ಬೇಡಿಕೆ ಈಡೇರುವವರೆಗೂ ಜಿಎಸ್‌ಟಿ ಪಾವತಿಸಬೇಡಿ; ಪ್ರಧಾನಿ ಮೋದಿ ಸಹೋದರ ಕರೆ!

ವರ್ತಕರ ಬೇಡಿಕೆಗಳು ಈಡೇರುವವರೆಗೂ ಸರ್ಕಾರಕ್ಕೆ ಜಿಎಸ್‌ಟಿ ಪಾವತಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್‌ ಮೋದಿ ಹೇಳಿದ್ದಾರೆ.

ಅಖಿಲ ಭಾರತ ನ್ಯಾಯಯುತ ಬೆಲೆ ಅಂಗಡಿಗಳ ಅಸೋಷಿಯೇಷನ್ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಪ್ರಹ್ಲಾದ್‌ ಮೋದಿ, ನಮ್ಮ ಹಕ್ಕೊತ್ತಾಯಗಳು ಈಡೇರುವವರೆಗೂ ಸರ್ಕಾರಕ್ಕೆ ಜಿಎಸ್‌ಟಿ ಪಾವತಿಸುವುದು ಬೇಕು ಎಂದು ತಮ್ಮ ವರ್ತಕರಿಗೆ ಕರೆ ನೀಡಿದ್ದಾರೆ.

ಹಲವು ಹಕ್ಕೊತ್ತಾಯಗಳನ್ನಿಟ್ಟುಕೊಂಡು ವರ್ತಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಕುರಿತು ಮಾತನಾಡಿರುವ ಪ್ರಹ್ಲಾದ್‌ ಮೋದಿ, ನಮ್ಮ ಕೂಗು ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ತಲುಪಬೇಕು. ಉದ್ಧವ್‌ ಠಾಕ್ರೆ ಮತ್ತು ನರೇಂದ್ರ ಮೋದಿಯವರು ಬರುವವರೆಗೂ ಹೋರಾಟ ನಿಲ್ಲಿಸಬೇಡಿ ಎಂದು ವರ್ತರಿಗೆ ತಿಳಿಸಿದ್ದಾರೆ.

ನಾನು ದೇಶದ ಆರೂವರೆ ಲಕ್ಷ ನ್ಯಾಯಯುತ ಅಂಗಡಿಗಳ ವರ್ತಕರನ್ನು ಪ್ರತಿನಿಧಿಸುತ್ತೇನೆ. ನಮ್ಮ ಹಕ್ಕೊತ್ತಾಯಗಳು ಈಡೇರುವವರೆಗೂ ಜಿಎಸ್‌ಟಿ ಪಾವತಿಸಬೇಡಿ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ನರೇಂದ್ರ ಮೋದಿ ಇರಲಿ ಅಥವಾ ಮತ್ಯಾರೇ ಇರಲಿ, ನಿಮ್ಮ ಮಾತನ್ನು ಅವರು ಕೇಳಲೇಬೇಕು. ನೀವು ಇಂದಿನಿಂದ ಜಿಎಸ್‌ಟಿ ಪಾವತಿಸುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಯವರಿಗೆ ಬರೆಯಿರಿ. ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿದ್ದೇವೆಯೇ ಹೊರತು ಗುಲಾಮಿ ವ್ಯವಸ್ಥೆಯಲ್ಲಿ ಅಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ವರ್ತಕರು ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದಾಗಿ ನಷ್ಟ ಅನುಭವಿಸಿದ್ದು ಸೂಕ್ತ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಇ-ಕಾಮರ್ಸ್ ಮಳಿಗೆಗಳು ಮಾತ್ರ ಕೆಲಸ ನಿರ್ವಹಿಸಿ ಲಾಭ ಮಾಡಿಕೊಂಡಿವೆ. ಆದರೆ ಉಳಿದ ವರ್ತಕರು ನಷ್ಟದಲ್ಲಿದ್ದಾರೆ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ಯೋಗಿ ನಿಮ್ಮ ಚರ್ಮ ಸುಲಿದು ಗೋಡೆಗೆ ಅಂಟಿಸುತ್ತಾರೆ; ಬಿಜೆಪಿಯಿಂದ ರೈತರಿಗೆ ಬಹಿರಂಗ ಬೆದರಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights