತೆಗೆ ತೋರಿಸಿಕೊಳ್ಳುವ ಜನರ ಮನಸ್ಥಿತಿಯನ್ನು ಖಂಡಿಸಬೇಕು. ಒಂದು ವೇಳೆ ಇದು ಮುಂದುವರೆದರೆ ಅಂಥಹ ವರ್ತನೆಗಳೊಂದಿಗೆ ಹೇಗೆ ವ್ಯವಹರಿಸಬೇಕೆಂದು ನಮಗೆ ತಿಳಿದಿದೆ” ಎಂದು ಗೌತಮ್ ಗಂಭೀರ್ ಅವರಿಗೆ ಕೋರ್ಟ್ ಎಚ್ಚರಿಸಿದೆ.
ಇದನ್ನೂ ಓದಿ: ನನ್ನನ್ನು ಡೇ ಒನ್ ಇಂದಲೂ ಟಾರ್ಗೆಟ್ ಮಾಡಲಾಗಿದೆ; ಸಂಸದ ಪ್ರತಾಪ್ ಸಿಂಹ ವಿರುದ್ಧ ರೋಹಿಣಿ ಸಿಂಧೂರಿ ಕಿಡಿ!