50,000 ರೂ ಪಡೆದು, ಆರೋಪಿಗಳಿಗೆ ಶೂನಿಂದ ಹೊಡೆದು ಪ್ರಕರಣ ಇತ್ಯರ್ಥ ಮಾಡಿಕೊಳ್ಳಿ: ಅತ್ಯಾಚಾರ ಸಂತ್ರಸ್ತೆಗೆ ಪಂಚಾಯತ್ ಸೂಚನೆ!
ಅತ್ಯಾಚಾರ ಎಸಗಿದ್ದ ಆರೋಪಿಯಿಂದ 50,000 ರೂ ಪಡೆದು, ಆತನ ಕಪಾಳಕ್ಕೆ ಬೂಟಿನಿಂದ ಐದು ಬಾರಿ ಹೊಡೆದು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಗ್ರಾಮ ಪಂಚಾಯತಿಯು ಅತ್ಯಾಚಾರ ಸಂತ್ರಸ್ತೆಗೆ ಹೇಳಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕೋತಿಭರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆಯ ಕುಟುಂಬವು ಪಂಚಾಯತ್ನ ನಿರ್ಧಾರವನ್ನು ನಿರಾಕರಿಸಿದ್ದು, ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಚಾಯತ್ನ ನಿರ್ಧಾರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ, ಸಿಆರ್ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ಪಡೆದುಕೊಂಡು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಪೊಲೀಸರಿಗೆ ಮಹಾರಾಜ್ಗಂಜ್ನ ಎಸ್ಪಿ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಜೂನ್ 23ರಂದು ಕೋತಿಭರ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದ ನಿವಾಸಿಯಾದ ಬಾಲಕಿಯ ಮೇಲೆ ಅದೇ ಗ್ರಾಮದ ಯುವಕರು ಅತ್ಯಾಚಾರ ಎಸಗಿದ್ದರು. ಈ ಬಗ್ಗೆ ಬಾಲಕಿಯ ತಾಯಿ ಪಂಚಾಯತಿಗೆ ದೂರು ನೀಡಿದ್ದರು. ಆರೋಪಿಗಳಿಂದ 50,000 ರೂ.ಗಳನ್ನು ತೆಗೆದುಕೊಂಡು, ಅವರ ಕಪಾಳಕ್ಕೆ ಬೂಟಿನಿಂದ ಐದು ಬಾರಿ ಹೊಡೆದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪಂಚಾಯತ್ ಸದಸ್ಯರು ಸೂಚನೆ ನೀಡಿದ್ದರು.
ಇದನ್ನೂ ಓದಿ: ಜುಲೈ 31 ರವರೆಗೆ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಯೋಜನೆ ಜಾರಿಗೆ ತರಲು ಸುಪ್ರೀಂ ಆದೇಶ!
ಆದರೆ, ಬಾಲಕಿಯ ಕುಟುಂಬ ಈ ನಿರ್ಧಾರವನ್ನು ನಿರಾಕರಿಸಿ, ಜೂನ್ 24 ರಂದು ಕೋತಿಭಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು. ಕುಟುಂಬದ ದೂರಿನ ಮೇರೆಗೆ, ಆರೋಪಿಗಳ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಪೋಕ್ಸೊ ಕಾಯ್ದೆಯ ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಕುಟುಂಬವು ಪಂಚಾಯತ್ ನಿರ್ಧಾರವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿತು, ಇದರ ಬೆನ್ನಲ್ಲೇ ಮಹಾರಾಜ್ ಗಂಜ್ ಎಸ್ಪಿ ಪ್ರದೀಪ್ ಗುಪ್ತಾ ಮಂಗಳವಾರ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಸಿಆರ್ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
“ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿದೆ ಎಂದು ವರದಿಯಾದರೆ, ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಮತ್ತು ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು” ಎಂದು ಗುಪ್ತಾ ತಿಳಿಸಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಕ್ಲಾಸ್: 12 ಮಾವಿನ ಹಣ್ಣುಗಳನ್ನು 1.2 ಲಕ್ಷಕ್ಕೆ ಮಾರಾಟ ಮಾಡಿದ ಬಾಲಕಿ!