ಸಿಎಂ ಕುರ್ಚಿಯಿಂದ ಕೆಳಗಿಳಿತಾರಾ ಯಡಿಯೂರಪ್ಪ? ಯಾರಾಗ್ತಾರೆ ಮುಂದಿನ ಸಿಎಂ?
ಯಡಿಯೂರಪ್ಪ ಸಿಎಂ ಪಟ್ಟದಿಂದ ಕೆಳಗೆ ಇಳಿಯುವ ಕಾಲ ಇನ್ನೇನು ದೂರವಿಲ್ಲ. ಇದೇ ವಾರದಲ್ಲಿ ರಾಜ್ಯಕ್ಕೆ ಹೊಸ ಸಿಎಂ ಹೆಸರು ಘೋಷಣೆಯಾಗುವ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಪ್ರಧಾನಿ ಮೋದಿ ಅವರೇ ಹೊಸ ಸಿಎಂ ಹೆಸರನ್ನು ಘೋಷಿಸಲಿದ್ದಾರೆಂದು ಹೇಳಲಾಗುತ್ತಿದೆಯಾದರೂ ಹೊಸ ಸಿಎಂ ಯಾರು ಎನ್ನುವ ಸುಳಿವು ಮಾತ್ರ ಇನ್ನು ಸಿಕ್ಕಿಲ್ಲ.
ಬಿಜೆಪಿ ಪಕ್ಷದ ನೀತಿ ಸಂಹಿತೆ ಪ್ರಕಾರ 75 ವರ್ಷ ಮೇಲ್ಪಟ್ಟವರು ಸಿಎಮ ಆಗುವಂತಿಲ್ಲ. ಆದರೆ ಯಡಿಯೂರಪ್ಪನವರಿಗೀಗ 79 ವರ್ಷ ವಯಸ್ಸು. ಆದರೂ ಬಿಜೆಪಿ ಪಕ್ಷ ಕಟ್ಟಲು ಅವರು ಪಟ್ಟ ಶ್ರಮದ ಆಧಾರದ ಮೇಲೆ ಅವರ ಸಿಎಂ ಖುರ್ಚಿ ಇನ್ನೂ ಗಟ್ಟಿಯಾಗಿದೆ.
ಅಷ್ಟಕ್ಕೂ ಅವರನ್ನು ಸಿಎಂ ಖುರ್ಚಿಯಿಂದ ಕೆಳಗಿಳಿಸಲು ಕೇವಲ ವಯೋಸಹಜ ಸಮಸ್ಯೆ ಮಾತ್ರ ಕಾರಣವಲ್ಲ. ಬದಲಾಗಿ ಆಡಳಿತದಲ್ಲಿ ಪುತ್ರನ ಹಸ್ತಕ್ಷೇಪ, ಮಂತ್ರಿ ಮಂಡಲದ ಅಸಮರ್ಥ ಆಡಳಿತ, ಭ್ರಷ್ಟಾಚಾರ ಆರೋಪ, ಎಲ್ಲದಕ್ಕೂ ಮಿಗಿಲಾಗಿ ಬಿಎಸ್ ವೈ ಅವರಲ್ಲಿದ್ದ ಸಾಮಾಜಿಕ ಕಳಕಳಿ ಸತ್ತುಹೋದ ಪರಿಣಾಮ ಅನಿವಾರ್ಯವಾಗಿ ಅವಧಿ ಪೂರೈಸುವ ಮೊದಲೇ ಅವರನ್ನು ಸಿಎಂ ಖುರ್ಚಿಯಿಂದ ಕೆಳಗಿಳಿಸುವ ಪ್ರಯತ್ನಗಳು ನಡೆಯುತ್ತಿದೆ.
ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ರೈತರ ಹಸಿರು ಶಾಲು ಹಾಕಿಕೊಂಡು ತಾವು ರೈತರ ಪರವಾಗಿರುವುದಾಗಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರ ದುರಾದೃಷ್ಟವೋ ಏನೋ ಆಗಲೇ ಪ್ರವಾಹಕ್ಕೆ ರಾಜ್ಯದ ಹಲವಾರು ಜಿಲ್ಲೆಗಳು ಸಿಲುಕಿ ಸಂಕಷ್ಟ ಎದುರಾದವು. ರೈತರ ಹೋರಾಟಗಳು ನಡೆದವು, ಕೊರೊನಾ ಹಾವಳಿ ಇವೆಲ್ಲವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಡಿಯೂರಪ್ಪ ಎಡವಿದರು.
ಈ ಎಲ್ಲಾ ಕಾರಣಗಳಿಂದಲೂ ಸಿಎಂ ತಾವು ಅಧಿಕಾರದಿಂದ ಕೆಲಗಿಳಿಯುವ ಸಾಧ್ಯತೆಗಳು ಹೆಚ್ಚಾಗಿದ್ದು. ಇದಕ್ಕೆ ಯಡಿಯೂರಪ್ಪನವರೂ ಒಪ್ಪಿಗೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ಪ್ರಹ್ಲಾದ್ ಜೋಶಿ, ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ, ಸಿಡಿ ರವಿ, ಮುರುಗೇಶ್ ನಿರಾಣಿ ಸಿಎಂ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೈಕಮಾಂಡ್ ಯಾರ ಹೆಸರು ಘೋಷಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.