ಮಾಮೂಲಿ ಕೊಡದ ಕಾರಣಕ್ಕೆ ಬೀದಿ ವ್ಯಾಪಾರಿ ಮೇಲೆ ಗಾಂಜಾ ಕೇಸ್; ನಾಲ್ವರು ಪೊಲೀಸರ ಅಮಾನತು!
ಮಾಮೂಲಿ ಕೊಡಲಿಲ್ಲ ಎಂಬ ಕಾರಣಕ್ಕೆ ಕಡಲೆಕಾಯಿ, ತರಕಾರಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿ ಮೇಲೆ ಗಾಂಜಾ ಸೇವಿಸಿದ್ದಾರೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದ ಘಟನೆ ಬೆಂಗಳೂರಿನ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣಾ ಮಹಿಳಾ ಇನ್ಸ್ಪೆಕ್ಟರ್ ಮತ್ತು ಮೂವರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
ಮಾಮೂಲಿ ಕೊಡದ ಕಾರಣಕ್ಕೆ ಬೀದಿ ಬದಿ ವ್ಯಾಪಾರಿ ಶಿವರಾಜ್ ಎಂಬಾತನ ಮೇಲೆ ಗಾಂಜಾ ಸೇವಿಸಿದ್ದ ಆರೋಪ ಮಾಡಿ, ಸುಳ್ಳು ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ, ಆತನಿಗೆ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಹೇಳಲಾಗಿದ್ದು, ಆತ ಆತ್ಮಹತ್ಯೆಗೆ ಯತ್ನಿಸಿದ್ದ. ಇದಾದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಡಿಸಿಪಿಗೆ ಪ್ರಕರಣದ ವರದಿ ನೀಡುವಂತೆ ಸೂಚಿಸಲಾಗಿತ್ತು.
ಪ್ರಕರಣದ ತನಿಖೆಯನ್ನು ಯಶವಂತಪುರ ಉಪವಿಭಾಗದ ಎಸಿಪಿ ಮತ್ತು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ನಡೆಸಿದ್ದರು. ತನಿಖೆ ವೇಳೆ ಪಿಎಸ್ಐ ಆಂಜಿನಪ್ಪ ಡಿಸಿಪಿ ಅವರ ವಾಯ್ಸ್ ರೆಕಾರ್ಡ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಅವರು ಸಲ್ಲಿಸಿದ ವರದಿ ಆಧಾರದ ಮೇಲೆ ಆರ್ಎಂಸಿ ಯಾರ್ಡ್ ಠಾಣೆಯ ಇನ್ಸ್ಪೆಕ್ಟರ್ ಪಾರ್ವತಮ್ಮ ಮತ್ತು ಸಬ್ ಇನ್ಸ್ಪೆಕ್ಟರ್ ಆಂಜಿನಪ್ಪ ಹಾಗೂ ಇತ್ತಿಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಸಂಸತ್ ಅಧಿವೇಶನ: ಕೃಷಿ ಕಾಯ್ದೆಗಳ ವಿರುದ್ದ ಜಂತರ್ ಮಂತರ್ನಲ್ಲಿ ರೈತರ ಪ್ರತಿಭಟನೆ; ವಿಪಕ್ಷಗಳ ಬೆಂಬಲ!
ಆರ್ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಬೀದಿ ಬದಿ ತರಕಾರಿ, ಸೊಪ್ಪು ಮಾರುವ ಶಿವರಾಜ್ ಕಳೆದ ಶನಿವಾರ ರಾತ್ರಿ ಸ್ನೇಹಿತರ ಜತೆ ಮನೆ ಮುಂದೆ ಕುಳಿತಿದ್ದರು. ಈ ವೇಳೆ ರಾತ್ರಿ ಪಾಳಿಯ ಗಸ್ತಿನಲ್ಲಿದ್ದ ಇನ್ಸ್ಪೆಕ್ಟರ್ ಪಾರ್ವತಮ್ಮ ಶಿವರಾಜ್ ಸೇರಿ ಇಬ್ಬರನ್ನು ಗಾಂಜಾ ಸೇವನೆ ಮಾಡುತ್ತಿದ್ದರು ಎಂದು ಅರೋಪಿಸಿ ಠಾಣೆಗೆ ಕರೆತಂದಿದ್ದಾರೆ.
ಠಾಣೆಗೆ ಕರೆತಂದ ಬಳಿಕ ಶಿವರಾಜ್ ಸ್ನೇಹಿತರ ಮೇಲೆ ಯಾವುದೇ ಸಣ್ಣ ಪ್ರಕರಣ ದಾಖಲಿಸಿದ ಪಿಎಸ್ಐ ಅಂಜಿನಪ್ಪ ಅವರು ಶಿವರಾಜ್ ಅವರಿಗೆ ಗಾಂಜಾ ತುಂಬಿದ ಸಿಗರೇಟ್ ಸೇದುವಂತೆ ಒತ್ತಾಯಿಸಿದ್ದಾರೆ. ನಂತರ, ಆತ ಗಾಂಜಾ ಸೇವನೆ ಮಾಡಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ದಂಡ ವಿಧಿಸಿ ಮನೆಗೆ ಕಳುಹಿಸಿದ್ದಾರೆ.
ಇದರಿಂದ ಮನನೊಂದ ಶಿವರಾಜ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿ, ಚಿಕಿತ್ಸೆ ನಂತರ ಆತ ಗುಣಮುಖನಾಗಿ ಮನೆಗೆ ಮರಳಿದ್ದಾರೆ. ಬಳಕ ವಿಡಿಯೋ ಮಾಡಿ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಆತ ಹೇಳಿಕೊಂಡಿದ್ದಾರೆ.
ವಿಡಿಯೋ ವೈರಲ್ ಆದ ಬಳಿಕ ಮಾಧ್ಯಮಗಳು ಈ ಬಗ್ಗೆ ಸುದ್ದಿಮಾಡಿವೆ. ನಂತರ ತನಿಖೆಗೆ ಆದೇಶಿಸಿದ್ದ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ನಾಲ್ವರನ್ನು ಪೊಲೀಸರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಭಾರೀ ಮಳೆ: ಮಾರ್ಗ ಮಧ್ಯೆಯೇ ನಿಂತಿವೆ ಕೊಂಕಣ ರೈಲುಗಳು; 6,000 ಪ್ರಯಾಣಿಕರು ರೈಲಿನಲ್ಲೇ ಬಂಧಿ!