ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ : ಸಿಲಿಂಡರ್ ಸ್ಪೋಟಗೊಂಡು ಮೂವರು ಬಲಿ!
ಬೆಂಗಳೂರಿನಲ್ಲಿ ಮತ್ತೊಂದು ಘನಘೋರ ದುರಂತ ಸಂಭವಿಸಿದೆ. ಸಿಲಿಂಡರ್ ಸ್ಪೋಟಗೊಂಡಿದ್ದು ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಚಾಮರಾಜಪೇಟೆ ರಾಯನ್ ಸರ್ಕಲ್ ನ ನ್ಯೂ ತರಗುಪೇಟೆಯಲ್ಲಿ ಈ ಘಟನೆ ನಡೆದಿದೆ. ಇದು ಕಮರ್ಷಿಯಲ್ ನಗರವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಇರುವ ಪ್ರದೇಶ ಇದಾಗಿದೆ. ಬ್ಲಾಸ್ಟ್ ಆದ ತೀವ್ರತೆಗೆ ಮೃತ ದೇಹಗಳು ಛಿದ್ರ ಛಿದ್ರವಾಗಿವೆ. ಇದು ಸಿಲಿಂಡರ್ ಸ್ಪೋಟವೋ? ಅಥವಾ ಪಕ್ಕದಲ್ಲಿದ್ದ ಪಟಾಕಿ ಅಂಗಡಿ ಸ್ಪೋಟಗೊಂಡಿದಿಯೋ? ಅಥವಾ ಬೇರೆಯದ್ದೇ ಕಾರಣವೋ ಅನ್ನೋದು ಸ್ಪಷ್ಟವಾಗಿಲ್ಲ.
ಸ್ಪೋಟಗೊಂಡ ಸ್ಥಳದ ಒಳಗಡೆ ಪ್ರವೇಶ ಮಾಡಲು ಸಾಧ್ಯವಾಗದಷ್ಟು ತೀವ್ರವಾಗಿ ಬೆಂಕಿ ಹರಡಿದೆ. ಪೊಲೀಸರು, ಸ್ಥಳಿಯರು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪಕ್ಕದಲ್ಲಿ ಅಂಗಡಿಗಳು ಇರುವುದರಿಂದ ಬೆಂಕಿ ಹಬ್ಬುವ ಸಾಧ್ಯತೆ ಇದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿ ಶಾಮಕ ದಳ ಪ್ರಯತ್ನ ನಡೆಸುತ್ತಿದೆ.
ಘಟನಾ ಸ್ಥಳದಲ್ಲಿ ಬೈಕ್ ಗಳು ಪಲ್ಟಿಯಾಗಿವೆ. 10ಕ್ಕೂ ಹೆಚ್ಚು ಬೈಕ್ ಗಳು ಸುಟ್ಟು ಕರಕಲಾಗಿವೆ. ವಸ್ತುಗಳು ಮೀಟರ್ ನಷ್ಟು ದೂರದಲ್ಲಿ ಹಾರಿ ಹೋಗಿವೆ. ಸ್ಪೋಟದ ತೀವ್ರತೆಗೆ ಜನ ಭಯಭೀತರಾಗಿದ್ದಾರೆ.